ರಾಹುಲ್ ಭಾಷಣ: ಪ್ರಧಾನಿ ಮೋದಿ, ಶಾ ಮಧ್ಯಪ್ರವೇಶ

ತಮ್ಮನ್ನು ಹಿಂದೂ ಧರ್ಮದ ಅನುಯಾಯಿಗಳು ಎಂದು ಕರೆದುಕೊಳ್ಳುವ ಬಿಜೆಪಿ ಮತ್ತು ಆರ್‌ಎಸ್‌ಎಸ್, ಕೇವಲ ಹಿಂಸೆ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತವೆ ಎಂದು ರಾಹುಲ್ ಹೇಳಿದಾಗ, ಪ್ರಧಾನಿ ಮಧ್ಯಪ್ರವೇಶಿಸಿದರು.

Update: 2024-07-02 10:31 GMT

ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಮಾಡಿದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಮಧ್ಯ ಪ್ರವೇಶಿಸಿದರು.

ಪ್ರಧಾನಿ ನರೇಂದ್ರ ಮೋದಿ: ತಮ್ಮನ್ನು ಹಿಂದೂ ಧರ್ಮದ ಅನುಯಾಯಿಗಳು ಎಂದು ಕರೆದುಕೊಳ್ಳುವ ಬಿಜೆಪಿ ಮತ್ತು ಆರ್‌ಎಸ್‌ಎಸ್, ಕೇವಲ ಹಿಂಸೆ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತವೆ ಎಂದು ರಾಹುಲ್ ಹೇಳಿದಾಗ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿದರು:ʼಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ. ಇದು ಗಂಭೀರ ವಿಚಾರʼ ಎಂದು ಮೋದಿ ಹೇಳಿದರು. 

ಅಮಿತ್ ಶಾ: 'ಹಿಂದುಗಳಲ್ಲ' ಎಂಬ ರಾಹುಲ್‌ ಮಾತಿಗೆ ಪ್ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮನ್ನು ಹಿಂದುಗಳೆಂದು ಗುರುತಿಸಿಕೊಳ್ಳಲು ಹೆಮ್ಮೆಪಡುವ ಕೋಟ್ಯಂತರ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಸದನ ಮತ್ತು ದೇಶಕ್ಕೆ ಕ್ಷಮೆಯಾಚಿಸಬೇಕುʼ ಎಂದು ಆಗ್ರಹಿಸಿದರು. ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ದಂಗೆ ಬಗ್ಗೆ ಮಾತನಾಡಿದ ಶಾ, ಕಾಂಗ್ರೆಸ್ ದೇಶದಲ್ಲಿ ಭಯೋತ್ಪಾದನೆ ಹರಡಿದ್ದು, ಅಹಿಂಸೆ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದರು. 

ಪ್ರಧಾನಿ ಮೋದಿ ಅವರು ತಮ್ಮನ್ನು ಸ್ವಾಗತಿಸುವುದಿಲ್ಲ ಅಥವಾ ನೋಡಿ ನಗುವುದಿಲ್ಲ ಎಂದು ರಾಹುಲ್ ಮಾತಿಗೆ ಮಧ್ಯಪ್ರವೇಶಿಸಿದ ಪ್ರಧಾನಿ, ಭಾರತದ ಸಂವಿಧಾನವು ಪ್ರತಿಪಕ್ಷ ನಾಯಕನನ್ನು ಗಂಭೀರವಾಗಿ ಪರಿಗಣಿಸಲು ಕಲಿಸಿದೆ ಎಂದು ಹೇಳಿದರು. 

ಸ್ಪೀಕರ್ ಓಂ ಬಿರ್ಲಾ: ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿಗೆ ತಲೆಬಾಗಿ ನಮಸ್ಕರಿಸುತ್ತಾರೆ ಎಂಬ ರಾಹುಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಓ ಬಿರ್ಲಾ ಅವರು, ಹಿರಿಯರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದ್ಧೇನೆ ಎಂದು ಹೇಳಿದರು. 

ʻಪ್ರಧಾನಿ ಅವರು ಸಭಾನಾಯಕರು. ನನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರಕಾರ, ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ, ಮತ್ತು ಈ ಆಸನದಲ್ಲಿ ಕುಳಿತಿರುವಾಗ, ಹಿರಿಯರಿಗೆ ಬಾಗಿ ನಮಸ್ಕರಿಸುತ್ತೇನೆ ಮತ್ತು ಸಮಾನರನ್ನು ಸಮಾನರಂತೆ ಕಾಣುತ್ತೇನೆ. ಇದು ನಾನು ಕಲಿತಿರುವುದುʼ ಎಂದು ಸ್ಪೀಕರ್ ಹೇಳಿದರು. ʻನಾನು ಈ ಆಸನದಿಂದ ಹೇಳುತ್ತೇನೆ, ಹಿರಿಯರಿಗೆ ನಮಸ್ಕರಿಸುವುದು ಮತ್ತು ಅಗತ್ಯವಿದ್ದರೆ ಅವರ ಪಾದಗಳನ್ನು ಮುಟ್ಟುವುದು ನನ್ನ ಸಂಸ್ಕೃತಿ ,ʼ ಎಂದು ಹೇಳಿದರು. 

ರಾಜನಾಥ್ ಸಿಂಗ್: ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದಾಗ ಪ್ರತಿಕ್ರಿಯಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ʼತಪ್ಪು ಹೇಳಿಕೆ ನೀಡುವ ಮೂಲಕ ಸದನವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬಾರದು. ಗಡಿಯನ್ನು ರಕ್ಷಿಸುವಾಗ ಅಥವಾ ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡುವ ಅಗ್ನಿವೀರನ ಕುಟುಂಬಕ್ಕೆ 1 ಕೋಟಿ ರೂ.ಆರ್ಥಿಕ ನೆರವು ನೀಡಲಾಗುತ್ತದೆ,ʼಎಂದರು.

ಶಿವರಾಜ್ ಸಿಂಗ್ ಚೌಹಾಣ್: ಎಂಎಸ್‌ಪಿ ಮತ್ತು ಸಾಲ ಮನ್ನಾ ಮತ್ತಿತರ ಕೃಷಿ ವಿಷಯಗಳ ಬಗ್ಗೆ ರಾಹುಲ್ ಮಾತಿನ ನಡುವೆ ಮಧ್ಯಪ್ರವೇಶಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ʻರಾಹುಲ್ ಗಾಂಧಿ ಎಂಎಸ್‌ಪಿ ಕುರಿತು ಸಂಸತ್ತನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮೋದಿ ಸರ್ಕಾರ ಈಗಾಗಲೇ ರೈತರಿಗೆ ಎಂಎಸ್‌ಪಿ ನೀಡುತ್ತಿದೆ,ʼ ಎಂದರು.

Tags:    

Similar News