ಮೂರನೇ ಅವಧಿಗೆ ಕಾಂಗ್ರೆಸ್ಸೇತರ ಪ್ರಧಾನಿ ಆಯ್ಕೆಯಿಂದ ಪ್ರತಿಪಕ್ಷಗಳಿಗೆ ಅಸಮಾಧಾನ: ಮೋದಿ

Update: 2024-07-02 07:05 GMT

ನವದೆಹಲಿ, ಜುಲೈ 2: ಎನ್‌ಡಿಎ ಸಂಸದರು ಸಂಸತ್ತಿನ ನಿಯಮಗಳು ಮತ್ತು ನಡವಳಿಕೆಗಳನ್ನು ಅನುಸರಿಸಲು ಮತ್ತು ಹಿರಿಯ ಸದಸ್ಯರಿಂದ ಉತ್ತಮ ಅಭ್ಯಾಸಗಳ ಬಗ್ಗೆ ಕಲಿಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸೂಚಿಸಿದರು.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅತ್ಯಂತ ಬೇಜವಾಬ್ದಾರಿ ಭಾಷಣ ಮಾಡಿದ್ದಾರೆ ಎಂದು ಆಡಳಿತ ಮೈತ್ರಿಕೂಟ ಆರೋ ಪ ಮಾಡಿದ ಒಂದು ದಿನದ ನಂತರ ಈ ಪ್ರತಿಕ್ರಿಯೆ ಬಂದಿದೆ.

ಎನ್‌ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಮೊದಲ ಬಾರಿಗೆ ಕಾಂಗ್ರೆಸ್ಸೇತರ ನಾಯಕರೊಬ್ಬರು ಮೂರನೇ ಬಾರಿಗೆ ಪ್ರಧಾನಿಯಾಗಿರುವುದರಿಂದ ಪ್ರತಿಪಕ್ಷಗಳು ಅಸಮಾಧಾನಗೊಂಡಿವೆ ಎಂದು ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದರಿಗೆ ಸಂಸತ್ತಿನ ವಿಷಯಗಳನ್ನು ಅಧ್ಯಯನ ಮಾಡಲು, ನಿಯಮಿತವಾಗಿ ಸಂಸತ್ತಿಗೆ ಹಾಜರಾಗಲು ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಲು ಮೋದಿ ಕೇಳಿಕೊಂಡರು ಎಂದು ಹೇಳಿದರು.

ಲೋಕಸಭೆಯಲ್ಲಿ ಸೋಮವಾರ ರಾಹುಲ್ ಗಾಂಧಿಯವರ ಭಾಷಣವನ್ನು ಮೋದಿ ಉಲ್ಲೇಖಿಸಿದ್ದಾರೆಯೇ ಎಂಬ ಪ್ರಶ್ನೆಗೆ‌ ಪ್ರತಿಕ್ರಿಯಿಸಿದ ರಿಜಿಜು, ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ. ಆದರೆ, ಪ್ರಧಾನಿ ಮಾತನಾಡುವಾಗ ಎಲ್ಲರಿಗೂ ಸಂದೇಶ ಇರುತ್ತದೆ ಎಂದರು.

ಸೋಮವಾರ ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಗಾಂಧಿ, ಆಡಳಿತ ಪಕ್ಷದ ನಾಯಕರು ಕೋಮುವಾದದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದಿಂದ ತೀವ್ರ ಬೃಹತ್ ಪ್ರತಿರೋಧ ವ್ಯಕ್ತವಾಗಿತ್ತು. ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆದಿದ್ದಕ್ಕಾಗಿ ಪ್ರಧಾನಿ, ಕಾಂಗ್ರೆಸ್ ನಾಯಕನನ್ನು ತರಾಟೆಗೆ ತೆಗೆದುಕೊಂಡರು.

ಮೈತ್ರಿಕೂಟದ ಸಭೆಯಲ್ಲಿಎನ್‌ಡಿಎ ನಾಯಕರು, ʻಐತಿಹಾಸಿಕʼ ಮೂರನೇ ಅವಧಿಗೆ ಮೋದಿ ಅವರನ್ನು ಅಭಿನಂದಿಸಿದರು ಎಂದು ರಿಜಿಜು ಹೇಳಿದರು.

ಸಂಸದರು ಮಾಧ್ಯಮಗಳಿಗೆ ಯಾವುದೇ ವಿಷಯದ ಬಗ್ಗೆ ಹೇಳಿಕೆ ನೀಡುವ ಮೊದಲು ಅಧ್ಯಯನ ಮಾಡುವಂತೆ, ತಮ್ಮ ಕ್ಷೇತ್ರದೊಂದಿಗೆ ಸಂಪರ್ಕದಲ್ಲಿರುವಂತೆ ಮತ್ತು ಬೆಂಬಲಿಸಿದ ಮತದಾರರಿಗೆ ಧನ್ಯವಾದ ಹೇಳಬೇಕು ಎಂದು ಪ್ರಧಾನಿ ಹೇಳಿದರು.

ಎಲ್ಲಾ ಪ್ರಧಾನ ಮಂತ್ರಿಗಳ ಜೀವನ ಪಯಣವನ್ನು ದಾಖಲಿಸುವ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಸಂಸದರಿಗೆ ಮೋದಿ ಹೇಳಿದರು.

Tags:    

Similar News