Wayanad Landslide | ಭೂಕುಸಿತ ಸಂಭವಿಸಿದ ಕುಗ್ರಾಮಗಳಲ್ಲಿ ಈ ವರ್ಷ ಓಣಂ ಆಚರಣೆ ಇಲ್ಲ

ಬಹುತೇಕ ಚೂರಲ್ಮಲಾ ಮತ್ತು ಮುಂಡಕ್ಕೈ ಸ್ಥಳೀಯರು ಈಗ ಬಾಡಿಗೆ ಮನೆಗಳಲ್ಲಿ ಅಥವಾ ಹತ್ತಿರದ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ. ಸಮೀಪದ ಮೆಪ್ಪಾಡಿಯಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿಜಯನ್ ಅವರು ಕಳೆದ ವರ್ಷದವರೆಗೆ ಮುಂಡಕ್ಕೈನಲ್ಲಿ ತಮ್ಮ ಓಣಂ ಆಚರಣೆಯ ನೆನಪುಗಳನ್ನು ಮೆಲುಕು ಹಾಕುವಾಗ ಅವರಿಗೆ ಕಣ್ಣೀರು ತಡೆಯಲಾಗಲಿಲ್ಲ

Update: 2024-09-15 13:45 GMT
ಜುಲೈ 30 ರಂದು ವಯನಾಡ್‌ನ ಮುಂಡಕ್ಕೈ ಮತ್ತು ಚೂರಲ್‌ಮಲಾ ಪ್ರದೇಶಗಳಲ್ಲಿ ಭಾರಿ ಭೂಕುಸಿತಗಳು ಸಂಭವಿಸಿದವು.
Click the Play button to listen to article

ಕಳೆದ ವರ್ಷದವರೆಗೂ ವಯನಾಡ್ ಜಿಲ್ಲೆಯ ಗ್ರಾಮಗಳಲ್ಲಿ ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ದಾಟಿ, ಜನರು ಹೂವಿನ ರತ್ನಗಂಬಳಿಗಳನ್ನು ಹಾಸಿ ಸಾಂಪ್ರದಾಯಿಕ ಆಟಗಳನ್ನು ಆಡುವ ಮೂಲಕ ಓಣಂ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಜುಲೈ 30 ರ ಭಾರೀ ಭೂಕುಸಿತದಿಂದ ತತ್ತರಿಸಿರುವ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ "ಪೂಕ್ಕಳಂ" (ಹೂವಿನ ರತ್ನಗಂಬಳಿಗಳು), "ಊಂಜಾಲ್" (ಉಯ್ಯಾಲೆ) ಅಥವಾ ಯಾವುದೇ ಆಚರಣೆಯ ಚಿಹ್ನೆಗಳಿಲ್ಲ. 

ಬಹುತೇಕ ಚೂರಲ್ಮಲಾ ಮತ್ತು ಮುಂಡಕ್ಕೈ ಸ್ಥಳೀಯರು ಈಗ ಬಾಡಿಗೆ ಮನೆಗಳಲ್ಲಿ ಅಥವಾ ಹತ್ತಿರದ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ. ಸಮೀಪದ ಮೆಪ್ಪಾಡಿಯಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿಜಯನ್ ಅವರು ಕಳೆದ ವರ್ಷದವರೆಗೆ ಮುಂಡಕ್ಕೈನಲ್ಲಿ ತಮ್ಮ ಓಣಂ ಆಚರಣೆಯ ನೆನಪುಗಳನ್ನು ಮೆಲುಕು ಹಾಕುವಾಗ ಅವರಿಗೆ ಕಣ್ಣೀರು ತಡೆಯಲಾಗಲಿಲ್ಲ.

"ಆ ಓಣಂ ಆಚರಣೆಯ ಸಮಯದಲ್ಲಿ ಅನುಭವಿಸಿದ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ನನಗೆ ಸಾಧ್ಯವಾಗಲಿಲ್ಲ. ಕಳೆದ ವರ್ಷವೂ, ನಾವೆಲ್ಲರೂ ನಮ್ಮ ಕುಟುಂಬಗಳೊಂದಿಗೆ ಮುಂಡಕ್ಕೈ ಮಂದಿರದಲ್ಲಿ ಈ ಸಂದರ್ಭದಲ್ಲಿ ಸೇರಿದ್ದೇವು ಎಂದು ಅವರು ಹೇಳಿದರು. ಮುಂಡಕ್ಕಾಯಿಯ ಕುಟುಂಬಗಳಷ್ಟೇ ಅಲ್ಲ, ಚೂರಲ್‌ಮಲದವರೂ ಅಲ್ಲಿಯ ಆಚರಣೆಯಲ್ಲಿ ಪಾಲ್ಗೊಳ್ಳುವುದನ್ನು ಅವರು ನೆನಪಿಸಿಕೊಂಡರು.

ಹಬ್ಬ ಹರಿದಿನಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದವರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಓಣಂನಲ್ಲಿ ನಮಗೆ ಪೂಕ್ಕಳ ಹಾಕಲು ಅಥವಾ ಔತಣವನ್ನು ತಯಾರಿಸಲು ಮನೆ ಅಥವಾ ಗ್ರಾಮವಿಲ್ಲ ... ನಾವು ಎಲ್ಲರನ್ನು... ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ವಿಜಯನ್ ಭಾವುಕರಾದರು.

ಮತ್ತೊಬ್ಬ ಯುವಕ ಚೂರಲ್‌ಮಾಳ ಶಾಲೆಯ ಮೈದಾನದಲ್ಲಿ ಸಾಂಪ್ರದಾಯಿಕ ಆಟಗಳಾದ ವಡಂವಲಿ, ಉರಿಯಾಡಿ ಆಟಗಳನ್ನು ಆಡಿದ ಸವಿ ನೆನಪುಗಳನ್ನು ಮೆಲುಕು ಹಾಕಿದರು. ನಮಗೆ ಜಾತಿ, ಧರ್ಮದ ಬೇಧಗಳು ಗೊತ್ತಿರಲಿಲ್ಲ, ಅಂತಹ ಒಗ್ಗಟ್ಟಿನಿಂದ ಬದುಕಿ, ಹಬ್ಬ ಹರಿದಿನಗಳನ್ನು ಒಗ್ಗಟ್ಟಾಗಿ ಆಚರಿಸಿದ್ದೇವೆ. ಈ ಗ್ರಾಮದ ನಿವಾಸಿಗಳಿಗೆ ಪ್ರತಿ ಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಆಚರಿಸುವುದು ಸಂತೋಷವಾಗಿದೆ. ಆದರೆ, ಅವರಲ್ಲಿ ಹೆಚ್ಚಿನವರು ಇಂದು ನಮ್ಮೊಂದಿಗೆ ಇಲ್ಲ. ಹಾಗಾದರೆ, ಯಾವುದೇ ಹಬ್ಬವನ್ನು ಆಚರಿಸುವುದರ ಅರ್ಥವೇನು? ಎಂದು ಅವರು ಹೇಳಿದರು. 

ವಯನಾಡಿನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ನೂರಾರು ಮಂದಿ ಮೃತಪಟ್ಟು ಸಾವಿರಾರು ಮಂದಿ ನಿರಾಶ್ರಿತರಾದ ಹಿನ್ನೆಲೆಯಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯಮಟ್ಟದ ಓಣಂ ಆಚರಣೆಯನ್ನು ರದ್ದುಪಡಿಸಲು ನಿರ್ಧರಿಸಿದೆ. ನಾಪತ್ತೆಯಾದವರ ಹುಡುಕಾಟ ಮತ್ತು ಬದುಕುಳಿದವರ ಪುನರ್ವಸತಿ ಪ್ರಯತ್ನಗಳ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಹೇಳಿದ್ದಾರೆ ಹೇಳಿದ್ದರು. 

ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತವನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಶನಿವಾರ ತಮ್ಮ ಓಣಂ ಸಂದೇಶದಲ್ಲಿ ರಾಜ್ಯ ಸರ್ಕಾರವು ಮನೆಗಳ ಪುನರ್ನಿರ್ಮಾಣ, ಜೀವನೋಪಾಯವನ್ನು ಮರುಪಡೆಯಲು ಮತ್ತು ಭೂಕುಸಿತ ಪೀಡಿತ ಪ್ರದೇಶಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾತ್ಮಕಗೊಳಿಸುವ ಪ್ರಮುಖ ಧ್ಯೇಯೋದ್ದೇಶದಲ್ಲಿ ತೊಡಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ (ಸಿಎಂಡಿಆರ್‌ಎಫ್) ದೇಣಿಗೆ ನೀಡುವ ಮೂಲಕ ಭೂಕುಸಿತದಿಂದ ಧ್ವಂಸಗೊಂಡ ಪ್ರದೇಶಗಳ ಪುನರ್ನಿರ್ಮಾಣದ ಭಾಗವಾಗುವಂತೆ ಸಿಎಂ ಜನರನ್ನು ಒತ್ತಾಯಿಸಿದರು.

ಜುಲೈ 30 ರಂದು ವಯನಾಡ್‌ನ ಮುಂಡಕ್ಕೈ ಮತ್ತು ಚೂರಲ್‌ಮಲಾ ಪ್ರದೇಶಗಳಲ್ಲಿ ಭಾರಿ ಭೂಕುಸಿತಗಳು ಸಂಭವಿಸಿದವು. ಎರಡೂ ಪ್ರದೇಶಗಳು ಬಹುತೇಕ ನಾಶವಾದವು ಮತ್ತು 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. 

Tags:    

Similar News