ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: 26/11 ದಾಳಿ ಸ್ಮರಣೆಯಂದು ಅಮಿತ್ ಶಾ ಸಂದೇಶ

ತಮ್ಮ ಸಂದೇಶದಲ್ಲಿ ಅಮಿತ್ ಶಾ ಅವರು, "ಭಯೋತ್ಪಾದನೆ ಎಂಬುದು ಕೇವಲ ಒಂದು ದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ; ಇದು ಸಮಗ್ರ ಮಾನವಕುಲಕ್ಕೇ ಅಂಟಿದ ಶಾಪವಾಗಿದೆ," ಎಂದು ಬಣ್ಣಿಸಿದ್ದಾರೆ.

Update: 2025-11-26 10:44 GMT

2008ರಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್‌ ಹೋಟೆಲ್‌ 

Click the Play button to listen to article

ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅನುಸರಿಸುತ್ತಿದ್ದು, ಇದಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಭಾರತದ ಭಯೋತ್ಪಾದನಾ ವಿರೋಧಿ ಅಭಿಯಾನಗಳಿಗೆ ವ್ಯಾಪಕ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ (ನ.26) ತಿಳಿಸಿದ್ದಾರೆ.

2008ರ ಮುಂಬೈ 26/11ರ ಭಯೋತ್ಪಾದಕ ದಾಳಿಯ 17ನೇ ವರ್ಷಾಚರಣೆಯ ಸಂದರ್ಭದಲ್ಲಿ, ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಿ, ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಅವರು ಸಂದೇಶ ಹಂಚಿಕೊಂಡಿದ್ದಾರೆ.

ತಮ್ಮ ಸಂದೇಶದಲ್ಲಿ ಅಮಿತ್ ಶಾ ಅವರು, "ಭಯೋತ್ಪಾದನೆ ಎಂಬುದು ಕೇವಲ ಒಂದು ದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ; ಇದು ಸಮಗ್ರ ಮಾನವಕುಲಕ್ಕೇ ಅಂಟಿದ ಶಾಪವಾಗಿದೆ," ಎಂದು ಬಣ್ಣಿಸಿದ್ದಾರೆ. 2008ರ ಇದೇ ದಿನದಂದು (ನವೆಂಬರ್ 26) ಉಗ್ರರು ಮುಂಬೈ ಮೇಲೆ ಹೇಯ ಮತ್ತು ಅಮಾನುಷ ದಾಳಿ ನಡೆಸಿದ್ದರು. ಇದು ಅತ್ಯಂತ ಖಂಡನೀಯ ಕೃತ್ಯವಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.

ವೀರ ಯೋಧರಿಗೆ ಮತ್ತು ಸಂತ್ರಸ್ತರಿಗೆ ನಮನ"ಮುಂಬೈ ದಾಳಿಯನ್ನು ದಿಟ್ಟತನದಿಂದ ಎದುರಿಸಿ, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರಿಗೆ ನನ್ನ ಗೌರವಪೂರ್ವಕ ನಮನಗಳು. ಹಾಗೆಯೇ, ಈ ಹೇಯ ಕೃತ್ಯದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಅಮಾಯಕ ನಾಗರಿಕರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ," ಎಂದು ಶಾ ಹೇಳಿದ್ದಾರೆ.

ಜಾಗತಿಕ ಬೆಂಬಲ ಮತ್ತು ಸರ್ಕಾರದ ದೃಢ ನಿಲುವು

ಮೋದಿ ಸರ್ಕಾರದ ಕಠಿಣ ನಿಲುವಿನಿಂದಾಗಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಜಾಗತಿಕವಾಗಿ ಮನ್ನಣೆಗಳಿಸುತ್ತಿದೆ. ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ವಿಶ್ವದಾದ್ಯಂತ ಬೆಂಬಲ ದೊರೆಯುತ್ತಿದೆ ಎಂದು ಶಾ ಹರ್ಷ ವ್ಯಕ್ತಪಡಿಸಿದ್ದಾರೆ. "ನಮ್ಮ ಸರ್ಕಾರದ 'ಶೂನ್ಯ ಸಹಿಷ್ಣುತೆ' ನೀತಿ ಸ್ಪಷ್ಟವಾಗಿದೆ. ಭಯೋತ್ಪಾದನೆಯನ್ನು ಮಟ್ಟಹಾಕಲು ನಾವು ಬದ್ಧರಾಗಿದ್ದೇವೆ," ಎಂದು ಅವರು ಪುನರುಚ್ಚರಿಸಿದ್ದಾರೆ.

2008ರ ನವೆಂಬರ್ 26 ರಂದು ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಬಾ (LeT) ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗವಾಗಿ ಮುಂಬೈಗೆ ನುಗ್ಗಿ, ಸುಮಾರು 60 ಗಂಟೆಗಳ ಕಾಲ ನರಮೇಧ ನಡೆಸಿದ್ದರು. ಈ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ನಂತರದ ವಿಚಾರಣೆಗಳ ಬಳಿಕ 2012ರಲ್ಲಿ ಗಲ್ಲಿಗೇರಿಸಲಾಗಿತ್ತು.

ರಾಷ್ಟ್ರಪತಿಗಳ ಸಂದೇಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಟ್ವೀಟ್ ಮೂಲಕ ಸಂದೇಶ ನೀಡಿದ್ದು, "ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ರಾಷ್ಟ್ರವು ಕೃತಜ್ಞತೆಯಿಂದ ಸ್ಮರಿಸುತ್ತದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಹತ್ತಿಕ್ಕಲು ಪ್ರತಿಯೊಬ್ಬ ನಾಗರಿಕರೂ ಸಂಕಲ್ಪ ಮಾಡಬೇಕು," ಎಂದು ಕರೆ ನೀಡಿದ್ದಾರೆ.

Tags:    

Similar News