ಕ್ಷೇತ್ರದ ಆಯ್ಕೆಯಲ್ಲಿ ಸಂದಿಗ್ಧದಲ್ಲಿದ್ದೇನೆ: ರಾಹುಲ್‌ ಗಾಂಧಿ

ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ, ರಾಯ್ ಬರೇಲಿ ಮತ್ತು ಅಮೇಥಿ ಜನರ ಸೇವೆಯನ್ನು ಮುಂದುವರಿಸುತ್ತೇನೆ

Update: 2024-06-12 09:09 GMT

ವಯನಾಡ್ ಲೋಕಸಭೆ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭಾರೀ ಅಂತರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಉತ್ತರ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ (ಜೂನ್ 12) ರೋಡ್ ಶೋ ನಡೆಸಿದರು.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯಕ್ಕೆ ಅವರ ಮೊದಲ ಭೇಟಿ ಇದಾಗಿದೆ. ವಯನಾಡ್ ಲೋಕಸಭೆ ಕ್ಷೇತ್ರದ ಭಾಗವಾಗಿರುವ ಎಡವನ್ನಾದಲ್ಲಿ ನಡೆದ ರೋಡ್ ಶೋನಲ್ಲಿ ಸಾವಿರಾರು ಯುಡಿಎಫ್ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಲ್ಗೊಂಡಿದ್ದರು. ಕೋಯಿ ಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು.

'ಸಂದಿಗ್ಧದಲ್ಲಿ ಇದ್ದೇನೆ': ಮಲಪ್ಪುರಂನಲ್ಲಿ ಮಾತನಾಡಿ, ʻರಾಯ್ ಬರೇಲಿ ಅಥವಾ ವಯನಾಡ್ ನಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು ಎಂಬ ಸಂದಿಗ್ಧದಲ್ಲಿದ್ದೇನೆ. ನಾನು ಕೇವಲ ಒಂದು ಕ್ಷೇತ್ರದಿಂದ ಸಂಸದನಾಗಬಹುದು. ನರೇಂದ್ರ ಮೋದಿ ಅವರಂತೆ ನನಗೆ ದೇವರ ಮಾರ್ಗದರ್ಶನವಿಲ್ಲ. ತಾವು ಜೈವಿಕ ಜೀವಿ ಅಲ್ಲ; ದೇವರು ತಮ್ಮನ್ನು ಕೆಲಸ ಮಾಡುವಂತೆ ಮಾಡುತ್ತಾನೆ ಎಂದು ಮೋದಿ ಹೇಳಿದ್ದರು. ನನಗೆ ಬಡವರೇ ದೇವರು, ವಯನಾಡಿನ ಜನ ದೇವರು. ಏನು ಮಾಡಬೇಕೆಂದು ನಾನು ಜನರನ್ನು ಕೇಳುತ್ತೇನೆ; ಮತ್ತು ಅವರು ಏನು ಮಾಡಬೇಕೆಂದು ನನಗೆ ಹೇಳುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ, ವಯನಾಡ್ ಮತ್ತು ರಾಯ್ ಬರೇಲಿಯ ಜನರು ಸಂತೋಷಪಡುತ್ತಾರೆ ಎಂದು ಖಾತ್ರಿಪಡಿಸುತ್ತೇನೆ,ʼ ಎಂದರು. 

ಎರಡು ಲೋಕಸಭೆ ಸ್ಥಾನಗಳಲ್ಲಿ ಯಾವುದನ್ನು ಉಳಿಸಿಕೊಳ್ಳುತ್ತೇನೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ.ಮಂಗಳವಾರ (ಜೂನ್ 11) ರಾಯ್ ಬರೇಲಿಯಲ್ಲಿ ಕೂಡ ಇಂಥದ್ದೇ ಹೇಳಿಕೆ ನೀಡಿದ್ದರು.ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿ ಕೊಂಡರೂ, ರಾಯ್ ಬರೇಲಿ ಮತ್ತು ಅಮೇಥಿ ಜನರ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದರು.

ರಾಹುಲ್ ಬುಧವಾರದ ವಯನಾಡಿನಲ್ಲಿ ಮತ್ತೊಂದು ಸಭೆಯಲ್ಲಿ ಮಾತನಾಡಲಿದ್ದಾರೆ. ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು.

Tags:    

Similar News