ಗೃಹ ಲಕ್ಷ್ಮೀ 20ನೇ ಕಂತು ಶೀಘ್ರ ಜಮೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭರವಸೆ

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದು ನಮ್ಮ ತತ್ವ. ಮಹಿಳೆಯರ ಸಬಲೀಕರಣ ಗುರಿ ಇಟ್ಟುಕೊಂಡು ಹಲವಾರು ಯೋಜನೆ ತಂದಿದ್ದೇವೆ. ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.;

Update: 2025-06-03 14:35 GMT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾತನಾಡಿದರು.

ಗೃಹ ಲಕ್ಷ್ಮೀ ಯೋಜನೆಯ 19 ಕಂತುಗಳ ಹಣವನ್ನು ಈಗಾಗಲೇ ಫಲಾನುಭವಿಗಳಿಗೆ ನೀಡಲಾಗಿದ್ದು, 20ನೇ ಕಂತಿನ ಹಣವನ್ನು ಶೀಘ್ರದಲ್ಲೇ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಉಂಟಾದ ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಏಪ್ರಿಲ್ ತಿಂಗಳ ಹಣ ಜಮೆಯಲ್ಲಿ ವಿಳಂಬವಾಗಿದ್ದು, ಅದನ್ನು ಶೀಘ್ರವೇ ಸರಿಪಡಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

"ನಾವು ಅಧಿಕಾರಕ್ಕೆ ಬಂದ ತಕ್ಷಣ ಸಂವಿಧಾನ ಪೀಠ ಓದು ಜಾರಿಗೆ ತಂದಿದ್ದೇವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದು ನಮ್ಮ ತತ್ವ. ಮಹಿಳೆಯರ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಹಲವಾರು ಯೋಜನೆಗಳನ್ನು ತಂದಿದ್ದೇವೆ. ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿದ್ದೇವೆ," ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಶ್ರೇಯ: ಶೆಟ್ಟರ್‌ಗೆ ಸವಾಲು

ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದಿರುವ ಶ್ರೇಯ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಸಲ್ಲಬೇಕೇ ವಿನಃ ಸಂಸದ ಜಗದೀಶ ಶೆಟ್ಟರ್‌ಗೆ ಅಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. "ಅವರು ಮುಖ್ಯಮಂತ್ರಿಯಾಗಿದ್ದವರು, ಅವರಿಗೆ ಸಾಮಾನ್ಯ ಜ್ಞಾನವಾದರೂ ಬೇಕು. ಸಂಸದರಾದ ತಕ್ಷಣ ಪತ್ರ ಕೊಟ್ಟುಬಿಟ್ಟರೆ ನೂರಾರು ಕೋಟಿ ರೂ. ಕೊಟ್ಟುಬಿಡುತ್ತಾರಾ? ಮುಖ್ಯಮಂತ್ರಿಗಳಾಗಿದ್ದವರಿಗೆ ಈ ಕುರಿತು ಜ್ಞಾನವಿರಬೇಕು. ಅವರು ಸಂಸದರಿದ್ದಾರೆ, ತಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಕೇಳಿದರೆ ಒಪ್ಪೋಣ, ಅದು ಬಿಟ್ಟು ನಾನು ಅನುದಾನ ತಂದಿದ್ದೇನೆ ಎಂದರೆ ಹೇಗೆ?" ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಸಾಕಷ್ಟು ದೇವಸ್ಥಾನಗಳಿದ್ದು, ಅಲ್ಲಿಯೂ ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಎಚ್.ಕೆ. ಪಾಟೀಲರ ಮನೆ ದೇವರು ಸವದತ್ತಿ. ಅವರು ಸವದತ್ತಿ ಅಭಿವೃದ್ಧಿಗೆ ಯೋಜನೆ ರೂಪಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನದಿಂದ ಅನುದಾನ ಬಂದಿದೆ. ಅದರ ಸಂಪೂರ್ಣ ಶ್ರೇಯಸ್ಸು ಎಚ್.ಕೆ. ಪಾಟೀಲ ಅವರಿಗೆ ಸಲ್ಲಬೇಕೇ ವಿನಃ ಸಂಸದ ಜಗದೀಶ್ ಶೆಟ್ಟರ್‌ಗೆ ಅಲ್ಲ ಎಂದು ಹೆಬ್ಬಾಳ್ಕರ್ ಪುನರುಚ್ಚರಿಸಿದರು.

ಮೃಣಾಲ ಸಕ್ಕರೆ ಕಾರ್ಖಾನೆಗೆ ಹಿಡಕಲ್ ನೀರು ಯೋಜನೆಗೂ ಸಂಬಂಧವಿಲ್ಲ

ಹಿಡಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯುವ ಯೋಜನೆಗೂ ತಮ್ಮ ಮೃಣಾಲ ಸಕ್ಕರೆ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. "ಬೆಳಗಾವಿಗೆ ಏನೇ ಕೆಟ್ಟದಾದರೂ ನನ್ನ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಡಕಲ್ ಜಲಾಶಯದಿಂದ ನೀರು ಯಾರು ಒಯ್ಯುತ್ತಿದ್ದಾರೆ? ಏಕೆ ಒಯ್ಯುತ್ತಿದ್ದಾರೆ? ನನಗೆ ಗೊತ್ತಿಲ್ಲ. ಇದಕ್ಕೆ ನಮ್ಮ ಹೆಸರನ್ನು ತಳುಕು ಹಾಕುವುದನ್ನು ಕೇಳಿ ನನಗೆ ಆಶ್ಚರ್ಯ ಮತ್ತು ಅನುಮಾನ ಹುಟ್ಟಿದೆ. ನಮ್ಮ ಸಕ್ಕರೆ ಕಾರ್ಖಾನೆಗೆ ಈ ನೀರು ಅಗತ್ಯವಿಲ್ಲ. ನಮಗೆ ಹತ್ತಿರದಲ್ಲಿ ಹಳ್ಳವಿದೆ, ಬೇಕಾದಷ್ಟು ಕೊಳವೆ ಬಾವಿಗಳಿವೆ ಅಲ್ಲಿ ಸಾಕಷ್ಟು ನೀರು ಬಂದಿದೆ. ನಮಗೆ ಬೇರೆ ನೀರು ಬೇಕಾಗಿಲ್ಲ. ಈ ಯೋಜನೆ ಯಾವಾಗ ಜಾರಿಗೆ ಬಂದಿದೆ, ಯಾರು ರೂಪಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ನನಗಂತೂ ಸಂಬಂಧವೇ ಇಲ್ಲ," ಎಂದು ಅವರು ವಿವರಿಸಿದರು.

ಬೆಳಗಾವಿ ಜನರ ಭಾವನೆಗಳಿಗೆ ವಿರುದ್ಧವಾಗಿ ತಾನು ಯಾವತ್ತೂ ನಡೆದುಕೊಳ್ಳುವುದಿಲ್ಲ ಎಂದು ಸಚಿವೆ ಭರವಸೆ ನೀಡಿದರು. ಹಿಡಕಲ್ ಜಲಾಶಯದ ನೀರನ್ನು ಧಾರವಾಡಕ್ಕೆ ಒಯ್ಯುವ ಯೋಜನೆ ಸಚಿವ ಸಂಪುಟದ ಮುಂದೆ ಬಂದೂ ಇಲ್ಲ. "ಇದು ಯಾವ ಕಾಲದಲ್ಲಿ ಮಂಜೂರಾಗಿದೆ ಎನ್ನುವುದೂ ಗೊತ್ತಿಲ್ಲ. ನಾವಂತೂ ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಯನ್ನೂ ಕೊಟ್ಟಿದ್ದಾರೆ. ನಾನೂ ಅವರೊಂದಿಗೆ ಚರ್ಚಿಸುತ್ತೇನೆ," ಎಂದು ತಿಳಿಸಿದರು.

ಕಮಲ್ ಹಾಸನ್ ಕ್ಷಮೆ ಕೇಳಲಿ

ಕನ್ನಡದ ಕುರಿತು ತಪ್ಪು ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರೆ ವಿವಾದ ಮುಗಿಯುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು. "ಕನ್ನಡಿಗರು ಹೃದಯವಂತರು ಕ್ಷಮಿಸುತ್ತಾರೆ. ಹಿರಿಯರಾದ ಅವರು ಕ್ಷಮೆ ಕೇಳಿ ವಿವಾದವನ್ನು ಮುಗಿಸಬೇಕು. ಅನಗತ್ಯವಾಗಿ ಮುಂದುವರಿಸಬಾರದು," ಎಂದು ಹೇಳಿದರು.

ಮಹದಾಯಿ ಯೋಜನೆ ಬಗ್ಗೆ ಮಾತನಾಡಿದ ಅವರು, "ಬಹಳ ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಇದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಬಾರದು ಎಂದು ವಿನಂತಿಸುತ್ತೇನೆ. ಜನರ ಹಾಗೂ ಜಾನುವಾರುಗಳ ಜೀವದ ಪ್ರಶ್ನೆ ಇದರಲ್ಲಿದೆ. ದಯಮಾಡಿ ಅಡ್ಡಿಪಡಿಸಬೇಡಿ," ಎಂದು ಮನವಿ ಮಾಡಿದರು.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಜೀವನದಲ್ಲಿ ಒಳ್ಳೆಯದಾಗಲಿ, ಅವರಿಗೆ ಅನುಕೂಲವಾಗಲಿ ಎನ್ನುವ ನೀತಿ, ಸಿದ್ಧಾಂತದಿಂದ ಆಡಳಿತ ನಡೆಸುತ್ತಿದೆ. "ನಾವು ಚುನಾವಣೆಗೆ ಮುನ್ನ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಹಾಗಾಗಿ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ಭರವಸೆ ಇದೆ," ಎಂದರು. ಸಂಪುಟ ವಿಸ್ತರಣೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ. "ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧಳಾಗಿ ನಡೆದುಕೊಳ್ಳುವವಳು ಹಾಗೂ ಶಿಸ್ತು ಪಾಲಿಸುವವಳು," ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. 

Tags:    

Similar News