Kangana Ranaut on farm laws| ವೈಯಕ್ತಿಕ ಅಭಿಪ್ರಾಯ, ಪಕ್ಷದ್ದಲ್ಲ:ಕಂಗನಾ

ಮೂರು ಕೃಷಿ ಕಾನೂನುಗಳು ಕೆಲವು ರಾಜ್ಯಗಳಲ್ಲಿ ಮಾತ್ರ ಪ್ರತಿಭಟನೆಗಳನ್ನು ಎದುರಿಸುತ್ತಿವೆ ಎಂದು ಮಂಗಳವಾರ ಮಂಡಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಗನಾ ರನೌತ್‌ ಹೇಳಿದ್ದರು.

Update: 2024-09-25 07:08 GMT

2021ರಲ್ಲಿ ರದ್ದುಗೊಳಿಸಿದ ಕೃಷಿ ಕಾನೂನುಗಳನ್ನು ವಾಪಸ್‌ ತರಬೇಕೆಂಬ ಹೇಳಿಕೆಗೆ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ಸಂಸದೆ ಕಂಗನಾ ರನೌತ್, ತಮ್ಮಅಭಿಪ್ರಾಯ ವೈಯಕ್ತಿಕ ಮತ್ತು ಅದು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಬುಧವಾರ (ಸೆಪ್ಟೆಂಬರ್ 25) ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಸಂಸದೆಯ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. 

ʻರೈತರ ಕಾನೂನು ಕುರಿತ ನನ್ನ ಅಭಿಪ್ರಾಯ ವೈಯಕ್ತಿಕ; ಅವು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲʼ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ಕಂಗನಾ ಬರೆದಿದ್ದಾರೆ. ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ʻನನ್ನ ಮಾತು ಮತ್ತು ಅಭಿಪ್ರಾಯದಿಂದ ಯಾರನ್ನಾದರೂ ನಿರಾಶೆಗೊಳಿಸಿದರೆ, ವಿಷಾದಿಸುತ್ತೇನೆ. ನನ್ನ ಮಾತು ಹಿಂಪಡೆಯುತ್ತೇನೆʼ ಎಂದಿದ್ದಾರೆ. 

ಮಂಗಳವಾರ ಮಂಡಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರನೌತ್‌, ಮೂರು ಕೃಷಿ ಕಾನೂನುಗಳಿಗೆ ಕೆಲವು ರಾಜ್ಯಗಳಲ್ಲಿ ಮಾತ್ರ ಪ್ರತಿಭಟನೆ ಎದುರಾಯಿತು ಎಂದಿದ್ದರು.

ʻದೇಶದ ಪ್ರಗತಿಗೆ ರೈತರು ಶಕ್ತಿಯ ಆಧಾರ ಸ್ತಂಭ. ಕೆಲವು ರಾಜ್ಯಗಳಲ್ಲಿ ಮಾತ್ರ ಕೃಷಿ ಕಾನೂನುಗಳನ್ನು ರೈತರು ವಿರೋಧಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಕೃಷಿ ಕಾನೂನುಗಳನ್ನು ಮರಳಿ ತರಬೇಕು ಎಂದು ನಾನು ಮನವಿ ಮಾಡುತ್ತೇನೆ. ದೇಶ ಪ್ರಗತಿಯ ಹಾದಿಯಲ್ಲಿದೆ. ಕೃಷಿ ಕಾನೂನುಗಳಿಂದ ಆರ್ಥಿಕ ಸ್ಥಿರತೆ ಮತ್ತು ರೈತರ ಅಭಿವೃದ್ಧಿ ಖಚಿತವಾಗುತ್ತದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಪ್ರಯೋಜನ ಆಗಲಿದೆ,ʼ ಎಂದು ಹೇಳಿದ್ದರು.

ಕಾಂಗ್ರೆಸ್‌ ಖಂಡನೆ: ʻರನೌತ್‌ ಹೇಳಿಕೆಯು  ಆಡಳಿತ ಪಕ್ಷ ಕೃಷಿ ಕಾನೂನುಗಳನ್ನು ಮರಳಿ ತರಲು ಪ್ರಯತ್ನಿಸುತ್ತಿದೆ ಎಂಬುದರ ಸೂಚನೆ. ಹರಿಯಾಣ ಇದಕ್ಕೆ ತಕ್ಕ ಉತ್ತರ ನೀಡುತ್ತದೆ,ʼ ಎಂದು ಕಾಂಗ್ರೆಸ್‌ ಹೇಳಿದೆ.

ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಅಕ್ಟೋಬರ್ 5 ರಂದು ನಡೆಯಲಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ, ದೆಹಲಿ ಗಡಿಯಲ್ಲಿ ಹರಿಯಾಣ ರೈತರು ಭಾರಿ ಪ್ರತಿಭಟನೆ ನಡೆಸಿದ್ದರು. 2021 ರಲ್ಲಿ ಮೋದಿ ಸರ್ಕಾರ ಈ ಕಾನೂನುಗಳನ್ನು ಹಿಂತೆಗೆದುಕೊಂಡಿತು.

Tags:    

Similar News