ತಮಿಳುನಾಡು: ಕಾವೇರಿ ನೀರು ಸಂಬಂಧ ಸರ್ವಪಕ್ಷ ಸಭೆ 16ಕ್ಕೆ

ತಮಿಳುನಾಡು ಸಿಎಂ ಸ್ಟಾಲಿನ್ ಅವರು ಜುಲೈ 16 ರಂದು ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಶಾಸಕಾಂಗ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.

Update: 2024-07-15 12:59 GMT

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸುತ್ತಿರುವ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ಜುಲೈ 15ರಂದು ತೀವ್ರವಾಗಿ ಖಂಡಿಸಿದ್ದಾರೆ. ಇದರಿಂದ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಉದ್ವಿಗ್ನತೆ ಹೆಚ್ಚಿದೆ.

ಅಂತಾರಾಜ್ಯ ನದಿ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲು ಜುಲೈ 16 ರಂದು ಶಾಸಕಾಂಗ ಪಕ್ಷದ ನಾಯಕರ ಸಭೆಯನ್ನು ಕರೆದಿದ್ದಾರೆ.

ಜುಲೈ 15, 2024ರಲ್ಲಿ ಕರ್ನಾಟಕದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ ಒಟ್ಟು ನೀರು ಸಂಗ್ರಹ 75.586 ಟಿಎಂಸಿ ಅಡಿ; ಆದರೆ, ತಮಿಳುನಾಡಿ ನ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಕೇವಲ 13.808 ಟಿಎಂಸಿ ಅಡಿ ಎಂದು ಅವರು ಚೆನ್ನೈನಲ್ಲಿ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ಐಎಂಡಿ ಮುನ್ಸೂಚನೆ ಪ್ರಕಾರ, ಸಾಕಷ್ಟು ಮಳೆಯಾಗುವ ಸಾಧ್ಯತೆಯಿದೆ.

ಹೀಗಾಗಿ, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ನಿರ್ದೇಶನದಂತೆ ನೀರು ಬಿಡಲು ಕರ್ನಾಟಕ ನಿರಾಕರಿಸುತ್ತಿರುವುದು ತಮಿಳುನಾಡಿನ ರೈತರಿಗೆ ಮಾಡಿದ ದ್ರೋಹ. ರಾಜ್ಯ ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಸ್ಟಾಲಿನ್ ಹೇಳಿದರು.

ಸಿಡಬ್ಲ್ಯುಆರ್‌ಸಿ ನಿರ್ದೇಶನದಂತೆ ಈ ತಿಂಗಳ ಅಂತ್ಯದವರೆಗೆ ತಮಿಳುನಾಡಿಗೆ ಕಾವೇರಿ ನದಿಯಿಂದ ಪ್ರತಿದಿನ 8,000 ಕ್ಯೂಸೆಕ್ ನೀರು ಬಿಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಆದರೆ, ಒಂದು ಟಿಎಂಸಿ ನೀರು ಬಿಡಲಾಗದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

ಕಾವೇರಿ ನೀರು ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು, ಪ್ರತಿಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದೇನೆ ಎಂದು ಸ್ಟಾಲಿನ್ ಹೇಳಿದರು.

ಜುಲೈ 16, 2024 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವಾಲಯದಲ್ಲಿ ಜಲಸಂಪನ್ಮೂಲ ಸಚಿವ ದುರೈಮುರುಗನ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು, ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ.

Tags:    

Similar News