ಡಿಕೆಶಿ ಹೋಗುವ ಜಾಗದಲ್ಲಿ ಯಾವ ಟ್ರೀಟ್‌ಮೆಂಟ್ ಕೊಡುತ್ತಾರೋ ನೋಡೋಣ: ಎಚ್‌ಡಿಕೆ ತಿರುಗೇಟು

Update: 2024-08-12 06:15 GMT

ʻʻಡಿಕೆ ಶಿವಕುಮಾರ್ ಅವರು ಮುಂದೆ ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣʼʼ‌‌ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಡಿಕೆ ಶಿವಕುಮಾರ್‌ ಅವರು ಕುಮಾರಸ್ವಾಮಿ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಟೀಕೆ ಮಾಡಿದ್ದರು.‌ ಅವರ ಆ ಹೇಳಿಕೆಗೆ ಕುಮಾರಸ್ವಾಮಿ ಇದೀಗ ಈ ತಿರುಗೇಟು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಯಾರು ಮೆಂಟಲ್ ಆಸ್ಪತ್ರೆಗೆ ಹೋಗುತ್ತಾರೆ ನೋಡೋಣ ಬನ್ನಿ. ನಾವು ಮೆಂಟಲ್ ಆಸ್ಪತ್ರೆಗೆ ಹೋಗಿ ಟ್ರೀಟ್ಮೆಂಟ್ ತಗೆದುಕೊಳ್ಳಬಹುದು‌, ಇರಲಿ.. ಆದರೆ ಅವರು ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ತಾರೆ ನೋಡೋಣ ಬನ್ನಿ‌‌ʼʼ ಎಂದು ಹೇಳಿದರು.

ಈ ಹೇಳಿಕೆಯ ಮೂಲಕ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್‌ ಅವರ ಮುಂದಿನ ಸಂಕಷ್ಟದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ರಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ʻʻಆ ವ್ಯಕ್ತಿಯ ಹೇಳಿಕೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯ ಇಲ್ಲ. ಪಾದಯಾತ್ರೆ ಮುಕ್ತಾಯ ಮಾಡಿದ್ದೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ನಿರಂತರವಾಗಿ ಇರುತ್ತದೆ. ಪಾದಯಾತ್ರೆ ಯಶಸ್ಸು ಸಹಿಸಲಾಗದೆ ಈ ರೀತಿ ಮಾತನಾಡುತ್ತಿದ್ದಾರೆ. ಲೂಟಿ ಮಾಡಿಕೊಂಡು ಸಾಗುತ್ತಿದೆ ಸರ್ಕಾರ. ನಮ್ಮ ಬಗ್ಗೆ ಸಹಿಷ್ಣುತೆ ಇಲ್ಲದೆ ವ್ಯಕ್ತಿಗತ ಟೀಕೆ ಮಾಡುತ್ತಿದ್ದಾರೆ. ಜನರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ‌ʼʼ ಎಂದು ಅವರು ಹೇಳಿದರು.

ʻʻಈ ಸರ್ಕಾರದ ಭ್ರಷ್ಟಾಚಾರವನ್ನು ತಿಳಿಸಲು, ಜನಜಾಗೃತಿ ಮೂಡಿಸಲು ನಾವು ಪಾದಯಾತ್ರೆ ಮಾಡಿದ್ದೇವೆ. ಮುಂದೆ ಕಾನೂನು ರೀತಿಯ ಹೋರಾಟವನ್ನೂ ನಡೆಸುತ್ತೇವೆ. ಕರ್ನಾಟಕದ ಖಜಾನೆ ಸದಾ ತುಂಬಿರುತ್ತದೆ. ಖಜಾನೆಯನ್ನು ಈ ಸರ್ಕಾರ ಲೂಟಿ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಈ ಸರ್ಕಾರ ಮಾಡುತ್ತಿಲ್ಲ. ಇಲ್ಲಿ ಸಿಎಂ ಕುರ್ಚಿ ಅಲ್ಲಾಡುತ್ತಿಲ್ಲ, ಕುರ್ಚಿಯಲ್ಲಿ ಕೂತವರು ಅಲ್ಲಾಡುತ್ತಿದ್ದಾರೆ ಅಷ್ಟೇ.. ರಾಜ್ಯದಲ್ಲಿ ಅಧಿಕಾರದ ಕುರ್ಚಿ ಭದ್ರವಾಗಿಯೇ ಇರುತ್ತದೆ. ಕೆಂಗಲ್ ಹನುಮಂತಯ್ಯ ಕಟ್ಟಿರುವ ವಿಧಾನಸೌಧ ಕುರ್ಚಿ ಗಟ್ಟಿಯಾಗಿದೆ. ಕುರ್ಚಿಯಲ್ಲಿ‌ ಕೂರೋರು ಭದ್ರವಾಗಿ ಇರೋಕೆ ಆಗಲ್ಲʼʼ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Tags:    

Similar News