ಕರ್ನಾಟಕದಲ್ಲಿ ಮಹಿಳೆಯರಿಗೆ ಹೊಸ ಅರುಣೋದಯವೋ ಅಪಾಯವೋ?

“ನಮ್ಮ ಹಳ್ಳಿಗಳ ತಾಯಂದಿರು ದಾರಿ ತಪ್ಪಿ ನಡೆಯುತ್ತಿದ್ದಾರೆ!” ಹಾಗೆಂದು ಹೇಳಿದ ವಿಡಿಯೊ ರಾಜ್ಯದಲ್ಲಿ ಎಂಥ ಕಿಡಿ ಹೊತ್ತಿಸಿತ್ತು ಎಂಬುದು ನಿಮಗೆ ನೆನಪಿರಬಹುದು.;

Update: 2025-06-02 00:30 GMT

“ನಮ್ಮ ಹಳ್ಳಿಗಳ ತಾಯಂದಿರು ದಾರಿ ತಪ್ಪಿ ನಡೆಯುತ್ತಿದ್ದಾರೆ!” ಹಾಗೆಂದು ಹೇಳಿದ ವಿಡಿಯೊ ರಾಜ್ಯದಲ್ಲಿ ಎಂಥ ಕಿಡಿ ಹೊತ್ತಿಸಿತ್ತು ಎಂಬುದು ನಿಮಗೆ ನೆನಪಿರಬಹುದು.

ಕೇವಲ ಒಂದು ವರ್ಷದ ಹಿಂದೆ, ಇನ್ನೇನು ಅವನತಿಯ ಅಂಚಿಗೆ ಕುಸಿಯುತ್ತಿದ್ದ ಪಕ್ಷದ (ಜೆಡಿಎಸ್) ಭವಿಷ್ಯದಲ್ಲಿ ಬದಲಾವಣೆ ತರಲು ಹತಾಶರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಆಡಿದ ಮಾತಿದು. ಕರ್ನಾಟಕ ಸರ್ಕಾರ ಮಹಿಳೆಯರಿಗಾಗಿ ಪ್ರಕಟಿಸಿದ ಉಚಿತ ಬಸ್ ಪ್ರಯಾಣದ ‘ಗ್ಯಾರಂಟಿ’ ಯೋಜನೆಯಿಂದ ಏನೇನು ದುಷ್ಪರಿಣಾಮಗಳನ್ನು ಎದುರಿಸುವಂತಾಗಿದೆ ಎಂಬುದರ ಬಗ್ಗೆ ಅವರು ಎಚ್ಚರಿಕೆ ನೀಡುತ್ತಿದ್ದರು. ತಮ್ಮ ತಮ್ಮ ಕುಟುಂಬಗಳ ಮಹಿಳೆಯರ ಬಗ್ಗೆಯೂ ಯೋಚಿಸುವಂತೆಯೂ ಅವರು ಅಂದು ಸಭೆಯಲ್ಲಿದ್ದವರಿಗೆ ಹುಕುಂ ಹೊರಡಿಸಿದ್ದರು.

ರಾಜ್ಯ ಮಹಿಳಾ ಆಯೋಗವೂ ಸೇರಿದಂತೆ ಅನೇಕ ಸಂಘಟನೆಗಳು ಕುಮಾರಸ್ವಾಮಿ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದವು. ಅಂದು ಅವರಾಡಿದ ಮಾತಿನ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು.

ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭವಾದ ದಿನದಿಂದ ಅನೇಕ ಮಂದಿ ಪುರುಷರು ಹೇಗೆ ಭಯಪಟ್ಟಿದ್ದರೋ ಅದನ್ನೇ ಕುಮಾರಸ್ವಾಮಿ ಅವರು ಧ್ವನಿಸಿದ್ದರು.

ಮಹಿಳೆಯರು ಈಗ ತಮ್ಮ ಕುಟುಂಬಗಳ ಕಡೆಗೂ ಗಮನವನ್ನು ಕೊಡದೆ ರಾಜ್ಯದ ಸುತ್ತ ಪ್ರವಾಸ ಹೊರಟಿದ್ದಾರೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. ದೊಡ್ಡ ದೊಡ್ಡ ಯಾತ್ರಾಸ್ಥಳಗಳಿಗೆ, ಮಂದಿರಗಳಿಗೆ ಭೇಟಿ ನೀಡುವ ಮಹಿಳೆಯರ ಬಹುಕಾಲದ ಬಯಕೆ ಈ ಉಚಿತ ಪ್ರಯಾಣದ ಮೂಲಕ ಈಡೇರಿಸಿಕೊಳ್ಳಲು ಸಾಧ್ಯವಾಗಿತ್ತು.

ಇಂದಿನ ಸಾರ್ವಜನಿಕ ಜೀವನವು ಯಾತ್ರೆಗಳು, ಪೂಜಾ ವಿಧಾನಗಳು ಮತ್ತು ನಾನಾ ಸಂತರು, ದೇವರು ಹಾಗು ದೇವತೆಗಳ ಮಂದಿರಗಳಲ್ಲಿನ ಪ್ರಾರ್ಥನೆಗಳಿಂದ ತುಂಬಿಹೋಗಿರುವಾಗ ಇದ್ದಕ್ಕಿಂತೆ ಹೆಚ್ಚಿದ ಧಾರ್ಮಿಕತೆಯನ್ನು ಗಮನಿಸದೇ ಇರಲು ಸಾಧ್ಯವಿಲ್ಲ ಬಿಡಿ.

ಸಾಪೇಕ್ಷ ಸ್ವಾತಂತ್ರ್ಯ

ಮಹಿಳೆಯರು ಸಾರ್ವಜನಿಕ ವಲಯದಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಮನೆಯೊಳಗೂ ಅವರು ಅನುಭವಿಸುತ್ತಿದ್ದ ಸಾಪೇಕ್ಷ ಸ್ವಾತಂತ್ರ್ಯ ಇಂತಹ ಕಿರಿಕಿರಿಯನ್ನು ಹುಟ್ಟುಹಾಕಲು ನಾಂದಿಯಾಯಿತು. ಹಾಗಾಗಿ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ‘ಕುಟುಂಬಕ್ಕೆ ಅಪಾಯ ಎದುರಾಯಿತು’ ಎಂಬ ದಾಳವನ್ನು ಮತ್ತೊಮ್ಮೆ ಬಳಕೆಮಾಡಲಾಯಿತು.

ಕರ್ನಾಟಕದಲ್ಲಿ ಶಕ್ತಿ ಯೋಜನೆ ಆರಂಭವಾದಂದಿನಿಂದ ಮಹಿಳೆಯರ ಆರ್ಥಿಕ ಪರಿಣಾಮಗಳು ಮತ್ತು ಕಾರ್ಮಿಕ ಬಲದಲ್ಲಿ ಅವರ ಪಾಲ್ಗೊಳ್ಳುವಿಕೆಯ ದರಕ್ಕೆ ಸಂಬಂಧಿಸಿದ ಮೌಲ್ಯಮಾಪನಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಕನಿಷ್ಠ ಒಂದು ಆರಂಭಿಕ ಅಧ್ಯಯನವನ್ನು ಪರಿಗಣಿಸಿದರೆ, ಯೋಜನೆ ಜಾರಿಯ ನಂತರದ ತಿಂಗಳುಗಳಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯ ದರದಲ್ಲಿ ಶೇ.5ರಷ್ಟು ಹೆಚ್ಚಳವಾಗಿರುವುದನ್ನು ಗಮನಿಸಬಹುದು.

ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ, ತುಂಬಿತುಳುಕುತ್ತಿರುವ ಬಸ್ಸುಗಳನ್ನು ನೋಡಿದಾಗ ಬಹುತೇಕ ಮಹಿಳೆಯರು ತಮ್ಮದೇ ಆದ ಕಡಿಮೆ ಬಜೆಟ್ ನಲ್ಲಿ ದೊಡ್ಡ ಉಳಿತಾಯ ಮಾಡಿರುವುದು ಮಾತ್ರವಲ್ಲದೆ ಪ್ರಯಾಣಿಸಲು ಬೇಕಾದ ಅನುಮತಿಯನ್ನೂ ಹಣವನ್ನೂ ಕೇಳಬೇಕಾದ ಅವಮಾನಗಳಿಂದ ಪಾರಾದ ನಿರಾಳತೆ ಅನುಭವಿಸಲು ಅವರು ಆರಂಭಿಸಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ.

ಸಾರ್ವಜನಿಕ ವಲಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಹಾಗೂ ಭದ್ರತೆಯನ್ನು ತಂದುಕೊಡುವ ಮತ್ತು ಅವರು ಹಾಗೆ ಕಾಣಿಸಿಕೊಳ್ಳುವ ಮೂಲಕವೇ ಉಂಟಾಗುವ ಅಗಣಿತ ಪರಿಣಾಮಗಳನ್ನು ಕಡಿಮೆ ಎಂದು ಅಂದಾಜುಮಾಡಲು ಸಾಧ್ಯವಿಲ್ಲ.

ಕಳೆದ ವಾರದ ಘಟನೆಗಳು

ಆದರೆ ಕಳೆದ ವಾರವಷ್ಟೇ ಬೆಳಕಿಗೆ ಬಂದ ಮಹಿಳೆಯರು ಪ್ರದರ್ಶಿಸಿದ ಭಿನ್ನ ರೀತಿಯ ಸ್ವಾತಂತ್ರ್ಯ ಹಾಗೂ ವ್ಯಕ್ತಿಗತವಾದ ಆಯ್ಕೆಗಳು ಗಮನ ಸೆಳೆದಿವೆ. ಹಾಸನದ ಒಬ್ಬಳು ಯುವತಿ ಕಲ್ಯಾಣ ಮಂಟಪದಲ್ಲಿಯೇ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದೇ ಈ ಘಟನೆ. ಕಲ್ಯಾಣ ಮಂಟಪದಲ್ಲಿ ಇದ್ದಕ್ಕಿದ್ದಂತೆ ನಾಟಕೀಯ ವಿದ್ಯಮಾನಗಳು ಸೃಷ್ಟಿಯಾದವು. ಯುವತಿ ಈಗ ನಡೆಯುತ್ತಿರುವ ಮದುವೆಯನ್ನು ಧಿಕ್ಕರಿಸಿ ಪ್ರಿಯಕರನನ್ನು ವರಿಸುವ ಆಸಕ್ತಿ ವ್ಯಕ್ತಪಡಿಸಿದ್ದಳು, ಇದರಿಂದ ಅವಮಾನಕ್ಕೆ ಒಳಗಾದ ಕುಟುಂಬ ಇಲ್ಲಿವರೆಗೆ ಆದ ಖರ್ಚು-ವೆಚ್ಚಗಳನ್ನು ಭರಿಸುವವರು ಯಾರು ಎಂಬ ಚಿಂತೆಗೆ ಒಳಗಾಗಿತ್ತು. ಆದರೆ ಆಕೆ ಅದಕ್ಕೆಲ್ಲ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಕೊನೆಯ ಬಿಕ್ಕಟ್ಟು ಸೌಹಾರ್ದಯುತವಾಗಿ ಬಗೆಹರಿಸಲಾಗಿತ್ತು,

ಕುಟುಂಬದ ಗೌರವದ ಪ್ರಶ್ನೆ

ಆದರೆ ಈ ಸುದ್ದಿಯ ಬೆನ್ನಲ್ಲೇ ಇನ್ನೊಂದು ವರದಿ ಬಂದಿರುವುದು ಪಕ್ಕದ ಮೈಸೂರಿನಿಂದ. ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆಯದು. ಅದರಲ್ಲಿ ಗಂಡ, ಹೆಂಡತಿ ಮತ್ತು ಪುಟ್ಟ ಮಗಳೊಬ್ಬಳು ಸೇರಿದ್ದಳು. ಈ ಘಟನೆಗೆ ಕಾರಣವಿಷ್ಟೇ; ಅವರ ಹಿರಿಯ ಮಗಳು ತನ್ನ ಪ್ರಿಯಕರನೊಂದಿಗೆ ಪಲಾಯನ ಮಾಡಿದ್ದು.

‘ಮಾನ-ಮರ್ಯಾದೆ ಹೋಯ್ತು’ ಎಂಬ ಆತಂಕದ ಜೊತೆ ತಳಕು ಹಾಕಿಕೊಂಡಿರುವುದು ನಿಸ್ಸಂದೇಹವಾಗಿ ಕುಟುಂಬದ ಗೌರವ ಮತ್ತು ಜಾತಿಗೆ ಸಂಬಂಧಿಸಿದ್ದಾಗಿದೆ. ಈ ಘಟನೆಯಲ್ಲಿ ಕುಟುಂಬದ ಯಜಮಾನ ಮರಣದ ನಂತರವೂ ಮಗಳ ಮೇಲೆ ನಿಯಂತ್ರಣ ಸಾಧಿಸುವ ಯತ್ನಮಾಡಿದ್ದಾನೆ. ಆತನ ಉದ್ದೇಶವಿಷ್ಟೆ; ಆಕೆಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗಬಾರದು.

ಮಹಿಳೆಯರ ನಿಷ್ಠೆಯ ಮೇಲೆ ಅತಿ ಮುಖ್ಯವಾಗಿ ಅವಲಂಬಿತವಾಗಿರುವ ಜಾತಿ ವ್ಯವಸ್ಥೆಯು ಹತ್ತಾರು ಕಾರಣಗಳಿಂದ ಸುದ್ದಿಯಾಗುತ್ತಿರುವುದು ಇನ್ನೂ ಕಡಿಮೆಯಾಗಿಲ್ಲ. ಸ್ವತಃ ಬ್ರಾಹ್ಮಣರಾಗಿರುವ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರೊಬ್ಬರು ಸಾರ್ವಜನಿಕವಾಗಿಯೇ ತಮ್ಮ ಸಮುದಾಯದ (ಸಂಖ್ಯೆಯ ದೃಷ್ಟಿಯಿಂದ) ದುಃಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಕಾರಣ (ಅವರು ಹೇಳಿದ ಮೇಲೆ ನಂಬಲೇಬೇಕಲ್ಲ) ವಲಸೆ (ನಿಶ್ಚಿತವಾಗಿಯೂ ಡಾಲರ್ ಗಳ ಪ್ರವಾಹ) ಮತ್ತು ಅಂತರ್ಜಾತೀಯ ವಿವಾಹ.

ಇದಕ್ಕೂ ಕೆಲ ವರ್ಷಗಳಿಗೂ ಮೊದಲು ಅಂದರೆ 2021ರಲ್ಲಿ ಪೇಜಾವರ ಮಠದ ಸ್ವಾಮೀಜಿಗಳು ತಮ್ಮ ಸಮುದಾಯದೊಳಗೇ ಮದುವೆಯಾಗುವಂತೆ ಸಲಹೆ ನೀಡಿದ್ದರು.

ಇಂದು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳನ್ನು ಒಳಗೊಂಡಿರುವ 101 ಜಾತಿಗಳಲ್ಲಿ ಒಳ-ಮೀಸಲಾತಿಯನ್ನು ನಿರ್ಧರಿಸಲು ಮೂರು ಹಂತಗಳ ಪರಿಶಿಷ್ಟ ಜಾತಿಗಳ ಜಾತಿ ಗಣತಿ ಚಾಲ್ತಿಯಲ್ಲಿದೆ. ಹೀಗಿರುವಾಗ ಸಂಖ್ಯೆಗಳ ಆಧಾರದ ಮೇಲೆ ಹಕ್ಕುಗಳ ಕೈತಪ್ಪಿ ಹೋಗುತ್ತವೆ ಎಂಬ ಆತಂಕ ಅಧಿಕವಾಗಿದೆ. ಮಹಿಳೆಯರು ವಿವಾಹದಂತಹ ನಿರ್ಣಾಯಕ ವಿಚಾರದಲ್ಲಿ ತಮ್ಮದೇ ಆಯ್ಕೆಗಳನ್ನು ಮಾಡುವುದರಿಂದ ದೂರವಿರಬೇಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಹಕ್ಕುಗಳು ಕೈತಪ್ಪುವ ಅಪಾಯ

ಆದರೆ ಇತ್ತೀಚಿನ ಎರಡು ಪ್ರಕರಣಗಳು ಮತ್ತು ಜಾತಿ ಸಮೀಕ್ಷೆಗೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಕುಟುಂಬ (ಅಥವಾ ಜಾತಿ)ದ ‘ಮಾನ-ಮರ್ಯಾದೆ’ ಇಲ್ಲಿ ಸಮಸ್ಯೆಯೇ ಅಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಬದಲಾಗಿ, ಪ್ರಜಾಪ್ರಭುತ್ವದಿಂದಾಗಿಯೇ ಇಷ್ಟು ವರ್ಷ ಕಷ್ಟಪಟ್ಟು ಸಂಪಾದಿಸಿದ ಹಕ್ಕುಗಳು ಕೈತಪ್ಪುತ್ತಿವೆ ಎಂಬುದೇ ಆತಂಕವಾಗಿದೆ.

ಮೇಲೆ ಪ್ರಸ್ತಾಪ ಮಾಡಿದ ಎರಡು ಘಟನೆಗಳ ಮಹತ್ವವನ್ನು ಕಡೆಗಣಿಸುವ ನಾವು ಮಾಡಬಾರದು ಅಥವಾ ಮರಳಿನ ಕಣದಲ್ಲಿ ಜಗತ್ತನ್ನು ಓದುವ ಪ್ರಯತ್ನಕ್ಕೆ ಹೋಗಬಾರದು. ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ಜಾತಿ ಮತ್ತು ಕುಟುಂಬದ ಗೌರವವನ್ನು ಹೊತ್ತವರೇ ಅಗಿದ್ದಾರೆ. ಮಹಿಳಾವಾದಿಗಳಾದ ಮೇರಿ ಜಾನ್ ಅವರು ಗಮನಿಸಿದಂತೆ, ಭಾರತದಲ್ಲಿ ಕಡ್ಡಾಯ ವಿವಾಹವೆಂಬ ವ್ಯವಸ್ಥೆಯು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಭಾಗವಹಿಸುವ ದರದ ಮೇಲೂ ಪರಿಣಾಮ ಬೀರಿದೆ ಎಂಬುದು ದುರದೃಷ್ಟಕರ.

ಇಡೀ ಜಗತ್ತು ಮಹಿಳೆಯರ ಶ್ರಮವನ್ನು ಪ್ರೀತಿಸಿದರೂ, ಸ್ವತಂತ್ರವಾದ ಆದಾಯ ಹಾಗೂ ಜೀವನೋಪಾಯ ಅಥವಾ ಸರ್ಕಾರದ ನೀತಿಗಳು ಹೊಸ ಸ್ವರೂಪದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೆ ಮತ್ತು ಸಂಭಾವ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅವಿಧೇಯತೆಗೆ ದಾರಿಮಾಡಿಕೊಟ್ಟಿದೆ ಎಂಬುದು ಬೇರೆಯೇ ಮಾತು.

ಕಳೆದ ವರ್ಷ ಶಿವಮೊಗ್ಗದಲ್ಲಿ ಮಹಿಳಾ ದಿನವನ್ನು ಆಚರಿಸಲು ಸೇರಿದ ಮಹಿಳೆಯರ ಮೇಲೆ ಬಲಪಂಥೀಯರು ದಾಳಿ ನಡೆಸಿದ್ದರು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ಬಯಸಿದಂತೆ ಹಿಂದೂ ಮಹಿಳೆಯರು ನೈಜ ಹಾಗೂ ಕಲ್ಪಿತ ಪರಭಕ್ಷಕರ ವಿರುದ್ಧ ತ್ರಿಶೂಲ ಹಿಡಿಯಲು ತರೆಬೇತಿಯನ್ನು ಪಡೆಯುವುದು ಉತ್ತಮ.

ನಿಜವಾದ ಅಪಾಯ ಎಲ್ಲಿದೆ?

ಹೀಗಾಗಿಯೇ ಕುನಾಲ್ ಕಾಮ್ರಾ ಅವರ ನಯಾ ಭಾರತ್ ಕಾರ್ಯಕ್ರಮ ನಿಜಕ್ಕೂ ಒಂದು ಸಾಧನೆ. ಆ ಕಾರ್ಯಕ್ರಮವು ಈ ದೇಶದ ರಾಜಕಾರಣಿಗಳ ಲಂಚಕೋರತನ, ಶ್ರೀಮಂತರ ವಿಚಿತ್ರ ನಡವಳಿಕೆಗಳು, ಪತ್ರಿಕೆಗಳ ಗುಲಾಮಗಿರಿತನ, ಮತ್ತು ಬಹುಸಂಖ್ಯಾತರ ನಟನೆಯನ್ನು ಮಾತ್ರ ತೋರಿಸಿದ್ದಲ್ಲ. ಅದು ಅಸಾಧಾರಾಣವಾಗಿ ಕಾಣಿಸಿದ್ದು ಯಾಕೆಂದರೆ ಅದು ನಮ್ಮ ಮುಖಕ್ಕೇ ಕನ್ನಡಿ ಹಿಡಿದಿದ್ದು. ನಮ್ಮ ವೈಯಕ್ತಿಕ ಜೀವನವು ಎಷ್ಟು ಹೀನ ಸ್ಥಿತಿಗೆ ತಲುಪಿದೆ ಎಂಬುದನ್ನು ಅನಾವರಣಮಾಡಿತು.

ಅಷ್ಟಕ್ಕೂ ಎಷ್ಟು ಮಂದಿ ಭಾರತೀಯ ಪುರುಷರು ತಮ್ಮ ಸವಲತ್ತುಗಳ ಬಗ್ಗೆ ಮಾತನಾಡುವ ಕೆಚ್ಚು ತೋರಿಸುತ್ತಾರೆ? ತಮ್ಮನ್ನೇ ಬಲಿಪಶುಗಳು ಎಂದು ಚಿತ್ರಿಸುವ ಮೂಲಕ ಅದನ್ನು ರಕ್ಷಿಸುವ ಅಪೇಕ್ಷೆ ತೋರಿಸುತ್ತಾರೆ? ಪ್ರತಿಯೊಬ್ಬರೂ, ಅದರಲ್ಲೂ ವಿಶೇಷವಾಗಿ ಬಲಪಂಥೀಯರು ಕಲ್ಪಿತ ಪರಭಕ್ಷಕರಿಂದ ನಮ್ಮ ಮಹಿಳೆಯರನ್ನು ರಕ್ಷಿಸಲು ಉತ್ಸುಕರಾಗಿರುವ ಈ ಕಾಲಘಟ್ಟದಲ್ಲಿ ಮಹಿಳೆಯರಿಗೆ ನಿಜವಾಗಿಯೂ ಅಪಾಯ ಎಲ್ಲಿದೆ ಎಂಬುದನ್ನು ಕಾಮ್ರಾ ನಮಗೆ ಹೇಳಿದ್ದಾರೆ; ಅದು ಇನ್ನೆಲ್ಲೂ ಅಲ್ಲ, ನಮ್ಮದೇ ಮನೆಗಳಲ್ಲಿ ಮತ್ತು ನಮ್ಮದೇ ಕುಟುಂಬಗಳಲ್ಲಿ.

Tags:    

Similar News