2ಜಿ ಹಗರಣ: ಎ.ರಾಜಾ ಮತ್ತಿತರರ ಖುಲಾಸೆ ಪ್ರಶ್ನಿಸಿದ ಅರ್ಜಿಗೆ ಕೋರ್ಟ್‌ ಸಮ್ಮತಿ

Update: 2024-03-22 06:38 GMT

ನವದೆಹಲಿ, ಮಾ. 22 - 2ಜಿ ತರಂಗಾಂತರ ಹಂಚಿಕೆ ಹಗರಣ ಪ್ರಕರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ಎ ರಾಜಾ, ಸಂಸ್ಥೆಗಳು ಮತ್ತು ಇತರರ ಖುಲಾಸೆಯನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಅಂಗೀಕರಿಸಿದೆ. 

ʻಸಲ್ಲಿಸಿರುವ ದಾಖಲೆಗಳು ಮತ್ತು ಕಕ್ಷಿದಾರರ ವಕೀಲರು ಸಲ್ಲಿಸಿದ ಆಧಾರಗಳನ್ನು ಪರಿಗಣಿಸಿ, ಸಿಬಿಐ ಸಲ್ಲಿಸಿದ ಪ್ರಕರಣದ ಆಳವಾದ ಪರಿಶೀಲನೆ ಮತ್ತು ಮೇಲ್ಮನವಿಯನ್ನು ವಿವರವಾಗಿ ಆಲಿಸುವ ಅಗತ್ಯವಿದೆ,ʼ ಎಂದು ನ್ಯಾ. ದಿನೇಶ್ ಕುಮಾರ್ ಶರ್ಮಾ ಹೇಳಿದರು. ʻಮೇಲ್ಮನವಿಯನ್ನು ಮೇ ತಿಂಗಳಲ್ಲಿ ವಿಚಾರಣೆಗೆ ಪಟ್ಟಿ ಮಾಡಿʼ ಎಂದು ನ್ಯಾಯಾಧೀಶರು ಸೂಚಿಸಿದರು. 

2018ರಲ್ಲಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧಅರ್ಹತೆ ಆಧರಿಸಿ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಸಿಬಿಐಗೆ ʻಲೀ‌ವ್‌ ಟು ಅಪೀಲ್‌ʼ(ಕೆಳಗಿನ ನ್ಯಾಯಾಲಯದ ತೀರ್ಪನ್ನುಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ನೀಡಿದ ಅನುಮತಿ) ನೀಡಿತ್ತು. ನ್ಯಾಯಾಧೀಶರು ಮಾರ್ಚ್ 14 ರಂದು ಈ ಕುರಿತ ನಿರ್ಧಾರವನ್ನು ಕಾಯ್ದಿರಿಸಿದ್ದರು. 

ವಿಶೇಷ ನ್ಯಾಯಾಲಯ ಡಿಸೆಂಬರ್ 21, 2017 ರಂದು 2ಜಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಮತ್ತು ಇಡಿ ಪ್ರಕರಣಗಳಲ್ಲಿ ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಇತರರನ್ನು ಖುಲಾಸೆಗೊಳಿಸಿತ್ತು.

Tags:    

Similar News