ಝಾನ್ಸಿ ರಾಣಿಯಿಂದ ಕನಿಮೋಳಿ ತನಕ ಮಹಿಳೆಯರಿಗಿಲ್ಲ ಪ್ರಧಾನ ಪಾತ್ರ

ಮಹಿಳಾ ನಾಯಕಿ ಯಾವತ್ತೂ ಮಹತ್ವಾಕಾಂಕ್ಷಿಯಾಗಿರಬಾರದು. ಏಕಪಕ್ಷೀಯ ನಿರ್ಧಾರಗಳನ್ನು ಬಿಲ್-ಕುಲ್ ಕೈಗೊಳ್ಳುವಂತಿಲ್ಲ. ‘ಆ ಪುರುಷ’ ಮರಳಿ ಬಂದಾಗ ಯಾವ ಚಕಾರವೂ ಎತ್ತದೆ ಎದ್ದು ಹೊರಟುಬಿಡಬೇಕು…;

Update: 2025-06-04 00:30 GMT

ತಮ್ಮ ರಾಜ್ಯಗಳನ್ನು ಚಾಣಾಕ್ಷತನದಿಂದ ಮುನ್ನಡೆಸಿದ ಮತ್ತು ಶತ್ರುಗಳೊಂದಿಗೆ ಧೈರ್ಯದಿಂದ ಹೋರಾಡಿದ ದಿಟ್ಟತನದ ಭಾರತೀಯ ರಾಣಿಯರ ಕಥೆಗಳನ್ನು ಕೇಳುತ್ತ ಬೆಳೆದವರು ನಾವು. ಆದರೂ ನಮ್ಮ ಝಾನ್ಸಿ ರಾಣಿ ಅಥವಾ ರಾಣಿ ಚೆನ್ನಮ್ಮ ಅಥವಾ ವೇಲು ನಾಚಿಯಾರ್ ಆಗಿರಲಿ, ಅವರೆಲ್ಲರ ಅಧಿಕಾರಾರೋಹಣ ನಡೆದಿದ್ದು ಸಂಕಷ್ಟದ ಸಂದರ್ಭಗಳಲ್ಲಿ. ಸಾಮಾನ್ಯವಾಗಿ ಇವೆಲ್ಲ ಯಾವಾಗ ಸಂಭವಿಸುತ್ತಿತ್ತು? ಗಂಡ ಅಥವಾ ತಂದೆ ನಿಧನರಾದಾಗ ಮತ್ತು ಅಧಿಕಾರವನ್ನು ವಹಿಸಿಕೊಳ್ಳಲು ವಯಸ್ಕ ಪುರುಷ ಉತ್ತರಾಧಿಕಾರಿ ಇಲ್ಲದೇ ಇದ್ದಾಗ.

ಈಗ 21ನೇ ಶತಮಾನಕ್ಕೆ ಪುಟ ತಿರುಗಿಸಿ ನೋಡಿ, ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯೇ ಆಗಿಲ್ಲ.

ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕಲ್ಪನಾ ಸೊರೇನ್. ಅರ್ಹ ಎಂಜಿನಿಯರ್ ಹಾಗೂ ಉದ್ಯಮಿ. ಅವರ ಪತಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಇಡಿ ಪ್ರಕರಣದಲ್ಲಿ ಬಂಧಿತರಾದಾಗ ಅವರು ತಮ್ಮ ಪಾಡಿಗೆ ತಾವು ಖಾಸಗಿ ಜೀವನವನ್ನು ನಡೆಸುತ್ತಿದ್ದರು. ಆಗ ರಾಜಕೀಯದಲ್ಲಿ ಹೊಸಬರಾದ ಕಲ್ಪನಾ ಅವರನ್ನು ತಕ್ಷಣವೇ 2024ರ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್ ನ ಇಂಡಿಯಾ ಒಕ್ಕೂಟದ ಜೆಎಂಎಂ ಪಕ್ಷದ ನಾಯಕರಾಗಿ ಬಿಂಬಿಸಲಾಯಿತು. ಮುಂದೆ ಅವರು ರಾಜ್ಯ ವಿಧಾನಸಭೆಯಲ್ಲಿಯೂ ಒಂದು ಸ್ಥಾನವನ್ನು ಗಳಿಸಿದರು.

ಆದರೆ ಅಷ್ಟರಲ್ಲಾಗಲೇ ಹೇಮಂತ್ ಜೈಲಿನಿಂದ ಹೊರಬಂದರು ಹಾಗೂ ಮತ್ತೆ ಮುಖ್ಯಮಂತ್ರಿಯಾದರು. ಅಷ್ಟಾಗುತ್ತಲೇ ಕಲ್ಪನಾ ಹಿನ್ನೆಲೆಗೆ ಸರಿದರು.

ಇದಕ್ಕೂ ಮೊದಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಉದಾಹರಣೆ ನಮ್ಮ ಮುಂದೆ ಇದೆ. 2023ರಲ್ಲಿ ಚಂದ್ರಬಾಬು ನಾಯ್ದು ಅವರು ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣದಲ್ಲಿ ಜೈಲು ಸೇರಿದಾಗ, ಅವರ ಪಕ್ಷ ತೆಲುಗು ದೇಶಂ ಪಕ್ಷಕ್ಕೆ ಅಗತ್ಯವಿದ್ದುದು ನಾರಾ ಭುವನೇಶ್ವರಿ.

ಆಗ ಅವರು ಬೀದಿಗಿಳಿದು ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಜನರನ್ನು ಭೇಟಿಯಾದರು. ಪಕ್ಷದ ನಾಯಕರ ತಾಳಕ್ಕೆ ತಕ್ಕಂತೆ ಕುಣಿದರು. ಪಕ್ಷದ ಘನತೆಗೆ, ಪ್ರತಿಷ್ಠೆಗೆ ಕುಂದುಂಟಾಗದಂತೆ ಬೇಕಾದುದನ್ನೆಲ್ಲ ಮಾಡಿದರು. ಬಳಿಕ ನಾಯ್ಡು ಜೈಲಿನಿಂದ ಹೊರಬಂದರು. 2024ರ ಚುನಾವಣೆಯಲ್ಲಿ ಮತ್ತೆ ಮುಖ್ಯಮಂತ್ರಿಯಾದರು. ಇಂದು ಅವರು ಸಿಎಂ ಅವರ ಪತ್ನಿ. ರಾಜಕೀಯೇತರ ಕಾರ್ಯಕ್ರಮಗಳಿಗೆ ಹೋಗಿ ರಿಬ್ಬನ್ ಕಟ್ ಮಾಡಿಬರುತ್ತಾರೆ.

ನಾರಾ ಭುವನೇಶ್ವರಿ ಎನ್.ಟಿ.ರಾಮರಾವ್ ಅವರ ಮಗಳು. 1995ರಲ್ಲಿ ಅಳಿಯ ಚಂದ್ರಬಾಬು ನಾಯ್ಡು ನಡೆಸಿದ ರಾಜಕೀಯ ದಂಗೆಯಲ್ಲಿ ಎನ್.ಟಿ.ಆರ್ ಆಂಧ್ರ ಪ್ರದೇಶ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡಿದ್ದರು. ಆಗ ನಡೆದ ರಾಜಕೀಯವಾಗಿ ಮುಂಚೂಣಿಗೆ ಬಂದವರು ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮೀ ಪಾರ್ವತಿ. ಅಂದು ಅದು ಎಷ್ಟೋ ಮಂದಿ ಪುರುಷ ಮುಖಂಡರಿಗೆ ಗಂಟಲಲ್ಲಿ ತುರುಕಿದ ರೊಟ್ಟಿಯಾಗಿತ್ತು.

ಆದರೆ ಈ ವಿಚಾರದಲ್ಲಿ ತಕ್ಷಣಕ್ಕೆ ನೆನಪಾಗುವ ಹೆಸರು ರಾಬ್ರಿ ದೇವಿ. 1997ರಲ್ಲಿ ಅವರ ಪತಿ ಲಾಲೂ ಪ್ರಸಾದ್ ಯಾದವ್ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲುಪಾಲಾದಾಗ ಗೃಹಿಣಿಯಾಗಿದ್ದವರು ಏಕಾಏಕಿ ಮುಖ್ಯಮಂತ್ರಿ ಪಟ್ಟಕ್ಕೇರಿದರು. ಅವರನ್ನು ಯಾವತ್ತೂ ಪ್ರಾಕ್ಸಿ ಮುಖ್ಯಮಂತ್ರಿ ಎಂದೇ ಕರೆಯಲಾಗುತ್ತಿತ್ತು. ಅದೇನೇ ಆಗಿರಲಿ ಆಕೆ ಎಂಟು ವರ್ಷ ಕಾಲ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದರು ಎಂಬುದನ್ನು ಮರೆಯಲಿಕ್ಕಾಗದು. ಅಂದರೆ ಅಜಮಾಸು ಮೂರು ಅವಧಿ ಕಾಲ. ಇಂದು ಆಕೆ ಕೇವಲ ಎಂಎಲ್ಸಿ ಮತ್ತು ಸಾರ್ವಜನಿಕ ಜೀವನದಿಂದ ಸಂಪೂರ್ಣ ದೂರ.

ಕುಟುಂಬದ ಅಗತ್ಯಾನುಸಾರ

ಭಾರತದಲ್ಲಿ ಮಹಿಳಾ ರಾಜಕೀಯ ಉತ್ತರಾಧಿಕಾರಿಗಳ ಸಾಮರ್ಥ್ಯವನ್ನು ಮೊದಲೇ ಗುರುತಿಸಿ, ಪೋಷಿಸಿ, ಸೂಕ್ತ ಸಮಯದಲ್ಲಿ ಪ್ರತಿಫಲ ನೀಡುವುದು ಅಪರೂಪದಲ್ಲಿ ಅಪರೂಪ. ಈಗ ಚಾಲ್ತಿಯಲ್ಲಿರುವ ಮಾದರಿಯನ್ನೇ ನೋಡಿದರೆ ಒಬ್ಬ ನಾಯಕ ಅನಾರೋಗ್ಯಕ್ಕೆ ಒಳಗಾದಾಗ, ಮರಣಕ್ಕೆ ತುತ್ತಾದಾಗ ಅಥವಾ ಜೈಲು ಸೇರಿಕೊಂಡಾಗ ಮಾತ್ರ ಅವರ ಕುಟುಂಬದ ಮಹಿಳೆ ಸಾರ್ವಜನಿಕ ಜೀವನಕ್ಕೆ ಎಂಟ್ರಿ ಕೊಡುತ್ತಾಳೆ.

ಹಾಗಂತ ಇದಕ್ಕೆ ಷರತ್ತುಗಳಿಲ್ಲವೇ? ಇದ್ದೇ ಇದೆ. ಮೊದಲನೆಯದಾಗಿ ಆಕೆ ಮಹತ್ವಾಕಾಂಕ್ಷಿಯಾಗಿರಬಾರದು. ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಇನ್ನೂ ಮುಖ್ಯವಾದ ಸಂಗತಿ ಎಂದರೆ ಆಕೆ ಮೂಲಭೂತವಾಗಿ ಒಂದು ವ್ಯವಸ್ಥೆಯ ಬಿಡಿ ಭಾಗ. ಅದು ಜನರ ಮನಸ್ಸಿನಿಂದ ಮಾಯವಾಗದಂತೆ ನೋಡಿಕೊಳ್ಳಬೇಕು. ‘ಆ ಪುರುಷ’ ಮರಳಿ ಬಂದಾಗ ಯಾವ ಚಕಾರವೂ ಎತ್ತದೆ ಎದ್ದು ಹೊರಟುಬಿಡಬೇಕು.

ಇನ್ನೂ ಒಂದು ಕುತೂಹಲದ ಸಂಗತಿ ಎಂದರೆ ತಮ್ಮ ಸೀಟುಗಳನ್ನು ಬೆಚ್ಚಗಿಡಲು ಅರ್ಥಾತ್ ಕಾವು ಕೊಡಲು ಅವರ ಪತ್ನಿಯರು, ಸಹೋದರಿಯರು ಅಥವಾ ಮಗಳಿಗೆ ಬಿಟ್ಟುಬಿಡುವುದರಲ್ಲಿ ಅವರು ಸಂತೋಷಪಡುತ್ತಾರೆ. ಒಬ್ಬ ಪುರುಷ ‘ಸ್ಟೆಪ್ನಿ’ ಯಾವತ್ತೂ ಮಹತ್ವಾಕಾಂಕ್ಷಿಯಾಗಿರಬಹುದು.

ಮೊನ್ನೆ ಮೊನ್ನೆ ಹೇಮಂತ್ ಸೊರೇನ್ ಜೈಲು ಸೇರಿದಾಗ ಜಾರ್ಖಂಡ್ ಮುಖ್ಯಮಂತ್ರಿಯಾದ ಚಂಪೈ ಸೊರೇನ್ ಅವರು ಹೇಮಂತ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಮರಳಿ ಬಂದಾಗ ಹಿಂದಿನ ಸ್ಥಾನಕ್ಕೆ ಮರಳಲು ಹೇಗೆ ಹಿಂಜರಿದರು ಎಂಬುದನ್ನು ಗಮನಿಸಬೇಕು.

2014ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರದ ಅವಧಿಯನ್ನು ಆರಂಭಿಸಿದ ಜಿತನ್ ರಾಮ್ ಮಾಂಝಿ ಅವರು ನಿತೀಶ್ ಕುಮಾರ್ ಅವರು ಹೆಣೆದ ನಾಟಕದ ಭಾಗವಾಗಿದ್ದರು ಎಂದು ಶಂಕಿಸಲಾಗುತ್ತದೆ. ಆರಂಭದಲ್ಲಿ ಮಾಂಝಿ ಅವರನ್ನು ‘ಕೈಗೊಂಡ ಸಿಎಂ’ ಎಂದು ಗೇಲಿ ಮಾಡಲಾಗುತ್ತಿತ್ತು. ಆದರೆ ಹತ್ತು ತಿಂಗಳ ಬಳಿಕ ಜೆಡಿಯು ನಿತೀಶ್ ಕುಮಾರ್ ಅವರಿಗೆ ಅಧಿಕಾರವನ್ನು ಹಿಂದಿರುಗಿಸಲು ಹೇಳಿದಾಗ ಮಾಂಝಿ ಬಂಡಾಯವೆದ್ದಿದ್ದರು. ಜೆಡಿಯು ತೊರೆದ ಅವರು ತಮ್ಮದೇ ಆದ ಹಿಂದೂಸ್ತಾನಿ ಅವಾಮ್ ಮೋರ್ಚಾ –ಜಾತ್ಯತೀತ ಪಕ್ಷವನ್ನು ಕಟ್ಟಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸೇರಿದರು. ಇಂದು ಮಾಂಝಿ ಕೇಂದ್ರ ಸರ್ಕಾರದಲ್ಲಿ ಎಂಎಸ್ಎಂಇ ಸಚಿವರಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನವು ಅವರಿಗೆ ನೀಡಿದ್ದ ಯಾವುದೇ ಪ್ರಾಮುಖ್ಯತೆ ಈಗ ಇಲ್ಲ.

ದಕ್ಷಿಣದ ರಾಜ್ಯಗಳಿಗೆ ಬಂದರೆ ತಮಿಳು ನಾಡಿನ ಪಟ್ಟಾಳಿ ಮಕ್ಕಳ ಕಚ್ಚಿ (ಪಿಎಂಕೆ) ಪಕ್ಷದಲ್ಲಿ ಪಕ್ಷದ ಹಿರಿಯ ನಾಯಕ ಎಸ್.ರಾಮದಾಸ್ ಮತ್ತು ಅವರ ಪುತ್ರ ಹಾಗೂ ರಾಜಕೀಯದ ಉತ್ತರಾಧಿಕಾರಿ ಅನ್ಬುಮಣಿ ರಾಮದಾಸ್ ನಡುವೆ ಅಧಿಕಾರಕ್ಕಾಗಿ ತೀವ್ರ ಜಿದ್ದಾಜಿದ್ದಿ ನಡೆಯುತ್ತಿರುವುದನ್ನು ಗಮನಿಸಬಹುದು.

ಅಪ್ಪನ ಪುಟಾಣಿ ಏಜೆಂಟ್ ಗಳು

ಭಾರತದ ರಾಜಕೀಯದಲ್ಲಿ ಇಷ್ಟೆಲ್ಲ ರಾಜಕೀಯ-ಅಧಿಕಾರದ ಪ್ರಕರಣಗಳನ್ನು ಗಮನಿಸಿದ ಬಳಿಕ ತಮ್ಮ ತಂದೆಯ ವಿರುದ್ಧ ಪುತ್ರಿಯರು ಬಂಡಾಯದ ಬಾವುಟ ಹಾರಿಸಿದ ಎಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ? ಅಬ್ಬಬ್ಬಾ ಎಂದರೆ ಅವರು ತಮ್ಮ ಸಹೋದರರು ಸೇರಿದಂತೆ ಬಂಧುಗಳ ಜೊತೆಗೆ ಹೋರಾಟ ನಡೆಸುತ್ತಾರೆ; ವೈ.ಎಸ್.ಶರ್ಮಿಳಾ ಮತ್ತು ವೈ.ಎಸ್.ಜಗಮೋಹನ್ ರೆಡ್ಡಿ ಅವರ ಪ್ರಕರಣವನ್ನು ಗಮನಿಸಿ.

ಇನ್ನೊಂದು ಕಡೆ ನೀವು ಕನಿಮೋಳಿ ಅವರನ್ನು ನೋಡಬಹುದು. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಆಡಳಿತವನ್ನು ಕೊನೆಗೊಳಿಸಿದ ವಿಸ್ತೃತ ತಂತ್ರವಾಗಿರುವ 2ಜಿ ಹಗರಣದಲ್ಲಿ ಅವರು ಆರು ತಿಂಗಳು ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ಕನಿಮೋಳಿ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಯಾವುದೇ ಪುರುಷ ವಾರಸುದಾರರು ರಾಜಕೀಯದ ಕಾರಣಕ್ಕಾಗಿ ಇಷ್ಟೊಂದು ದೊಡ್ಡ ಬೆಲೆ ತೆತ್ತಿದ್ದು ಕಾಣೆ.

ಇಂದು ಡಿಎಂಕೆ ಪಕ್ಷಕ್ಕೆ ವಿದ್ಯಾವಂತ, ಅರಳು ಹುರಿದಂತೆ ಮಾತನಾಡುವ, ರಾಜಕೀಯದಲ್ಲಿ ಗಟ್ಟಿ ಅನುಭವ ಹೊಂದಿರುವ ಹಾಗೂ ಸಭ್ಯತೆಯಿಂದ ವರ್ತಿಸುವ ಮಹಿಳಾ ನಾಯಕಿಯ ಅಗತ್ಯವಿರುವಾಗ ಕನಿಮೋಳಿ ಆ ಪಕ್ಷಕ್ಕೆ ಅನಿವಾರ್ಯವಾಗಿದ್ದಾರೆ. ಹಾಗಂತ ಅವರು ತಮ್ಮ ಮಹತ್ವಾಕಾಂಕ್ಷೆಯನ್ನು ಮೀರಿದರೋ ದೇವರೇ ಅವರನ್ನು ಕಾಪಾಡಬೇಕು. ಎಂ.ಕೆ.ಸ್ಟಾಲಿನ್ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿರುವ, ಕನಿಷ್ಠ ಆರಂಭದಲ್ಲಿಯಾದರೂ ಹಿಂಜರಿಯುತ್ತಿರುವ ಉದಯನಿಧಿ ಸ್ಟಾಲಿನ್, ತಮ್ಮ ತಂದೆ ಸ್ಥಾನಕ್ಕೆ ಕಾಲಿಡುವ ಬಗ್ಗೆ ಯೋಚಿಸುವ ಮೊದಲು ಕನಿಷ್ಠ ಹತ್ತು ವರ್ಷ ರಾಜಕೀಯದಲ್ಲಿ ಚಾಲ್ತಿಯಲ್ಲಿ ಇರಬೇಕು.

ಇನ್ನು ಬಿ.ಆರ್.ಎಸ್ ನಾಯಕಿ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರ ಪುತ್ರಿ ಕೆ.ಕವಿತಾ ಪ್ರಕರಣವನ್ನೇ ಗಮನಿಸಿ. ದೆಹಲಿ ಅಕ್ರಮ ಮದ್ಯ ಪ್ರಕರಣದಲ್ಲಿ ಅವರು ಐದು ತಿಂಗಳು ಜೈಲುವಾಸ ಅನುಭವಿಸಿ ಬಂದಿದ್ದಾರೆ. ಆಕೆ ಯಾವ ಹೊತ್ತಿನಲ್ಲಾದರೂ ಜಾಮೀನು ಪಡೆದು ಬರಬಹುದು. ಸಹೋದರ ಕೆ.ಟಿ.ರಾಮರಾವ್ ಸೇರಿದಂತೆ ಆಕೆಯ ಮೇಲೆ ಮುಗಿಬೀಳಲು ಆಕೆಯ ಪಕ್ಷದ ಹಿರಿಯ ನಾಯಕರು ಕಾದುಕುಳಿತಿದ್ದಾರೆ. ಆದರೆ ಅವರು ತಮ್ಮ ತಂದೆಯನ್ನು ಆಚೆಗಿಟ್ಟು ಎಚ್ಚರಿಕೆಯಿಂದ ಕಾರ್ಯನಿವರ್ಹಿಸುತ್ತಿದ್ದಾರೆ.

ಮೊದಲ ಆಯ್ಕೆ

ಇಷ್ಟೆಲ್ಲ ಆಗಿಯೂ ನಮ್ಮ ರಾಜಕೀಯ ನಾಯಕರು ಆಯ್ಕೆ ಮಾಡಿಕೊಳ್ಳುವುದು ತಮ್ಮ ಗಂಡುಮಕ್ಕಳನ್ನೇ. ಲಾಲೂ ಪ್ರಸಾದ್ ಯಾದವ್ ಅವರ ಮಕ್ಕಳ ಬಳಗ ದೊಡ್ಡದು. ಅವರಲ್ಲಿ ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ತ್ವರಿತವಾಗಿ ಅಧಿಕಾರಕ್ಕೆ ಏರಿದರು. ತೇಜ್ ಪ್ರತಾಪ್ ಗೆ ಅವರ ದುರ್ನನಡತೆಗಳ ಹೊರತಾಗಿಯೂ ಸಾಕಷ್ಟು ಅವಕಾಶಗಳನ್ನು ನೀಡಿದ ಲಾಲೂ ಕಳೆದ ವಾರ ಪಕ್ಷದಿಂದ ಹೊರದಬ್ಬಿದ್ದಾರೆ.

ಲಾಲೂ ಅವರ ಪುತ್ರಿ ರೋಹಿಣಿ ಆಚಾರ್ಯ ಅಪ್ಪನ ಪರವಾಗಿ ದೃಢವಾಗಿ ನಿಂತವರು. ಅವರು ಅಪ್ಪನಿಗಾಗಿ ತಮ್ಮ ಕಿಡ್ನಿಯನ್ನೇ ದಾನ ಮಾಡಿದ್ದಾರೆ. ಜೊತೆಗೆ, ‘ಅಪ್ಪನೆಂದರೆ ದೇವರಿದ್ದಂತೆ, ಕುಟುಂಬವೇ ನಮ್ಮ ದೇವಾಲಯ” ಎಂದು ಹೇಳಿ ಮೆಚ್ಚುಗೆಗೆ ಪಾತ್ರರಾದವರು.

ರೋಹಿಣಿ ಮತ್ತು ಆಕೆಯ ಸಹೋದರಿ ಮಿಸಾ ಭಾರ್ತಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದವರು. ಅವರಲ್ಲಿ ಒಬ್ಬರು ಸೋತು ಮತ್ತೊಬ್ಬರು ಗೆದ್ದರು. ಇದೇನು ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ತೇಜಸ್ವಿಯೇ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ. ತೇಜ್ ಪ್ರತಾಪ್ ತಮ್ಮ ಸಣ್ಣ-ಪುಟ್ಟ ಪ್ರತಾಪಗಳನ್ನು ತೋರಿಸುತ್ತ ತಪ್ಪಿಸಿಕೊಳ್ಳುತ್ತ ಇರುತ್ತಾರೆ. ಆದರೆ ಲಾಲೂ ಪುತ್ರಿಯರು ಈ ಸಾಮಾನ್ಯ ಪರಿಸ್ಥಿತಿಗಳಲ್ಲಿ ತಮ್ಮ ಪಕ್ಷದ ಶ್ರೇಣಿಯಲ್ಲಿ ಮೇಲ್ಮಟ್ಟಕ್ಕೆ ಏರಲು ಕನಸು ಕಾಣುವುದು ಕೂಡ ಕಷ್ಟ.

ರಾಜಕೀಯದ ವಂಶಪಾರಂಪರ್ಯವನ್ನು ಟೀಕಿಸುವುದು ಮತ್ತು ಸಮರ್ಥಿಸಿಕೊಳ್ಳುವುದು ಇದ್ದೇ ಇದೆ. ಇಂತಹ ಕುಟುಂಬಗಳಲ್ಲಿಯೇ ಹೇಗೆ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ ಎಂಬುದನ್ನು ಗಮನಿಸಬಹುದು. ಇದನ್ನು “ಅವರ ಒಳಿತಿಗಾಗಿಯೇ ಹೊರಗಿಡಲಾಗಿದೆ’ ಎಂದು ಅವರದೇ ಶೈಲಿಯಲ್ಲಿ ಹೇಳುತ್ತಾರೆ.

ಉಳಿದುಕೊಂಡವರು

ಹಾಗಾದರೆ ಇಲ್ಲಿ ಉಳಿದವರು ಯಾರು? ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರವನ್ನು ವಹಿಸಿಕೊಂಡು ಅದರಲ್ಲಿಯೇ ಮುಂದುವರಿದ ಮಹಿಳಾ ರಾಜಕಾರಣಿಗಳು ವಿರಳ. ರಾಜೀವ್ ಗಾಂಧಿ ನಿಧನರಾದಾಗ ಸೋನಿಯಾ ಗಾಂಧಿ ಪಕ್ಷದ ಮುಂದಾಳತ್ವವನ್ನು ಹೆಗಲಿಗೇರಿಸಿಕೊಂಡು ಭದ್ರವಾಗಿ ನೆಲೆನಿಂತರು. ತಮಿಳು ನಾಡು ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ನಿಧನರಾದಾಗ ಅವರ ಪತ್ನಿ ಜಾನಕಿ ಅವರನ್ನು ತಕ್ಷಣವೇ ಗದ್ದುಗೆಗೆ ಏರಿಸಲಾಯಿತು. ಆದರೆ ಅವರ ಸರ್ಕಾರ ಉಳಿದಿದ್ದು ಮೂರು ವಾರ ಮಾತ್ರ. ಬಳಿಕ ತಮಿಳು ನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು.

ಈ ನಡುವೆ ಎಂಜಿಆರ್ ಶಿಷ್ಯೆ ಜೆ.ಜಯಲಲಿತಾ ತಮ್ಮ ಸ್ಥಾನಕ್ಕಾಗಿ ಹೋರಾಟ ನಡೆಸಿದರು. ದೈಹಿಕವಾಗಿ, ಮಾನಸಿಕವಾಗಿ ನಿಂದನೆ ಅವಮಾನಗಳನ್ನು ಎದುರಿಸಿದ ಜಯಾ ರಾಜಕೀಯದಲ್ಲಿ ದೊಡ್ಡ ಯಶಸ್ಸನ್ನು ಗಿಟ್ಟಿಸಿಕೊಳ್ಳುವ ಮೊದಲು ಅಸಂಖ್ಯಾತ ಅಡೆತಡೆಗಳನ್ನು ಬದಿಗೆ ಸರಿಸಬೇಕಾಯಿತು.

ಇಂತಹ ತೀವ್ರ ನಿರಾಶೆ ಮತ್ತು ಸಿನಿಕತೆಯ ಕ್ಷಣಗಳಲ್ಲಿ ಒಮ್ಮೊಮ್ಮೆ ಅಚ್ಚರಿ ಅನಿಸುವುದು ಏನೆಂದರೆ ಸುಪ್ರಿಯಾ ಸುಳೆ ಅಥವಾ ಇಂದಿರಾ ಗಾಂಧಿ ಅವರ ಕುಟುಂಬದಲ್ಲಿ ಒಡಹುಟ್ಟಿದ ಗಂಡುಮಕ್ಕಳು ಇದ್ದು ಬಿಟ್ಟಿದ್ದರೆ? ಅವರು ಯಾವುದೇ ಹೋರಾಟವಿಲ್ಲದೆ ನಾಯಕಿಯರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದರೆ? ಇತ್ತೀಚೆಗೆ ಅಂದರೆ ಕೇವಲ ಒಂದು ವರ್ಷಕ್ಕೂ ಮೊದಲು ಚುನಾವಣಾ ರಾಜಕೀಯಕ್ಕೆ ಎಂಟ್ರಿ ಪಡೆದ ಪ್ರಿಯಾಂಕ ಗಾಂಧಿ ಅವರ ರಾಜಕೀಯ ಭವಿಷ್ಯವನ್ನು ಕುತೂಹಲದಿಂದ ಕಾಯಬೇಕಾಗಿದೆ. ಮುಖ್ಯವಾಗಿ 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಅಧಿಕಾರದ ಲೆಕ್ಕಾಚಾರದಲ್ಲಿ ಯಾವುದೇ ಬದಲಾವಣೆ ಆಗುತ್ತದೆಯೇ ಎಂಬುದು ಕುತೂಹಲ.

ರಾಜಕೀಯದ ವಂಶಪಾರಂಪರ್ಯದಲ್ಲಿ ಮಹಿಳೆಯರಿಗೆ ಇರುವ ಹಾದಿ ಅತ್ಯಂತ ಕಿರಿದಾದುದು ಮತ್ತು ಗುಂಡಿಮಯವಾದುದು. ಅದರಲ್ಲೂ ‘ಸಾಮಾನ್ಯ ಮಹಿಳೆ’ಗಂತೂ ಅದು ಸಂಪೂರ್ಣ ಕೊಚ್ಚೆಗುಂಡಿಯಾಗಿರುತ್ತದೆ. ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಸ್ಮೃತಿ ಇರಾನಿ ಅವರು ದಶಕಗಳಿಂದ ಎದುರಿಸುತ್ತಿರುವ ಕ್ರೂರ ನಿಂದನೆಗಳು ಮತ್ತು ಕೊಂಕುನುಡಿಗಳು ಒಂದು ರಾಷ್ಟ್ರವಾಗಿ ನಾವು ನಾಚಿಕೆಯಿಂದ ತಲೆತಗ್ಗಿಸಬೇಕು. ಇಲ್ಲಿ ನಮ್ಮ ಸಹಾನುಭೂತಿ ಯಾವ ರಾಜಕೀಯ ಪಕ್ಷದ ಕಡೆಗಿರಬೇಕು ಎಂಬುದು ಮುಖ್ಯವಾಗುವುದಿಲ್ಲ.

ಎಲ್ಲಿದೆ ಸಮಾನತೆ?

ಮಹಿಳಾ ಮೀಸಲಾತಿ ಮಸೂದೆಯನ್ನು 2023ರಲ್ಲಿ ಭಾರೀ ಗೌಜಿಗದ್ದಲದೊಂದಿಗೆ ಅಂಗೀಕರಿಸಲಾಯಿತು. ಅನೇಕ ಪಕ್ಷಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡವು. ಅದು ಅನುಮೋದನೆಗೊಂಡು ಎರಡು ವರ್ಷಗಳು ಕಳೆದವು. ಇಷ್ಟಾದ ಬಳಿಕವೂ ಮುಂದಿನ ವರ್ಷ ಜನಗಣತಿ ನಡೆಯುತ್ತದೆ ಎಂದು ನಿರ್ಧರಿಸಿದರೆ ಈ ಮೀಸಲಾತಿಯನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.

ವಾಸ್ತವವಾಗಿ ಜಾತಿ ಸಮೀಕ್ಷೆ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ಹಿನ್ನೆಲೆಯಲ್ಲಿ ಜನಗಣತಿಯ ಬಗ್ಗೆ ಹೆಚ್ಚು ಮಾತು ಜಾರಿಯಲ್ಲಿದೆ. ಆದರೆ ಕೊಟ್ಟ ಮಾತನಂತೆ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಕಲ್ಪಿಸುವ ಭರವಸೆಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ.

‘ಅಧಿಕಾರದ ಕಾರಿಡಾರ್’ನಲ್ಲಿ –ಅದು ತಮ್ಮದೇ ಮಹಿಳೆಯರಿಗಿರಲಿ ಅಥವಾ ಹೊರಗಿನವರಿಗಾಗಲಿ ಮಹಿಳೆಯರು ಪುರುಷರೊಂದಿಗೆ ಸಮಾನವಾಗಿ ನಿಲ್ಲಲು ಅನುಕೂಲವಾದ ವಾತಾವರಣವನ್ನು ಸೃಷ್ಟಿಸುವುದರಿಂದ ಎಲ್ಲರಿಗೂ ಲಾಭದಾಯಕ ಸನ್ನಿವೇಶ ಉಂಟಾಗುತ್ತದೆ. ಇದನ್ನು ಎಲ್ಲ ನಾಯಕರು ಅರಿತುಕೊಳ್ಳಬೇಕು. ಮಹಿಳೆಯರು ಸಹಾನುಭೂತಿ ಮತ್ತು ಅಂತಃಪ್ರಜ್ಞಯಂತಹ ಕೆಲವು ಗುಣಗಳನ್ನು ಪ್ರದರ್ಶಿಸುತ್ತಾರೆ. ಇದು ದೀರ್ಘಾವಧಿಯಲ್ಲಿ ಅವರ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಸಹಕಾರಿ ಕೂಡ.

ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ರೀತಿಯಲ್ಲಿಯೇ ಮಹಿಳೆಯರನ್ನು ಸೇರ್ಪಡೆ ಮಾಡಿಕೊಳ್ಳುವುದರಿಂದ ಮತದಾನದ ಪೆಟ್ಟಿಗೆಗಳಲ್ಲಿ ಟಿಕ್ ಮಾಡುವುದಕ್ಕಿಂತ ವಿಶಾಲ ವ್ಯಾಪ್ತಿಯ ಅಭ್ಯರ್ಥಿಗಳನ್ನು ಆಯ್ಕೆಮಾಡುವುದು ಸೂಕ್ತ.

Tags:    

Similar News