ಆರ್ಸಿಬಿ ತಂಡದ ಮಾರಾಟಕ್ಕೆ ಡಿಯಾಜಿಯೋ ಚಿಂತನೆ; ತಂಡದ ಮೌಲ್ಯ 17,000 ಕೋಟಿ ರೂಪಾಯಿ!
ಆರ್ಸಿಬಿ ತಂಡವನ್ನು 2008ರ ಉದ್ಘಾಟನಾ ಹರಾಜಿನಲ್ಲಿ ವಿಜಯ್ ಮಲ್ಯ ಅವರು 111.6 ಮಿಲಿಯನ್ಗೆ ಡಾಲರ್ ರೂಪಾಯಿಗೆ ಖರೀದಿಸಿದ್ದರು. ಆ ಸಮಯದಲ್ಲಿ ಅವರು ಯುನೈಟೆಡ್ ಬ್ರಿವರೀಸ್ ಗ್ರೂಪ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ನ ಮಾಲೀಕರಾಗಿದ್ದರು.;
ಬ್ರಿಟಿಷ್ ಬಹುರಾಷ್ಟ್ರೀಯ ಪಾನೀಯ ಕಂಪನಿ ಡಿಯಾಜಿಯೋ ಪಿಎಲ್ಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ ಫ್ರಾಂಚೈಸಿಯ ಭಾಗಶಃ ಅಥವಾ ಸಂಪೂರ್ಣ ಮಾಲೀಕತ್ವವನ್ನು ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಡಿಯಾಜಿಯೋ ತನ್ನ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಆರ್ಸಿಬಿಯ ಮಾಲೀಕತ್ವವನ್ನು ಹೊಂದಿದೆ.
ಆರ್ಸಿಬಿ ತಂಡವನ್ನು 2008ರ ಉದ್ಘಾಟನಾ ಹರಾಜಿನಲ್ಲಿ ವಿಜಯ್ ಮಲ್ಯ ಅವರು 111.6 ಮಿಲಿಯನ್ಗೆ ಡಾಲರ್ ರೂಪಾಯಿಗೆ ಖರೀದಿಸಿದ್ದರು. ಆ ಸಮಯದಲ್ಲಿ ಅವರು ಯುನೈಟೆಡ್ ಬ್ರಿವರೀಸ್ ಗ್ರೂಪ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ನ ಮಾಲೀಕರಾಗಿದ್ದರು. ಆದರೆ, ಆರ್ಥಿಕ ತೊಂದರೆಗಳಿಂದಾಗಿ ಮಲ್ಯ ಅವರು ತಂಡದ ನಿಯಂತ್ರಣವನ್ನು ಕಳೆದುಕೊಂಡರು. 2016ರಲ್ಲಿ ಡಿಯಾಜಿಯೋ ಕಂಪನಿಯು ಮಲ್ಯ ಅವರ ಸ್ಪಿರಿಟ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಆರ್ಸಿಬಿಯ ಮಾಲೀಕತ್ವ ಪಡೆಯಿತು.
ತಂಡದ ಅಂದಾಜು ಮೌಲ್ಯ 17,000 ಕೋಟಿ ರೂಪಾಯಿ
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಡಿಯಾಜಿಯೋ ಸಂಭಾವ್ಯ ಸಲಹೆಗಾರರೊಂದಿಗೆ ಈಗಾಗಲೇ ಚರ್ಚೆಗಳನ್ನು ಆರಂಭಿಸಿದ್ದು, ಷೇರುಗಳ ಭಾಗಶಃ ಅಥವಾ ಸಂಪೂರ್ಣ ಮಾರಾಟ ಸೇರಿದಂತೆ ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಆರ್ಸಿಬಿಯ ಮೌಲ್ಯವನ್ನು ಸುಮಾರು $2 ಬಿಲಿಯನ್ (ಅಂದಾಜು ₹17,000 ಕೋಟಿ) ಎಂದು ಅಂದಾಜಿಸಲಾಗಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಚರ್ಚೆಗಳು ಪ್ರಾಥಮಿಕ ಹಂತದಲ್ಲಿರುವುದರಿಂದ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಷೇರು ಬೆಲೆಯಲ್ಲಿ ಏರಿಕೆ:
ಈ ಸಂಭಾವ್ಯ ಮಾರಾಟದ ಸುದ್ದಿಯು ಮಂಗಳವಾರ ಯುನೈಟೆಡ್ ಸ್ಪಿರಿಟ್ಸ್ನ ಷೇರು ಬೆಲೆಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ. ಬಿಎಸ್ಇಯಲ್ಲಿ ಕಂಪನಿಯ ಷೇರು ಬೆಲೆ ಶೇ. 3.3ರಷ್ಟು ಏರಿಕೆ ಕಂಡಿದೆ.
ಭಾರತ ಸರ್ಕಾರವು ಐಪಿಎಲ್ನಲ್ಲಿ ತಂಬಾಕು ಮತ್ತು ಮದ್ಯ ಬ್ರಾಂಡ್ಗಳ ಪ್ರಚಾರವನ್ನು ನಿರ್ಬಂಧಿಸುವ ಪ್ರಯತ್ನದಲ್ಲಿದೆ. ನೇರ ಜಾಹೀರಾತುಗಳನ್ನು ನಿಷೇಧಿಸಿದರೂ, ಡಿಯಾಜಿಯೋನಂತಹ ಕಂಪನಿಗಳು ಪರ್ಯಾಯ ಉತ್ಪನ್ನಗಳಾದ ಸೋಡಾಗಳ ಮಾರುಕಟ್ಟೆಗಾಗಿ ಪ್ರಸಿದ್ಧ ಕ್ರಿಕೆಟಿಗರನ್ನು ನೇಮಿಸಿಕೊಳ್ಳುವ ಮೂಲಕ "ಸರೋಗೇಟ್ ಅಡ್ವರ್ಟೈಸಿಂಗ್" (ಪರೋಕ್ಷ ಜಾಹೀರಾತು) ನಡೆಸುತ್ತಿವೆ. ಈ ನೀತಿಯು ಡಿಯಾಜಿಯೋದ ನಿರ್ಧಾರದ ಮೇಲೆ ಪರಿಣಾಮ ಬೀರಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಐಪಿಎಲ್ ತಂಡಗಳ ಹೆಚ್ಚುತ್ತಿರುವ ಮೌಲ್ಯ
ಐಪಿಎಲ್ ತಂಡಗಳ ಮೌಲ್ಯವು ನಿರಂತರವಾಗಿ ಏರುತ್ತಿರುವುದರಿಂದ ಅವು ಕ್ರೀಡಾ ಹೂಡಿಕೆಯಲ್ಲಿ ಆಕರ್ಷಕವಾಗಿವೆ. ಆರ್ಸಿಬಿಯ ಸಂಭಾವ್ಯ ಮಾರಾಟವು ಭವಿಷ್ಯದಲ್ಲಿ ಐಪಿಎಲ್ ತಂಡಗಳ ವಹಿವಾಟುಗಳಿಗೆ ಹೊಸ ಬೆಲೆ ಮಾನದಂಡವನ್ನು ನಿಗದಿಪಡಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಆರ್ಸಿಬಿಯ ಇತ್ತೀಚಿನ ವಿವಾದ
ಈ ವರ್ಷದ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಸಫಲವಾದ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ದುರಂತದಿಂದಾಗಿ ವಿವಾದಕ್ಕೆ ಸಿಲುಕಿದೆ. ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಜನರು ಗುಂಪುಗೂಡಿದ್ದ ಸಂದರ್ಭದಲ್ಲಿ ಉಂಟಾದ ಜನದಟ್ಟಣೆಯಲ್ಲಿ 11 ಜನರು ಸಾವನ್ನಪ್ಪಿ, 56 ಜನರು ಗಾಯಗೊಂಡಿದ್ದಾರೆ. ಈ ಘಟನೆಯು ತಂಡದ ಇಮೇಜ್ಗೆ ಧಕ್ಕೆ ತಂದಿದೆ.