ಪಿತ್ರೋಡಾ ಹೇಳಿಕೆಯಲ್ಲಿ ಜನಾಂಗೀಯ ದ್ವೇಶದ ಧ್ವನಿಯಿಲ್ಲ. ಅದರಲ್ಲಿರುವುದು ದೇಶದ ಬಹುತ್ವದ ಶ್ಲಾಘನೆ

ಸ್ಯಾಮ್‌ ಪಿತ್ರೋಡಾ ಯೋಚಿಸುತ್ತಿರಬಹುದು. ಹಾಗಾದರೆ ತಮಗೆ ಆಘಾತ ಉಂಟುಮಾಡಿದ್ದಾರೂ ಯಾವುದು? ಪಿತ್ರೋಡಾ ಭಾರತದ ಬಹುತ್ವ, ವೈವಿಧ್ಯತೆಯನ್ನು ಮೆಚ್ಚಿ ಮಾತನಾಡಿದ್ದರು. ವೈವಿಧ್ಯತೆಯನ್ನು ಶ್ಲಾಘಿಸಿದ್ದರು. ಗ್ರಹೀತ ಸಾಂಸ್ಕೃತಿಕ ಭಿನ್ನತೆಗಳ ಹೊರತಾಗಿಯೂ ಸ್ವಾತಂತ್ರ್ಯದ 75 ವರ್ಷಗಳ ನಂತರವೂ, ದೇಶ ಒಂದಾಗಿಯೇ ಉಳಿದಿರುವುದರನ್ನು ಅವರು ಅತ್ಯಂತ ಪ್ರೀತಿಯಿಂದ ಹೇಳಿದ್ದರು. ಆದರೆ, ಅವರ ಮಾತಿನ ಭಾವ ಅರ್ಥವಾಗುವ ಮುನ್ನವೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದ ವೇಳೆ ಪಿತ್ರೋಡಾ ಅವರ ಮೇಲೆ ಜನಾಂಗೀಯ ದ್ವೇಷದ ಆರೋಪ ಮಾಡಿದರು. ಪಿತ್ರೋಡಾ ಗೆ ನಿಜಕ್ಕೂ, ಇದು ಆಘಾತಕಾರಿಯಾದುದೇ.

Update: 2024-05-10 12:48 GMT

ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಅವರನ್ನು ಮುಜುಗರಕ್ಕೆ ಒಳಗಾಗಿಸುವ ಯತ್ನ. ಇಂಥ ಪ್ರಯತ್ನ, ದೇಶದ ತಂತ್ರಜ್ಞಾನಿಕ ಪ್ರಗತಿಗೆ ತಮ್ಮ ಬದುಕಿನ ಬಹುಕಾಲವನ್ನು ನೀಡಿರುವ ವ್ಯಕ್ತಿಯೊಬ್ಬರಿಗೆ ತೋರುವ ಅಗೌರವ ಮತ್ತು ಕೃತಘ್ನ ನಡೆ

ಸ್ಯಾಮ್‌ ಪಿತ್ರೋಡಾ ಯೋಚಿಸುತ್ತಿರಬಹುದು. ಹಾಗಾದರೆ ತಮಗೆ ಆಘಾತ ಉಂಟುಮಾಡಿದ್ದಾರೂ ಯಾವುದು? ಪಿತ್ರೋಡಾ ಭಾರತದ ಬಹುತ್ವ, ವೈವಿಧ್ಯತೆಯನ್ನು ಮೆಚ್ಚಿ ಮಾತನಾಡಿದ್ದರು. ವೈವಿಧ್ಯತೆಯನ್ನು ಶ್ಲಾಘಿಸಿದ್ದರು. ಗ್ರಹೀತ ಸಾಂಸ್ಕೃತಿಕ ಭಿನ್ನತೆಗಳ ಹೊರತಾಗಿಯೂ ಸ್ವಾತಂತ್ರ್ಯದ 75 ವರ್ಷಗಳ ನಂತರವೂ, ದೇಶ ಒಂದಾಗಿಯೇ ಉಳಿದಿರುವುದರನ್ನು ಅವರು ಅತ್ಯಂತ ಪ್ರೀತಿಯಿಂದ ಹೇಳಿದ್ದರು. ಆದರೆ, ಅವರ ಮಾತಿನ ಭಾವ ಅರ್ಥವಾಗುವ ಮುನ್ನವೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರದ ವೇಳೆ ಪಿತ್ರೋಡಾ ಅವರ ಮೇಲೆ ಜನಾಂಗೀಯ ದ್ವೇಷದ ಆರೋಪ ಮಾಡಿದರು. ಪಿತ್ರೋಡಾ ಗೆ ನಿಜಕ್ಕೂ, ಇದು ಆಘಾತಕಾರಿಯಾದುದೇ.

ಮೋದಿ ಅವರ ಆರೋಪವನ್ನು ಇದಮಿತ್ಧಂ ಎಂದು ಸ್ವೀಕರಿಸುವ ಈ ಕಾಲದಲ್ಲಿ ಪಿತ್ರೋಡಾ ಅವರ ಮಾತನ್ನು ವರ್ಣಭೇದ ನೀತಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಏಕೆಂದರೆ, ಅವರು ವೈವಿಧ್ಯತೆಯಲ್ಲಿ ಏಕತೆಯ ಅಂಶವನ್ನು ಒತ್ತಿಹೇಳಲು ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ, ಈಶಾನ್ಯ ಭಾರತೀಯರನ್ನು ಚೀನೀಯರಿಗೆ, ಉತ್ತರ ಭಾಗದವರನ್ನು ಬಿಳಿಯರಿಗೆ ಮತ್ತು ಪಶ್ಚಿಮ ಭಾರತೀಯರನ್ನು ಅರಬ್ಬರಿಗೆ ಪಿತ್ರೋಡಾ ಹೋಲಿಸಿದ್ದಕ್ಕೆ ಮೋದಿ ಬೇರೆಯದೇ ಅರ್ಥ ಕಲ್ಪಿಸಿದರು.

ಪ್ರಧಾನಿಯವರ ಸೂಚನೆಯಂತೆ ಸಂಘ ಪರಿವಾರದಿಂದ ಬಿರುಗಾಳಿ ರೂಪದಲ್ಲಿ ಸರಣಿ ಪ್ರತಿಕ್ರಿಯೆ ಆರಂಭಗೊಂಡು, ಕೆಲವೇ ಗಂಟೆಗಳಲ್ಲಿ ಟೀಕೆಗಳ ಸುರಿಮಳೆಯಾಯಿತು. ಇದು ದೇಶದ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಬಿಸಿ ಮುಟ್ಟಿಸಿತು. ಇದರ ಹಿಂದೆಯೇ ಪಿತ್ರೋಡಾ ಅವರನ್ನು ಕಾಂಗ್ರೆಸ್‌ ಪಕ್ಷ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು. ಪಕ್ಷದ ವಕ್ತಾರ ಜೈರಾಮ್ ರಮೇಶ್ ರಂಥವರೇ ಪಿತ್ರೋಡಾ ಅವರ ಹೇಳಿಕೆಯ ಅಂತರಾಳವನ್ನು ಅರ್ಥಮಾಡಿಕೊಳ್ಳದೆ ಇದು ʻಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲದ ಹೋಲಿಕೆʼ ಎಂದು ಹೇಳಿಕೆ ನೀಡಿದರು.

ಇದು ವರ್ಣಬೇಧ ನೀತಿಯೇ?

ಪಿತ್ರೋಡಾ ಅವರು ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸುವ ಮೂಲಕ ಸೂಕ್ಷ್ಮ ವಿಷಯವೊಂದನ್ನು ಸ್ಪರ್ಶಿಸಿದ್ದರು. ಭಾರತೀಯರು, ವಿಶೇಷವಾಗಿ ದಕ್ಷಿಣ ಭಾರತೀಯರು, ಚರ್ಮದ ಬಣ್ಣದ ವಿಷಯದಲ್ಲಿ ಸೂಕ್ಷ್ಮವಾಗಿರುತ್ತಾರೆ. ವೈವಾಹಿಕ ಜಾಹೀರಾತುಗಳು ʻಸುಂದರ, ಗೋಧಿ ಮೈಬಣ್ಣದʼ ಅನುರೂಪದ ಜೋಡಿಯ ವಿನಂತಿಗಳಿಂದ ತುಂಬಿರುತ್ತವೆ ಮತ್ತು ಅನೇಕರು ತಮ್ಮ ಕಪ್ಪು, ಕಂದು ಬಣ್ಣದ ತೀವ್ರತೆಯನ್ನು ಕಡಿಮೆ ಮಾಡಲು ಟಾಲ್ಕಂ ಪೌಡರ್‌ ಹಚ್ಚುತ್ತಾರೆ. ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸುವುದು ಬಹುಶಃ ಅತ್ಯಂತ ಕೆಟ್ಟ ನಿಂದೆ ಎಂದುಕೊಳ್ಳಲಾಗುತ್ತದೆ. ಇಲ್ಲಿ ಸೇರಿಸಬೇಕಾದ ಅಂಶವೆಂದರೆ, ನೀವು ಆಫ್ರಿಕನ್ನರಷ್ಟೇ ಕಪ್ಪು ಬಣ್ಣದ ಚರ್ಮ ಹೊಂದಿರುವಿರಿ. ಆದರೆ, ಇದು ವರ್ಣಬೇಧವೇ? ಮತ್ತು, ಆಫ್ರಿಕನ್ನರು ಎಂದರೆ ಅವರ ಚರ್ಮದ ಬಣ್ಣವನ್ನು ಮೀರಿದ್ದು ಏನೂ ಇಲ್ಲವೇ?

ಇತರ ಪ್ರಾಚೀನ ನಾಗರಿಕತೆಗಳಂತೆ ಆಫ್ರಿಕನ್ ಸಮುದಾಯವು ಭೂಗ್ರಹಕ್ಕೆ ಅಗಾಧ ಕೊಡುಗೆ ನೀಡಿದೆ. ಜಗತ್ತಿನ ಆರಂಭಿಕ ಜ್ಞಾನ ವ್ಯವಸ್ಥೆ ಗಳು ಆಫ್ರಿಕಾದಿಂದ ಹೊರಹೊಮ್ಮಿದವು. ಇತಿಹಾಸಕಾರರ ಪ್ರಕಾರ, ಪುರಾತನ ಈಜಿಪ್ಟ್ ಅತ್ಯಂತ ಪರಿಣಾಮಕಾರಿ ಆಡಳಿತಾತ್ಮಕ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಸಂಕೀರ್ಣ ಧಾರ್ಮಿಕ ವ್ಯವಸ್ಥೆಗಳು ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಕಲೆ ಹಾಗೂ ವಾಸ್ತುಶಿಲ್ಪಕ್ಕೆ ಒಂದು ಉದಾಹರಣೆ. ಈಜಿಪ್ಟಿನ ಪಿರಮಿಡ್‌ಗಳು ನಿರ್ಮಾಣದ ಅದ್ಭುತ ದೃಷ್ಟಾಂತಗಳಾಗಿದ್ದು, ಇಂದಿಗೂ ಜಗತ್ತನ್ನು ಸೆಳೆಯುತ್ತಿವೆ.

ಕಪ್ಪು ಖಂಡ: ಆಫ್ರಿಕಾಕ್ಕೆ ಪಾಶ್ಚಿಮಾತ್ಯ ವಸಾಹತುಶಾಹಿ ಅತ್ಯಂತ ಹಾನಿಕರವಾಗಿ ಪರಿಣಮಿಸಿತು ಮತ್ತು ಶ್ವೇತವರ್ಣೀಯ ಯುರೋಪಿಯನ್ ವಸಾಹತುಶಾಹಿಗಳು ಅದು ʻಕಪ್ಪು ಖಂಡʼ ವೆಂಬ ತಪ್ಪುದಾರಿಗೆಳೆಯುವ ಚಿತ್ರವನ್ನುಸೃಷ್ಟಿಸಿದರು ಮತ್ತು ಅದನ್ನು ಶಾಶ್ವತಗೊಳಿಸಿದರು. ದುರದೃಷ್ಟವಶಾತ್, ಈ ಮಿಥ್ಯೆ ಇಂದಿಗೂ ಮುಂದುವರಿದಿದೆ. ಇಂದು ಪ್ರಪಂಚ ಬ್ಲೂಸ್, ಜಾಝ್, ರೆಗ್ಗೀ ಅಥವಾ ಬೀಟ್ ಸಂಗೀತದ ಯಾವುದೇ ಜನಪ್ರಿಯ ನವೀನ ಪ್ರಕಾರಗಳಿಗೆ ತಲೆದೂಗಿ ನರ್ತಿಸುತ್ತಿದ್ದರೆ, ಅದರ ಶ್ರೇಯ ಆಫ್ರಿಕನ್ನರಿಗೆ ಸಲ್ಲುತ್ತದೆ.

ಭಾರತವು ಮಹಾತ್ಮ ಗಾಂಧೀಜಿಯವರಿಗೆ ಋಣಿಯಾಗಿದ್ದರೆ, ಅವರು ರಾಜಕೀಯವಾಗಿ ಬೆಳೆದಿದ್ದು ದಕ್ಷಿಣ ಆಫ್ರಿಕಾದಲ್ಲಿ ಮತ್ತುಆನಂತರ ಅವರು ಸಾರ್ವಕಾಲಿಕ ಎತ್ತರದ ನಾಯಕರಾಗಿ ಬೆಳೆದರು; ಅಂತಿಮವಾಗಿ ದೇಶವನ್ನು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕೆ ಕರೆದೊಯ್ದರು ಎಂಬುದನ್ನು ಯಾರೂ ಮರೆಯಲಾರರು. ಗಾಂಧಿಯಿಂದ ಪ್ರೇರಿತರಾದ ಇನ್ನೊಬ್ಬ ಮಹಾನ್ ರಾಜಕಾರಣಿ ನೆಲ್ಸನ್ ಮಂಡೇಲಾ ಅವರು ಸೇಡು, ರಕ್ತಪಾತ ಮತ್ತು ಹಿಂಸೆಗೆ ಪರ್ಯಾಯವಿದೆ ಎಂದು ಜಗತ್ತಿಗೆ ತೋರಿಸಿದರು. ಮಂಡೇಲಾ ಅವರ ಸತ್ಯ ಮತ್ತು ಸಮನ್ವಯ ಆಯೋಗವು ವರ್ಣಭೇದ ನೀತಿಯನ್ನು ರದ್ದುಗೊಳಿಸಿದಾಗ, ಭಾರಿ ಪ್ರಮಾಣದ ಹಿಂಸಾಚಾರ ಮತ್ತು ರಕ್ತಪಾತವನ್ನು ತಡೆಯಿತು. ತಮ್ಮ ದೇಶದ ಸಂವಿಧಾನದ ಹಿಂದಿನ ಆತ್ಮವಾಗಿದ್ದ ಮಂಡೇಲಾ ಅವರನ್ನು ಆಧುನಿಕ ಜಗತ್ತಿನ ಅತ್ಯಂತ ವಿಕಾಸಗೊಂಡ ಮತ್ತು ಪ್ರಗತಿಪರ ನಾಯಕ ಎಂದು ಈಗಾಗಲೇ ಒಪ್ಪಿಕೊಳ್ಳಲಾಗಿದೆ.

ಮಂಡೇಲಾ ಅವರಿಂದ ಪ್ರೇರಿತವಾದ ರುವಾಂಡಾ, 1994 ರ ನರಮೇಧದ ನಂತರ ತನ್ನದೇ ಆದ ಸತ್ಯ ಮತ್ತು ಸಮನ್ವಯ ಕಾರ್ಯಕ್ರಮ ವನ್ನು ಅಳವಡಿಸಿಕೊಂಡು, ಮತಿಹೀನ ಹಿಂಸೆ ಮತ್ತು ಸೇಡು ತೀರಿಸಿಕೊಳ್ಳುವಿಕೆಯ ಸಾಧ್ಯತೆಗಳನ್ನು ಕೊನೆಗೊಳಿಸಿತು. ವಸಾಹತೀಕರಣದ ನಂತರ ಆಫ್ರಿಕಾ ಗಮನಾರ್ಹ ಪ್ರಗತಿ ಸಾಧಿಸಿದೆ. ಆಫ್ರಿಕದ ಕೆಲವು ಭಾಗಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಹಾಗೂ ಆಂತರಿಕ ಘರ್ಷಣೆಗಳು ಇವೆ. ಆದರೆ, ತಾಂಜಾನಿಯಾ, ದಕ್ಷಿಣ ಆಫ್ರಿಕ ಮತ್ತು ಬೋಟ್ಸ್ವಾನಾದಂತಹ ದೇಶಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ ಅಥವಾ ಪ್ರಗತಿಯ ದಾರಿಯಲ್ಲಿವೆ.

ವೈವಿಧ್ಯತೆಯ ಶ್ಲಾಘನೆ:

ಹಾಗಾದರೆ, ವರ್ಣಭೇದ ನೀತಿ ಎಂದರೇನು? ಜನ ಸಮುದಾಯವೊಂದು ಅವರ ಜನಾಂಗ ಅಥವಾ ಜನಾಂಗೀ ಯತೆಯ ಆಧಾರದ ಮೇಲೆ ತಾರತಮ್ಯ ಮತ್ತು ಅನ್ಯಾಯಕ್ಕೆ ಒಳಗಾಗುವುದು. ಜನಾಂಗೀಯ ವಿಶಿಷ್ಟೀಕರಣ ಎಂದರೆ? ಒಬ್ಬ ವ್ಯಕ್ತಿಯನ್ನು ಅವನ/ಅವಳ ಜನಾಂಗೀಯತೆ, ಧರ್ಮ ಅಥವಾ ರಾಷ್ಟ್ರೀಯತೆ ಆಧಾರದ ಮೇಲೆ ಅನಿರ್ದಿಷ್ಟ ಕಾರಣಕ್ಕಾಗಿ ಶಂಕಿಸುವುದು. ಆದರೆ, ಪಿತ್ರೋಡಾ ಏನು ಹೇಳಲು ಪ್ರಯತ್ನಿಸಿದ್ದಾದರೂ ಏನು? ಪಿತ್ರೋಡಾ ಅವರು ಭಾರತ ಮತ್ತು ಅದರ ವೈವಿಧ್ಯತೆಯನ್ನು ಹೊಗಳಿದ್ದರು. ; ಪರಸ್ಪರ ಭಿನ್ನವಾಗಿರುವ ಗುಂಪುಗಳು ಕಳೆದ 75 ವರ್ಷಗಳಿಂದ ಒಂದು ರಾಷ್ಟ್ರದ ಭಾಗವಾಗಿ ಶಾಂತಿ ಮತ್ತು ಸೌಹಾರ್ದದಿಂದ ಬದುಕುತ್ತಿವೆ ಎಂದು ಹೇಳಿದ್ದರು. ಅವರ ಹೇಳಿಕೆಯಲ್ಲಿ ತಪ್ಪೇನಿದೆ? ಅವರು ವಿದೇಶಿಗರಿಗೆ ವಿಷಯವನ್ನುಸ್ಪಷ್ಟಪಡಿಸಲು, ದೇಶದ ವಿವಿಧ ಭಾಗಗಳಲ್ಲಿನ ಜನರನ್ನು ಪ್ರಪಂಚದ ಇತರ ಭಾಗಗಳ ಜನರಿಗೆ ಹೋಲಿಸಿದರು. ಹೋಲಿಕೆಗಳ ರೀತಿಯಲ್ಲಿ ವ್ಯತ್ಯಾಸವಿರಬಹುದು. ಆದರೆ, ಪಿತ್ರೋಡಾ ಹೇಳಿದ್ದುಖಂಡಿತವಾಗಿಯೂ ಜನಾಂಗೀಯ ದ್ವೇಷ ವಲ್ಲ ಮತ್ತು ಅದು ಅವರ ಉದ್ದೇಶ ಕೂಡ ಆಗಿರಲಿಲ್ಲ

ಜನಾಂಗೀಯ ಪ್ರತಿಕ್ರಿಯೆ: ವಿಪರ್ಯಾಸವೆಂದರೆ, ಪಿತ್ರೋಡಾ ಅವರ ಹೇಳಿಕೆಗೆ ಬಂದ ಪ್ರತಿಕ್ರಿಯೆಗಳೇ ಜನಾಂಗೀಯ ದ್ವೇಶವನ್ನು ಬಿತ್ತುವಂತೆ ಇದ್ದವು. ಪಿತ್ರೋಡಾ ಅವರು ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದಾರೆ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರವಾಗಿ ಕಾಣಿಸಿಕೊಂಡವು. ಇಬ್ಬರೂ ಕಪ್ಪು ಚರ್ಮದವರು ಎನ್ನುವುದನ್ನು ನಕಾರಾತ್ಮಕವಾಗಿ ಅರ್ಥೈಸಲಾಯಿತು. ಇದನ್ನು ಅರಿಯದ ಪಿತ್ರೋಡಾ, ಕಪ್ಪು/ಕಂದು ಬಣ್ಣದ ತ್ವಚೆಯನ್ನು ಶ್ವೇತ ವರ್ಣಕ್ಕೆ ತಿಳಿಗೊಳಿಸುವುದಾಗಿ ಹೇಳಿಕೊಳ್ಳುವ ʻಫೇರ್ ಅಂಡ್ ಲವ್ಲಿʼ ಕ್ರೀಮ್‌ನ ಅತ್ಯಧಿಕ ಗ್ರಾಹಕರು ಇರುವ ಮತ್ತು ಕಂದು/ಕಪ್ಪು ಚರ್ಮದ ವ್ಯಕ್ತಿಗಳು ಸಾಮಾಜಿಕವಾಗಿ ಪರಾಧೀನರಾಗಿರುವ ದೇಶದಲ್ಲಿ ಈ ಮಾತುಗಳನ್ನು ಹೇಳಿದ್ದು, ಅಪಾರ್ಥಕ್ಕೆ ಕಾರಣವಾಯಿತು.

ಪೂರ್ವ ಭಾಗದ ಭಾರತೀಯರನ್ನು ಚೀನಿಯರಿಗೆ ಹೋಲಿಸುವ ಮೂಲಕ ಅವರು ಮತ್ತೊಂದು ಭಾರಿ ತಪ್ಪು ಮಾಡಿದರು. ದೇಶದ ಉಳಿದ ಭಾಗಗಳ ಹೆಚ್ಚಿನವರಿಗೆ ಈಶಾನ್ಯದ ಜನರ ವೈಶಿಷ್ಟ್ಯಗಳನ್ನು ಚೀನೀಯರು, ಜಪಾನೀಯರು ಅಥವಾ ಇಂಡೋ-ಚೀನಾ ಪ್ರದೇಶದವರಿಂದ ಪ್ರತ್ಯೇಕಿಸಲು ಬರುವುದಿಲ್ಲ ಎಂಬುದು ಸತ್ಯ. ಇದು ಕೆಲವೊಮ್ಮೆ ಈಶಾನ್ಯ ರಾಜ್ಯಗಳ ಭಾರತೀಯರಿಗೆ ಮುಜುಗರ ಉಂಟುಮಾಡುತ್ತದೆ; ಅವರು ಕೆಲವೊಮ್ಮೆ ಸಂಕಷ್ಟದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎನ್ನುವುದು ವಾಸ್ತವ ಸತ್ಯ.

ಜನಾಂಗೀಯ ಅರ್ಥವಿಲ್ಲ:

ಪಿತ್ರೋಡಾ ಅವರು ಪೂರ್ವ ಭಾರತದ ವ್ಯಕ್ತಿಗಳ ವೈಶಿಷ್ಟ್ಯಗಳನ್ನು ಚೀನಿಯರಿಗೆ ಹೋಲಿಸಿದಾಗ, ಅದು ಭಾರತದ ವೈವಿಧ್ಯತೆಯ ಮೆಚ್ಚಿಗೆ ಆಗಿತ್ತೇ ಹೊರತು ಜನಾಂಗೀಯ ದ್ವೇಶದ ಅರ್ಥವನ್ನು ಹೊಂದಿರಲಿಲ್ಲ.

ಪಿತ್ರೋಡಾ ಅವರ ಮೇಲೆ ದಾಳಿ ಮಾಡುವ ಮೊದಲು ಬಿಜೆಪಿ ಮತ್ತು ಅದರ ಉನ್ನತ ನಾಯಕರು ಸ್ವಲ್ಪವಾದರೂ ಯೋಚಿಸಬೇಕಿತ್ತು. ಆದರೆ, ಕಾಂಗ್ರೆಸ್‌ ಮಾಡಿದ್ದಾದರೂ ಏನು? ಪಿತ್ರೋಡಾ ಪರವಾಗಿ ನಿಲ್ಲುವ ಬದಲು ಮತ್ತು ಬಿಜೆಪಿಯ ನಿರೂಪಣೆಯನ್ನು ಪ್ರತಿರೋಧಿಸುವ ಬದಲು ಅವರನ್ನು ಕೈಬಿಟ್ಟು ವಿವಿಧತೆಯಲ್ಲಿ ಏಕತೆ ಎಂಬ ತನ್ನ ನಿಲುವಿಗೆ ತಾನೆ ಧಕ್ಕೆ ತಂದುಕೊಂಡಿತು. ಬಿಕ್ಕಟ್ಟು ಎದುರಾದಾಗ ಎದೆಕೊಟ್ಟು ನಿಲ್ಲುವ ಧೈರ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿಕೊಂಡಿತು.

ಇಂಥ ತಿಳುವಳಿಕೆಯ ಮಾತುಗಳನ್ನು ಆಡಿಯೂ ವಿವಾದಕ್ಕೋಳಗಾದ ಈ ಸ್ಯಾಮ್ ಪಿತ್ರೋಡಾ ಯಾರು? ಅವರು ಪ್ರಾಸಂಗಿಕವಾಗಿ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಹುದು. ಆದರೆ, ಭಾರತದ ಟೆಲಿಕಾಂ ಮೂಲಸೌಕರ್ಯಗಳ ಆರಂಭಿಕ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಅವರ ಕೊಡುಗೆ ಅಪಾರ. ಎಂಭತ್ತರ ದಶಕದಲ್ಲಿ ರಾಜೀವ್ ಗಾಂಧಿ ಅವರ ಸರ್ಕಾರವನ್ನು ಅವರ ದೂರದೃಷ್ಟಿಯ ಸಲಹೆಗಳು ದೇಶದ ಮುನ್ನಡೆಗೆ ಸಹಕಾರಿಯಾದವು. ಇದು ಆನಂತರ ವಿಶ್ವವನ್ನು ವ್ಯಾಪಿಸಿದ ತಾಂತ್ರಿಕ ಕ್ರಾಂತಿಯ ಮೊದಲ ಪ್ರಯೋಜನವನ್ನು ಭಾರತವು ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿತು.

ಪಿತ್ರೋಡಾ ವೃತ್ತಿ ರಾಜಕಾರಣಿಯಲ್ಲ. ಅಸ್ತಿತ್ವ ಉಳಿಸಿಕೊಳ್ಳಲು ಅವರು ರಾಜಕೀಯದಲ್ಲಿ ಇರಬೇಕಾದ ಅಗತ್ಯವಿಲ್ಲ. ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅವರ ಹೆಜ್ಜೆಗುರುತು ಈಗ ಇತಿಹಾಸ. ಆದ್ದರಿಂದ, ಪಿತ್ರೋಡಾ ಅವರಂಥವರು ದೇಶವನ್ನು ಕೀಳಾಗಿಸಲು ಅಥವಾ ತನ್ನ ಜನರ ಗೌರವವನ್ನು ಕೆಳಗಿಳಿಸುವ ಹೇಳಿಕೆಯನ್ನು ಏಕೆ ನೀಡುತ್ತಾರೆ.? ಪಿತ್ರೋಡಾ ಅವರ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸುವುದು ಮತ್ತು ಜಗತ್ತಿನ ಎದುರು ಅವರನ್ನು ಮುಜುಗರಕ್ಕೀಡುಮಾಡುವುದು. ಅವರ ಸೇವೆಯನ್ನು ಬಳಸಿಕೊಂಡ ರಾಷ್ಟ್ರದ ಕೃತಘ್ನ ನಡೆಯಾಗುತ್ತದೆ.


Tags:    

Similar News