ನಟ ಕಮಲ್‌ ಹಾಸನ್‌ ಹೇಳಿಕೆ ಹಾಲಿಗೆ ಹುಳಿ ಹಿಂಡಿದಂತೆ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ದೊಡ್ಡತನದಿಂದ ಕ್ಷಮೆ ಕೇಳಿದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಅವರು ಹಠ ಏಕೆ ಮಾಡುತ್ತಿದ್ದಾರೆ ತಿಳಿಯದು. ಕ್ಷಮೆ ಕೇಳಿದರೆ ತಪ್ಪೇನು ಆಗುವುದಿಲ್ಲ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.;

Update: 2025-06-02 11:37 GMT

ನಟ ಕಮಲ್‌ ಹಾಸನ್‌ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು 

ನಟ ಕಮಲ್ ಹಾಸನ್ ಅವರ ಹೇಳಿಕೆಯಿಂದ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಸಮಸ್ಯೆ ಹೆಚ್ಚಾಗುತ್ತದೆ. ಅವರು ಕ್ಷಮೆ ಕೇಳದಿದ್ದರೆ ಕನ್ನಡಿಗರು ಅವರ ಯಾವುದೇ ಸಿನಿಮಾ ನೋಡುವುದಿಲ್ಲ ಎಂದು ಕನ್ನಡ ಸಿನಿಮಾ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ. ಕನ್ನಡದ ಬಗ್ಗೆ ಅವರ ಹೇಳಿಕೆ "ಹಾಲಿಗೆ ನಿಂಬೆಹಣ್ಣು ಹಿಂಡಿದಂತಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ದಿ ಫೆಡರಲ್ ಕರ್ನಾಟಕ' ಜೊತೆ ಮಾತನಾಡಿದ ಅವರು, ಕಮಲ್ ಹಾಸನ್ ಹೇಳಿಕೆಯಿಂದ ಕನ್ನಡಿಗರೆಲ್ಲರಿಗೂ ನೋವಾಗಿದೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. "ದೊಡ್ಡತನದಿಂದ ಕ್ಷಮೆ ಕೇಳಿದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಅವರು ಹಠ ಏಕೆ ಮಾಡುತ್ತಿದ್ದಾರೆ ತಿಳಿಯದು. ಕ್ಷಮೆ ಕೇಳಿದರೆ ತಪ್ಪೇನು ಆಗುವುದಿಲ್ಲ. ಈ ಬಗ್ಗೆ ನಾನು ಕಮಲ್ ಹಾಸನ್‌ಗೆ ಸಂದೇಶ ಕಳಿಸಿದ್ದೆ, ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ" ಎಂದರು.

ಇತ್ತೀಚೆಗೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ನೀರಿನ ಹಂಚಿಕೆ ಸೇರಿದಂತೆ ಯಾವುದೇ ಸಮಸ್ಯೆ ಇರಲಿಲ್ಲ. "ನಾವು ಮೊದಲೆಲ್ಲಾ ಚೆನ್ನೈನಲ್ಲಿ ಸಿನಿಮಾ ಮಾಡುತ್ತಿದ್ದೆವು. ಎರಡೂ ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯವಿತ್ತು. ಇದೀಗ ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ. ಕನ್ನಡಿಗರು ಅವರ ಸಿನಿಮಾಗಳನ್ನು ನೋಡುವುದಿಲ್ಲ ಹಾಗೂ ಚಿತ್ರಮಂದಿರಗಳ ಮಾಲೀಕರೂ ಚಿತ್ರ ಪ್ರದರ್ಶನ ಮಾಡುವುದಿಲ್ಲ, ಎಲ್ಲರಿಗೂ ಸ್ವಾಭಿಮಾನವಿದೆ" ಎಂದು ತಿಳಿಸಿದರು.

"ಸಿನಿಮಾಗೆ ಯಾವುದೇ ಬೇಲಿ ಇಲ್ಲ. ಕನ್ನಡದ ಅನೇಕ ನಟ, ನಟಿಯರು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾರೆ. ಬೇರೆ ಭಾಷೆಗಳ ನಟ, ನಟಿಯರು ಕನ್ನಡದಲ್ಲಿ ನಟಿಸುತ್ತಾರೆ. ಆದರೆ ನಟ ಕಮಲ್ ಹಾಸನ್ ಅವರ ಹೇಳಿಕೆ ಹಾಲಿಗೆ ಹುಳಿ ಹಿಂಡಿದಂತಾಗಿದ್ದು ಎಲ್ಲರಿಗೂ ತೊಂದರೆಯಾಗಲಿದೆ" ಎಂದರು.

ಏನಿದು ವಿವಾದ?

ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಥಗ್‌ಲೈಫ್‌' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ, "ಕನ್ನಡ ತಮಿಳು ಭಾಷೆಯಿಂದ ಹುಟ್ಟಿದೆ" ಎಂದು ನಟ ಕಮಲ್ ಹಾಸನ್ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ವಿರುದ್ಧ ಕರ್ನಾಟಕದಲ್ಲಿ ಬಹಳ ಪ್ರತಿರೋಧ ವ್ಯಕ್ತವಾಗಿತ್ತು. ಕನ್ನಡ ಪರ ಹೋರಾಟಗಾರರು ಹಾಗೂ ಚಲನಚಿತ್ರದ ಹಲವು ನಟ, ನಟಿಯರು ಕಮಲ್ ಹಾಸನ್ ಕೂಡಲೇ ಕ್ಷಮೆ ಕೋರಬೇಕು ಎಂದಿದ್ದರು. ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಜೂನ್ 5 ರಂದು ಬಿಡುಗಡೆಯಾಗಬೇಕಿರುವ 'ಥಗ್‌ಲೈಫ್‌' ಸಿನಿಮಾಗೆ ನಿರ್ಬಂಧ ವಿಧಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷ ನರಸಿಂಹಲು ನಿರ್ಣಯ ಕೈಗೊಂಡಿದ್ದರು. ಆದರೆ, ಕಮಲ್ ಹಾಸನ್ ಕ್ಷಮೆ ಕೇಳುವುದಿಲ್ಲ ಎಂದಿದ್ದರು.

ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ತಮ್ಮ ಹೇಳಿಕೆಗೆ ಹೆಚ್ಚಿನ ಪ್ರತಿರೋಧ ವ್ಯಕ್ತವಾಗಿ, ಚಲನಚಿತ್ರ ಮಂದಿರಗಳ ಬಳಿ ಕನ್ನಡಪರ ಸಂಘಟನೆಗಳು ಸಿನಿಮಾ ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಟ ಕಮಲ್ ಹಾಸನ್ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಲು ಸರ್ಕಾರ ಹಾಗೂ ಪೊಲೀಸರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Tags:    

Similar News