Male Mahadeshwara Hills | ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ದಿನಾಂಕ ನಿಗದಿ
ಬೆಟ್ಟದ ದೇಗುಲದಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ದೇವಾಲಯದ ಅಧಿಕಾರಿಗಳು ಜನರಿಗಿಂತ ಗುತ್ತಿಗೆದಾರರು ಮತ್ತು ಉದ್ಯಮಿಗಳ ಹಿತಾಸಕ್ತಿಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಎಂದು ಭಕ್ತರಿಂದ ಆರೋಪಗಳು ಕೇಳಿಬರುತ್ತಿರುತ್ತವೆ.;
ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ (ಎಂಎಂ) ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಸಚಿವ ಸಂಪುಟ ಸಭೆಯ ದಿನಾಂಕ ನಿಗದಿಯಾಗಿದ್ದು, ಫೆ.17 ಕ್ಕೆ ಸಂಪುಟ ಸಭೆ ನಡೆಯಲಿದೆ.
ಈ ಕ್ಯಾಬಿನೆಟ್ ಮೀಟಿಂಗ್ ಗಡಿ ನಾಡ ಜನರಿಗೆ ಭಾರೀ ನಿರೀಕ್ಷೆ ಹುಟ್ಟಿಸಿದ್ದು ಚಾಮರಾಜನಗರದ ಸರ್ವಾಂಗೀಣ ಅಭಿವೃದ್ಧಿಗೆ ಈ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಹಿಂದುಳಿದ ಜಿಲ್ಲೆಯ ಜನತೆ ಎದುರುನೋಡುತ್ತಿದ್ದಾರೆ.
ಅಪಾರ ನೈಸರ್ಗಿಕ ಸಂಪತ್ತು ಹೊಂದಿರುವ ಗಡಿನಾಡು ಚಾಮರಾಜನಗರಕ್ಕೆ ಕಾಲಿಟ್ಟರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪಖ್ಯಾತಿಗೆ ಪಾತ್ರವಾಗಿದ್ದ ಜಿಲ್ಲೆ ಅಭಿವೃದ್ಧಿಯ ವಿಷಯದಲ್ಲಿಯೂ ಆಡಳಿತಗಾರರ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಮೇಲೆ 20ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಈ ಮೌಢ್ಯ ತೊಲಗಿಸುವ ಪ್ರಯತ್ನ ಕೂಡ ಪಟ್ಟಿದ್ದಾರೆ. ಅಪಶಕುನ ಎಂಬ ಮೌಢ್ಯದ ಹಣೆಪಟ್ಟಿ ಪಡೆದಿರುವ ಚಾಮರಾಜನಗರದ ಕಳಂಕ ಅಳಿಸಲು ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಮುಂದಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಮಹತ್ವ
ಮಲೆ ಮಹದೇಶ್ವರ ಬೆಟ್ಟ ಹಳೆಯ ಮೈಸೂರು ಪ್ರದೇಶದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಹುಣ್ಣಿಮೆ, ಅಮಾವಾಸ್ಯೆಯ ದಿನ ಮತ್ತು ಹಬ್ಬಗಳಂತಹ ವಿಶೇಷ ದಿನಗಳಲ್ಲಿ, ಲಕ್ಷಾಂತರ ಜನರು ದೇವಾಲಯಕ್ಕೆ ಭೇಟಿ ನೀಡಿ ನೀಡುತ್ತಾರೆ. ಕೇವಲ ಮೈಸೂರು ಮಾತ್ರವಲ್ಲದೆ, ರಾಮನಗರ, ಬೆಂಗಳೂರು, ಕೋಲಾರ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದಲೂ ಮತ್ತು ತಮಿಳುನಾಡಿನಿಂದಲೂ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.