ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷ ಕೋರಿದ್ದ ರಾಹುಲ್‌ ಗಾಂಧಿ ಅರ್ಜಿ ವಜಾ

ಪ್ರಕರಣವು ಹಿಮಾನಿ ಸಾವರ್ಕರ್ ವಂಶವೃಕ್ಷಕ್ಕೆ ಸಂಬಂಧಿಸಿಲ್ಲ ಅಥವಾ ವಿವಾದಾತ್ಮಕವಾಗಿಲ್ಲ. ಆದ್ದರಿಂದ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ರಾಹುಲ್‌ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.;

Update: 2025-05-31 11:48 GMT

ರಾಹುಲ್‌ ಗಾಂಧಿ 

ಹಿಂದುತ್ವ ಪ್ರತಿಪಾದಕ ವಿ.ಡಿ.ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಡಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷದ ಮಾಹಿತಿ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

ಈ ಪ್ರಕರಣವು ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ್ದ ಮಾನನಷ್ಟ ಭಾಷಣಕ್ಕೆ ಸಂಬಂಧಿಸಿದ್ದಾಗಿದೆಯೇ ಹೊರತು ಸಾತ್ಯಕಿ ಸಾವರ್ಕರ್ ಅವರ ತಾಯಿ ದಿ.ಹಿಮಾನಿ ಅಶೋಕ್ ಸಾವರ್ಕರ್ ವಂಶವೃಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಅಮೋಲ್ ಶಿಂದೆ ಅವರು, ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಹಿಮಾನಿ ಸಾವರ್ಕರ್ ಅವರು ಮಹಾತ್ಮ ಗಾಂಧಿ ಹಂತಕ ನಾಥೋರಾಮ್ ಗೋಡೆಯ ಕಿರಿಯ ಸಹೋದರ ಗೋಪಾಲ್ ವಿನಾಯಕ್ ಗೋಡ್ಲೆ ಅವರ ಮಗಳು. ದೂರುದಾರರು (ಸಾತ್ಯಕಿ ಸಾವರ್ಕರ್) ದೂರು ಸಲ್ಲಿಸುವಾಗ ತಮ್ಮ ತಂದೆಯ ಪೂರ್ವಜರ ವಿವರ ನೀಡಿದ್ದರೂ, ಅವರ ತಾಯಿಯ ಪೂರ್ವಜರ ವಿವರ ಬಹಿರಂಗಪಡಿಸಿಲ್ಲ ಎಂದು ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ವಾದಿಸಿದ್ದರು. ಅರ್ಜಿ ವಿಚಾರಣೆಗೆ ಈ ಮಾಹಿತಿ ನಿರ್ಣಾಯಕವಾಗಲಿದೆ ಎಂದೂ ತಿಳಿಸಿದ್ದರು.

ವಾದ ಆಲಿಸಿದ ನ್ಯಾಯಪೀಠವು ಈ ಪ್ರಕರಣ ಹಿಮಾನಿ ಸಾವರ್ಕರ್ ಅವರ ವಂಶವೃಕ್ಷಕ್ಕೆ ಸಂಬಂಧಿಸಿಲ್ಲ ಅಥವಾ ವಿವಾದಾತ್ಮಕವಾಗಿಲ್ಲ. ಆದ್ದರಿಂದ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದು ಆದೇಶಿಸಿ ಅರ್ಜಿ ವಜಾ ಮಾಡಿದೆ.

ಇದೇ ಪ್ರಕರಣ ಸಂಬಂಧ ನ್ಯಾಯಾಲಯವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿಯನ್ನೂ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ 2023 ಮಾರ್ಚ್‌ ತಿಂಗಳಲ್ಲಿ ಮಾಡಿದ್ದ ಭಾಷಣದಲ್ಲಿ ವಿ.ಡಿ. ಸಾವರ್ಕರ್ ಅವರು ತಮ್ಮ ಐದಾರು ಸ್ನೇಹಿತರೊಂದಿಗೆ ಸೇರಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಖುಷಿಪಟ್ಟಿದ್ದಾಗಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಂದು ಹೇಳಿದ್ದರು. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ. ವಿ.ಡಿ. ಸಾವರ್ಕರ್ ಅವರು ಎಲ್ಲಿಯೂ ಆ ರೀತಿ ಬರೆದಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

Tags:    

Similar News