Air India plane crash | ವಿಮಾನ ಅಫಘಾತದಲ್ಲಿ ಮೃತಪಟ್ಟ ಮಾಜಿ ಸಿಎಂ ವಿಜಯ್​ ರೂಪಾನಿ ಸಂಬಂಧಿಕರ ಭೇಟಿಯಾದ ಮೋದಿ

ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತುಕೊಂಡು ಗುರುವಾರ ಮಧ್ಯಾಹ್ನ ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.;

Update: 2025-06-13 04:53 GMT

ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಶುಕ್ರವಾರ) ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ, ಅಲ್ಲಿಂದ ಕಾರಿನಲ್ಲಿ ಅಪಘಾತ ಸಂಭವಿಸಿದ ಮೇಘನಿನಗರ ಪ್ರದೇಶಕ್ಕೆ ತೆರಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಧಾನಿಯವರೊಂದಿಗೆ ಇದ್ದರು.

ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತುಕೊಂಡು ಗುರುವಾರ ಮಧ್ಯಾಹ್ನ ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಈ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

Live Updates
2025-06-13 14:11 GMT

 

 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ 2025 ರ ಎರಡನೇ ದಿನದ ಆಟ ಆರಂಭವಾಗುವ ಮುನ್ನ, ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ಸ್ಟೀವ್ ಗಫಾನಿ ಅವರು ಕಪ್ಪು ಬ್ಯಾಂಡ್​ ಕೈಗೆ ಕಟ್ಟಿರುವುದು ಎಲ್ಲರ ಗಮನ ಸೆಳೆಯಿತು. ಇದು ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಭಯಾನಕ ಏರ್ ಇಂಡಿಯಾ ವಿಮಾನ ಅಪಘಾತದ ವೇಳೆ ಮೃತಪಟ್ಟ 265ಕ್ಕೂ ಹೆಚ್ಚು ಜೀವಗಳಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದ ರೀತಿಯಾಗಿತ್ತು.

ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕಾಫ್‌ ಆದ ನಂತರ ಕೇವಲ 40 ಸೆಕೆಂಡುಗಳಲ್ಲಿ ಧರೆಗೆ ಅಪ್ಪಳಿಸಿ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಮೇಲೆ ಬಿದ್ದಿತ್ತು. ಈ ಭೀಕರ ಘಟನೆಯಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಹಾಸ್ಟೆಲ್‌ನ 5ಕ್ಕೂ ಹೆಚ್ಚು ಸ್ಥಳೀಯರು ಮೃತಪಟ್ಟಿದ್ದಾರೆ.

ಈ ದುರಂತಕ್ಕೆ ಪ್ರತಿಕ್ರಿಯೆಯಾಗಿ, ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಿದವು. ಇದು ಕ್ರಿಕೆಟ್ ಜಗತ್ತಿನಲ್ಲಿ ಒಗ್ಗಟ್ಟಿನ ಪ್ರತೀಕವಾಗಿದೆ. 2021ರಲ್ಲಿ 'ಜರ್ನಲ್ ಆಫ್ ಸ್ಪೋರ್ಟ್ಸ್ ಸೈನ್ಸ್ & ಮೆಡಿಸಿನ್' ನಡೆಸಿದ ಅಧ್ಯಯನವೂ ಕ್ರೀಡಾ ಕ್ಷೇತ್ರದ ಇಂತಹ ಸಂವೇದನಾಶೀಲ ಪ್ರತಿಕ್ರಿಯೆಗಳನ್ನು ಪ್ರತಿಬಿಂಬಿಸುತ್ತದೆ. ಆಟಗಾರರು ಮತ್ತು ಅಧಿಕಾರಿಗಳು ಸಹ ಈ ದುರಂತಕ್ಕೆ ಗೌರವ ಸಮರ್ಪಣೆಯಾಗಿ ಕಪ್ಪು ಬಾಂಡ್‌ಗಳನ್ನು ಧರಿಸಿದ್ದಾರೆ.

2025-06-13 13:39 GMT

 

ಅಹಮದಾಬಾದ್‌ನಲ್ಲಿ ಗುರುವಾರ ನಡೆದ ಏರ್‌ ಇಂಡಿಯಾ ದುರಂತದ ಹೊಣೆ ಹೊತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು ರಾಜೀನಾಮೆ ನೀಡಬೇಕೆಂದು ರಾಜ್ಯ ಅರಣ್ಯ, ಜೀವಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ್‌ ಖಂಡ್ರೆ ಒತ್ತಾಯಿಸಿದ್ದಾರೆ.

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ವೈದ್ಯಕೀಯ ವಸತಿ ನಿಲಯಕ್ಕೆ ಅಪ್ಪಳಿಸಿ ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ 265 ಮಂದಿ ಮೃತಪಟ್ಟಿದ್ದರು. 

2025-06-13 10:17 GMT

ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ (AI-171) ವಿಮಾನ ವೈದ್ಯಕೀಯ ವಸತಿ ನಿಲಯಕ್ಕೆ ಅಪ್ಪಳಿಸಿ ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ನಾವು 4 ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಪತ್ನಿಯನ್ನು ಕಳೆದುಕೊಂಡಿದ್ದೇವೆ. ಆದರೆ ಅದೃಷ್ಟವಶಾತ್, ಹಾಸ್ಟೆಲ್ ಪ್ರದೇಶದಲ್ಲಿ 45 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳನ್ನು ಉಳಿಸಿದ್ದೇವೆ ಎಂದು ಐಎಂಎ ಅಧ್ಯಕ್ಷ ಡಾ. ಮೆಹುಲ್ ಶಾ ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿರುವ ಗಾಯಾಳುಗಳ ಆರೋಗ್ಯ ನಿಗಾವಹಿಸಲು 100 ಕ್ಕೂ ಹೆಚ್ಚು ವೈದ್ಯರು ಆಸ್ಪತ್ರೆ ತಲುಪಿದ್ದಾರೆ. ನಾವು ಸಿಎಂ ಭೂಪೇಂದ್ರ ಪಟೇಲ್, ಗೃಹ ಸಚಿವ ಹರ್ಷ ಸಾಂಘವಿ, ಆರೋಗ್ಯ ಕಾರ್ಯದರ್ಶಿ ಧನಂಜಯ್ ದ್ವಿವೇದಿ ಮತ್ತು ಬಿ.ಜೆ. ವೈದ್ಯಕೀಯ ಸಿವಿಲ್ ಆಸ್ಪತ್ರೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಈ ದುರದೃಷ್ಟಕರ ಘಟನೆಯ ನಡುವೆ ನಾವು ಕೈಜೋಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

2025-06-13 10:03 GMT

ಅಹಮದಾಬಾದ್‌ನಲ್ಲಿ ಗುರುವಾರ ನಡೆದ ಏರ್‌ ಇಂಡಿಯಾ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಸಂತಾಪ ಸೂಚಿಸಿದ್ದಾರೆ. 

"ವಿಮಾನ ಅಪಘಾತದಲ್ಲಿ ಬಲಿಯಾದ ವಿಜಯ್ ರೂಪಾನಿ ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ರಾಜ್ಯಸಭಾ ಸಂಸದರಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು. ನಾವು ಕೆಲವು ಸಂದರ್ಭಗಳಲ್ಲಿ ಎರಡೂ ರಾಜ್ಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು" ಎಂದು ಪೋಸ್ಟ್‌ ಮಾಡಿದ್ದಾರೆ.

ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವಿಮಾನ ನಿಲ್ದಾಣದಲ್ಲಿ ಗುರುವಾರ(ಜೂ.12) ನಡೆದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡು 241 ಪ್ರಯಾಣಿಕರು ಮೃತಪಟ್ಟಿದ್ದು ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದ.

2025-06-13 09:03 GMT

 

ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರ ಅದೃಷ್ಟ ಸಂಖ್ಯೆ 1206 ಅವರ ನಿಧನದ ದಿನಾಂಕವಾಗಿದೆ. ಅವರು 1206 ಅನ್ನು ತಮ್ಮ ಅದೃಷ್ಟ ಸಂಖ್ಯೆ ಎಂದು ಪರಿಗಣಿಸಿದ್ದರು ಮತ್ತು ಅವರ ಬಳಿ ಇದ್ದ ಎಲ್ಲಾ ವಾಹನಗಳ ನೋಂದಣಿ ಸಂಖ್ಯೆಯಲ್ಲಿಯೂ ಇದೇ ಸಂಖ್ಯೆ ಇತ್ತು. 

ಗುರುವಾರ(ಜೂ.12) ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಮೆಘಾನಿನಗರ ಪ್ರದೇಶದ ವೈದ್ಯಕೀಯ ಕಾಲೇಜು ಮತ್ತು ವಸತಿನಿಲಯದ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ವಿಜಯ್‌ ರೂಪಾನಿ ಸೇರಿದಂತೆ 242 ಜನರು ಮೃತಪಟ್ಟಿದ್ದರು.

ಮಾಜಿ ಮುಖ್ಯಮಂತ್ರಿ 1206 ಅನ್ನು ತಮ್ಮ ಅದೃಷ್ಟ ಸಂಖ್ಯೆ ಎಂದು ಪರಿಗಣಿಸಿದ್ದರು, ಆದರೆ ಈಗ ಅದು ಅವರ ಅಂತಿಮ ಪ್ರಯಾಣದ ದಿನಾಂಕವಾಗಿದೆ, ಜೂನ್ 12 (12/6). ಅವರ ತವರು ರಾಜ್‌ಕೋಟ್‌ನಲ್ಲಿ ಜನರು ವಿಜಯ್‌ ರೂಪಾನಿ ಅವರ ಕಾರನ್ನು ಅದರ ವಾಹನ ನೋಂದಣಿ ಸಂಖ್ಯೆ 1206 ಮೂಲಕ ಗುರುತಿಸುತ್ತಿದ್ದರು.

ಪಿಟಿಐ, ರಾಜ್‌ಕೋಟ್‌ನ ಸ್ಥಳೀಯರು ಮತ್ತು ಪತ್ರಕರ್ತರ ಪ್ರಕಾರ, ರೂಪಾನಿ ಅವರ ಸ್ಕೂಟರ್‌ಗಳು ಮತ್ತು ಕಾರುಗಳು ಒಂದೇ ಸಂಖ್ಯೆಯನ್ನು ಹೊಂದಿದ್ದವು. ರೂಪಾನಿ ಲಂಡನ್‌ನಲ್ಲಿರುವ ತಮ್ಮ ಮಗಳ ಮನೆಗೆ ಪ್ರಯಾಣಿಸುತ್ತಿದ್ದರು, ಅವರ ಪತ್ನಿ ಬಿಜೆಪಿಯ ಸಕ್ರಿಯ ಸದಸ್ಯೆಯೂ ಆಗಿರುವ ಅಂಜಲಿಬೆನ್ ಕೂಡ ಅಲ್ಲಿದ್ದರು. ದುರಂತ ನಡೆದ ಹಿನ್ನಲೆ ಲಂಡನ್‌ನಲ್ಲಿದ್ದ ಅಂಜಲಿಬೆನ್ ಶುಕ್ರವಾರ ಬೆಳಿಗ್ಗೆ ಗಾಂಧಿನಗರ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

2025-06-13 07:31 GMT

 

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್‌ ಇಂಡಿಯಾ ದುರಂತದಲ್ಲಿ 265 ಜನರು ಮೃತಪಟ್ಟಿರುವುದಕ್ಕೆ ವಿಮಾನದಲ್ಲಿದ್ದ ಭಾರೀ ಪ್ರಮಾಣದ ಇಂಧನ ಕೂಡಾ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ 1,000 ಡಿಗ್ರಿ ತಾಪಮಾನ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು. ವಿಮಾನ ಸುಟ್ಟು ಕರಕಲಾಗಿರುವುದಕ್ಕೆ ವಿಮಾನದಲ್ಲಿದ್ದ 1.25 ಲಕ್ಷ ಲೀಟರ್‌ ವೈಮಾನಿಕ ಇಂಧನವೂ ಕಾರಣ ಎಂದು ಹೇಳಿದ್ದಾರೆ. 

2025-06-13 06:46 GMT

 

ಅಹಮದಾಬಾದ್‌ನಲ್ಲಿ ಗುರುವಾರ(ಜೂ.12) ನಡೆದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 265 ಜನರು ಮೃತಪಟ್ಟಿದ್ದರು.  ಶುಕ್ರವಾರ ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿಜಯ್‌ ರೂಪಾನಿ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

2025-06-13 06:32 GMT

 

ಅಹಮದಾಬಾದ್‌ನಲ್ಲಿ ಗುರುವಾರ(ಜೂ.12) ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸಿಂಗಪುರ ಪ್ರಧಾನಿ ಲ್ಯಾವರೆನ್ಸ್ ವಾಂಗ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

"ಜೂನ್ 12ರಂದು ನಡೆದ ಏರ್ ಇಂಡಿಯಾ ಎಐ171 ವಿಮಾನ ಅಪಘಾತದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಸಿಂಗಪುರ ಸರ್ಕಾರದ ಪರವಾಗಿ, ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಹಾಗೂ ಅವರ ಕುಟುಂಬದವರಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇವೆ. ದುಃಖದ ಸಮಯದಲ್ಲಿ ಭಾರತದ ಜತೆಗೆ ಸಿಂಗಪುರವಿರಲಿದೆʼʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

2025-06-13 06:20 GMT

ಅಹಮದಾಬಾದ್‌ನ ಸರ್ದಾರ್‌ ವಲ್ಲಭಬಾಯಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಇಂದು ಅಹಮದಾಬಾದ್‌ನಲ್ಲಿ ನಡೆದ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ವಿನಾಶದ ದೃಶ್ಯವು ದುಃಖಕರವಾಗಿದೆ. ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡಗಳನ್ನು ಭೇಟಿ ಮಾಡಿದೆ. ಈ ಊಹಿಸಲಾಗದ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನಾವಿದ್ದೇವೆ." ಎಂದು ತಿಳಿಸಿದ್ದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Tags:    

Similar News