ಜಿಎಸ್ಟಿ ಸುಧಾರಣೆ| ಕೇಂದ್ರ ಸರ್ಕಾರದಿಂದ ಜನತೆಗೆ ದೀಪಾವಳಿ ಕೊಡುಗೆ: ಹೆಚ್ಡಿಕೆ
ಹೊಸ ಸುಧಾರಣೆಯೊಂದಿಗೆ ಜಿಎಸ್ಟಿ ಈಗ ಶೇ.5 ಹಾಗೂ ಶೇ.18 ಎರಡು ಸ್ಲ್ಯಾಬ್ಗಳನ್ನು ಹೊಂದಿದೆ. ದೈನಂದಿನ ಜೀವನದ ಅಗತ್ಯ ವಸ್ತುಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ವಾಹನಗಳು ಸುಲಭವಾಗಿ ಕೈಗೆಟುಕುವಂತಾಗುತ್ತವೆ ಎಂದು ತಿಳಿಸಿದ್ದಾರೆ.;
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ರಾಷ್ಟ್ರಕ್ಕೆ ಐತಿಹಾಸಿಕ ದೀಪಾವಳಿ ಉಡುಗೊರೆ ನೀಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್) ನಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಯನ್ನು ಅನುಮೋದಿಸಿದೆ. ಇದು ಜನಜೀವನ ಸುಲಭಗೊಳಿಸುವುದು ಮತ್ತು ಆತ್ಮನಿರ್ಭರ ಭಾರತ್ ಅನ್ನು ಬಲಪಡಿಸುವ ಒಂದು ಪರಿವರ್ತನಾತ್ಮಕ ಹೆಜ್ಜೆಯಾಗಿದೆ ಎಂದಿದ್ದಾರೆ.
ಹೊಸ ಸುಧಾರಣೆಯೊಂದಿಗೆ ಜಿಎಸ್ಟಿ ಈಗ ಶೇ.5 ಹಾಗೂ ಶೇ.18 ಎರಡು ಸ್ಲ್ಯಾಬ್ಗಳನ್ನು ಹೊಂದಿದೆ. ದೈನಂದಿನ ಜೀವನದ ಅಗತ್ಯ ವಸ್ತುಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ವಾಹನಗಳು ಸಹ ಸುಲಭವಾಗಿ ಕೈಗೆಟುಕುವಂತಾಗುತ್ತವೆ. ಜತೆಗೆ, ಉದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ (MSME) ಗಳು ಭಾರೀ ಉತ್ತೇಜನವನ್ನು ಪಡೆಯುತ್ತವೆ ಎಂದು ಹೇಳಿದ್ದಾರೆ.
ವ್ಯವಸ್ಥೆಯನ್ನು ಸರಳಗೊಳಿಸಿ ಮತ್ತಷ್ಟು ಸುಲಭಗೊಳಿಸುವ ಮತ್ತು ಭಾರತದಾದ್ಯಂತ ಪ್ರತೀ ಮನೆಗೂ ಸಂತೋಷ ಉಂಟು ಮಾಡುವ ನೈಜ ಜನಕೇಂದ್ರಿತ ಸುಧಾರಣೆ ಇದಾಗಿದೆ ಎಂದು ಫೋಸ್ಟ್ನಲ್ಲಿ ತಿಳಿಸಿದ್ದಾರೆ.