Ahmedabad Plane Crash | ಏರ್ ಇಂಡಿಯಾ ಡ್ರೀಮ್ಲೈನರ್ ಪತನದಲ್ಲಿ 265 ಮಂದಿ ಸಾವು; ಘಟನಾ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ
ಈ ವಿಮಾನ ಟೇಕ್ ಆಫ್ ಆದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅಹಮದಾಬಾದ್ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸಿಡಿದು ಕನಿಷ್ಠ 265 ಜನರು ಸಾವನ್ನಪ್ಪಿದ್ದಾರೆ.;
ಗುರುವಾರ (ಜೂನ್ 13) 242 ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಹೊತ್ತು ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಸ್ವಲ್ಪ ಹೊತ್ತಿನಲ್ಲೇ ಪತನವಾಗಿತ್ತು. ಈ ವಿಮಾನ ಟೇಕ್ ಆಫ್ ಆದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅಹಮದಾಬಾದ್ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸಿಡಿದು ಕನಿಷ್ಠ 265 ಜನರು ಸಾವನ್ನಪ್ಪಿದರು.
ಇತ್ತೀಚಿನ ದಿನಗಳಲ್ಲಿ ದೇಶದ ಅತ್ಯಂತ ಭೀಕರ ವಾಯು ದುರಂತದಲ್ಲಿ ಹಲವಾರು ಜನರು ಸುಟ್ಟು ಕರಕಲಾಗಿದ್ದಾರೆ. ಈ ಅತಿ ಕೆಟ್ಟ ಅವಘಡದಲ್ಲಿ ವಿಮಾನದಲ್ಲಿದ್ದ ವಿಶ್ವಾಸ್ ಕುಮಾರ್ ರಮೇಶ್ ಎಂಬವರು ಮಾತ್ರ ಬದುಕುಳಿದಿದ್ದಾರೆ. ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 265 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಪ್ರಯಾಣಿಕರು ಮತ್ತು ಪೈಲಟ್ ಹಾಗೂ ಇತರ ಸಿಬ್ಬಂದಿ ಸೇರಿ 241 ಮಂದಿ ಸಾವನ್ನಪ್ಪಿದರೆ, ಉಳಿದ ಮೃತರು ವಿಮಾನ ಅಪ್ಪಳಿಸಿದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ 7 ಮಂದಿ. ಅಲ್ಲಿದ್ದ ಇತರ 60 ಮಂದಿ ಗಾಯಗೊಂಡಿದ್ದಾರೆ.
ಎಲ್ಲಿ ಅವಘಡ?
ವಿಮಾನ ನಿಲ್ದಾಣದ ಆವರಣದ ಪಕ್ಕದಲ್ಲಿರುವ ಏರ್ ಕಸ್ಟಮ್ ಕಾರ್ಗೋ ಕಚೇರಿ ಬಳಿ ವಿಮಾನ ಅಪಘಾತಕ್ಕೀಡಾಗಿದೆ.
ವಿಮಾನ ನಿಲ್ದಾಣ ಪತನವಾದ ಕೂಡಲೇ 7 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿವೆ. ವಿಮಾನ ಅಪಘಾತದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಅಪಘಾತದ ಕಾರಣವನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಮೇಘನಿನಗರ ಪ್ರದೇಶ ಸಮೀಪದ ಧಾರ್ಪುರದಿಂದ ದಟ್ಟ ಹೊಗೆ ಗೋಚರಿಸುತ್ತಿದೆ. ಬಿಎಸ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅಪಘಾತಕ್ಕೀಡಾದ ವಿಮಾನವು ಬೋಯಿಂಗ್ ಸಂಸ್ಥೆಯ 787 ಡ್ರೀಮ್ ಲೈನರ್ ಎಂದು ಹೇಳಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬ್ರಿಟಿಷ್ ರಾಯಭಾರಿ ಕಚೇರಿ ಅಧಿಕಾರಿಗಳು ವಿಮಾನ ಅಪಘಡದಲ್ಲಿ ಮೃತರಾದ ತಮ್ಮ ಪ್ರಜೆಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಅವರ ಕುಟುಂಬಗಳ ಸದಸ್ಯರಿಗೆ ಸಹಾಯ ಮಾಡಲು ಆಗಮಿಸಿದ್ದಾರೆ.
ದೆಹಲಿಯಿಂದ ಅಹಮದಾಬಾದ್ಗೆ ಧಾವಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘಟನಾ ಸ್ಥಳಕ್ಕೆ ಕಾರಿನಲ್ಲಿ ತೆರಳಿದ್ದಾರೆ.
'ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂಬ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳಕ್ಕೆ ಪ್ರಧಾನಿ ಮೋದಿ ತಲುಪಿದ್ದಾರೆ. ಪ್ರಧಾನಿಯವರು ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಮೇಘನಿನಗರ ಪ್ರದೇಶದ ಅಪಘಾತದ ಸ್ಥಳಕ್ಕೆ ನೇರವಾಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಇದ್ದರು.
ಅಹಮದಾಬಾದ್ನಲ್ಲಿ ವಿಮಾನ ಅಪಘಾತದ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಪ್ರಯತ್ನಗಳು ರಾತ್ರಿಯಿಡೀ ಮುಂದುವರಿದಿತ್ತು.
ಸ್ಥಳವನ್ನು ತೆರವುಗೊಳಿಸುವ ಕಾರ್ಯಾಚರಣೆ ರಾತ್ರಿಯಿಡೀ ಮುಂದುವರೆದಿದ್ದು, ಕೆಲವು ಅವಶೇಷಗಳನ್ನು ಇನ್ನೂ ತೆಗೆದುಹಾಕಬೇಕಾಗಿದೆ ಎಂದು ಅಹಮದಾಬಾದ್ ಉಪ ಪೊಲೀಸ್ ಆಯುಕ್ತ ಕಾನನ್ ದೇಸಾಯಿ ಹೇಳಿದರು. "ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ" ಎಂದೂ ಹೇಳಿದ್ದಾರೆ.
ಈಗಾಗಲೇ 265 ಶವಗಳನ್ನು ನಗರದ ನಾಗರಿಕ ಆಸ್ಪತ್ರೆಗೆ ಕಳುಹಿಸಲಾಗಿದೆ .
AI171 ವಿಮಾನದಲ್ಲಿರುವವರ ಕುಟುಂಬಗಳು ಮತ್ತು ಪ್ರೀತಿಪಾತ್ರರ ಅಗತ್ಯಗಳನ್ನು ಪೂರೈಸಲು ಮತ್ತು ಬೆಂಬಲ ನೀಡಲು ಏರ್ ಇಂಡಿಯಾ ಅಹಮದಾಬಾದ್, ಮುಂಬೈ, ದೆಹಲಿ ಮತ್ತು ಗ್ಯಾಟ್ವಿಕ್ ವಿಮಾನ ನಿಲ್ದಾಣಗಳಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳು ಅಹಮದಾಬಾದ್ಗೆ ಕುಟುಂಬ ಸದಸ್ಯರ ಪ್ರಯಾಣವನ್ನು ಸುಗಮಗೊಳಿಸುತ್ತಿವೆ ಎಂದು ಏರ್ ಇಂಡಿಯಾ ಪ್ರಕಟಣ ತಿಳಿಸಿದೆ.
ಭಾರತದ ಒಳಗಿನಿಂದ ಕರೆ ಮಾಡುವವರಿಗೆ ಮೀಸಲಾದ ಪ್ರಯಾಣಿಕರ ಹಾಟ್ಲೈನ್ ಸಂಖ್ಯೆ: 1800 5691 444; ಮತ್ತು ಭಾರತದ ಹೊರಗಿನಿಂದ ಕರೆ ಮಾಡುವವರಿಗೆ: +91 8062779200 ಸಂಖ್ಯೆಗಳನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಏರ್ ಇಂಡಿಯಾದ X ಹ್ಯಾಂಡಲ್ (https://x.com/airindia) ಮತ್ತು http://airindia.com ನಲ್ಲಿ ಮಾಹಿತಿ ನೀಡಲಾಗುತ್ತಿದೆ.
ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮಾಜಿ ಸಿಎಂ ವಿಜಯ್ ರೂಪಾನಿ ಅವರ ನಿಧನಕ್ಕೆ ದೇಶಾದ್ಯಂತ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಏರ್ ಇಂಡಿಯಾ ಅಪಘಾತ ದುರಂತದಲ್ಲಿ 242 ಪ್ರಯಾಣಿಕರ ಪೈಕಿ 170 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಖಚಿತಪಡಿಸಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾ B787 ಡ್ರೀಮ್ಲೈನರ್ ವಿಮಾನ, AI 171ಅಹಮದಾಬಾದ್ನಿಂದ ಲಂಡನ್ (ಗ್ಯಾಟ್ವಿಕ್) ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆದ 5 ನಿಮಿಷಗಳಲ್ಲಿ ವಸತಿ ಪ್ರದೇಶಕ್ಕೆ (ಮೇಘನಿ ನಗರ) ಅಪ್ಪಳಿಸಿತು ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನವನ್ನು ಸುಮಿತ್ ಸಭರ್ವಾಲ್ ಕಮಾಂಡ್ ಮಾಡಿದ್ದರು ಮತ್ತು ಸಹ ಪೈಲಟ್ ಕ್ಲೈವ್ ಕುಂದರ್ ಇದ್ದರು. ವಿಮಾನದಲ್ಲಿ 230 ಮತ್ತು ಇಬ್ಬರು ಮಕ್ಕಳು ಇದ್ದರು ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ದುರಂತವು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ, ಅದರಿಂದ ಬಾಧಿತರಾದ ಪ್ರತಿಯೊಬ್ಬರೊಂದಿಗೂ ನನ್ನ ಆಲೋಚನೆಗಳು ಇವೆ. ಸಂತ್ರಸ್ತರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿರುವ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಅವರು ತಿಳಿಸಿದ್ದಾರೆ.