ಬೈಕ್‌ ಟ್ಯಾಕ್ಸಿಗೆ ಬೆಂಬಲ; ಉದ್ಯಮಿ ಮೋಹನ್‌ ದಾಸ್‌ ಪೈ ವಿರುದ್ಧ ದೂರು ದಾಖಲು

ಬೈಕ್ ಟ್ಯಾಕ್ಸಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ದೂರು ದಾಖಲಿಸಿದೆ.;

Update: 2025-06-23 08:34 GMT
ಮೋಹನ್‌ ದಾಸ್‌ ಪೈ

ಬೈಕ್ ಟ್ಯಾಕ್ಸಿ ಬೆಂಬಲಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ದೂರು ದಾಖಲಿಸಿದೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದ ಬಳಿಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಬೈಕ್ ಟ್ಯಾಕ್ಸಿಗೆ ಕಡಿವಾಣ ಹಾಕಿದ್ದರು. ಬೈಕ್ ಟ್ಯಾಕ್ಸಿ ನಿಷೇಧ ಕುರಿತಂತೆ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಿದ್ದವು.

ಈ ಮಧ್ಯೆ, ಬೈಕ್ ಟ್ಯಾಕ್ಸಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ದೂರು ದಾಖಲಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.

ಸುಮೊಟೊ ಪ್ರಕರಣಕ್ಕೆ ಸೇರ್ಪಡೆ 

ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ವಿಧಾನಸೌಧ ಠಾಣೆಗೆ ನೀಡಿರುವ ದೂರನ್ನು ಈ ಹಿಂದೆ ಪೊಲೀಸರು ದಾಖಲಿಸಿಕೊಂಡ ಸುಮೊಟೊ ಪ್ರಕರಣದಲ್ಲೇ ಸೇರ್ಪಡೆ ಮಾಡಲಾಗಿದೆ. 

ಜೂ.21 ರಂದು ಬೈಕ್ಸ್‌ ಟ್ಯಾಕ್ಸಿ ಚಾಲಕರ ಗುಂಪು ಯಾವುದೇ ಅನುಮತಿ ಪಡೆಯದೇ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ವಿಧಾನಸೌಧ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಅದೇ ಪ್ರಕರಣದಲ್ಲಿ ಓಲಾ, ಉಬರ್‌, ರಾಪಿಡೋ ಹಾಗೂ ಮೋಹನ್‌ದಾಸ್‌ ಪೈ ವಿರುದ್ಧ ನೀಡಿರುವ ದೂರನ್ನು ಸೇರಿಸಲಾಗಿದೆ. ನಾಳೆ ಮೋಹನ್‌ ದಾಸ್‌ ಪೈ ಅವರಿಗೆ ಪೊಲೀಸರು ನೊಟೀಸ್‌ ನೀಡುವ ಸಾಧ್ಯತೆ ಇದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.   



ಅನುಮತಿ ಇಲ್ಲದೇ ಪ್ರತಿಭಟನೆ

ಬೆಂಗಳೂರಿನಲ್ಲಿ ಪ್ರತಿಭಟನೆ, ಸತ್ಯಾಗ್ರಹ ನಡೆಸಲು ಫ್ರೀಡಂ ಪಾರ್ಕ್‌ ನಲ್ಲಿ ಅವಕಾಶ ನೀಡಲಾಗಿದೆ. ಆದರೆ, ಬೈಕ್‌ ಟ್ಯಾಕ್ಸಿ ಚಾಲಕರ ಗುಂಪು ಅನಧಿಕೃತವಾಗಿ ವಿಧಾನಸೌಧದ ಮುಂದೆ ಮೌನ ಪ್ರತಿಭಟನೆ ನಡೆಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. 

ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ವಿಧಾನಸೌಧದ ಎದುರು ಯಾವುದೇ ರೀತಿ ಪ್ರತಿಭಟನೆ ನಡೆಸದಂತೆ ಪೊಲೀಸರು ಕ್ರಮ ಕೈಗೊಂಡಿದ್ದರು. ಆದಾಗ್ಯೂ, ಬೈಕ್‌ ಟ್ಯಾಕ್ಸಿ ಚಾಲಕರ ಗುಂಪು ಪ್ರತಿಭಟನೆ ನಡೆಸಿದ ಪರಿಣಾಮ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದರು. 

ಪೈ ಹೇಳಿಕೆಗೆ ಆಕ್ರೋಶ

ಬೈಕ್ ಟ್ಯಾಕ್ಸಿ ನಿಷೇಧಿಸಿದ ಹೈಕೋರ್ಟ್‌ ಆದೇಶ ಹೊರಡಿಸಿದರೂ ಉದ್ಯಮಿ ಮೋಹನ್‌ದಾಸ್‌ ಪೈ ಅವರು ಕಾನೂನು ಗೌರವಿಸದೇ ಬೈಕ್‌ ಟ್ಯಾಕ್ಸಿ ಪರವಾಗಿ ಮಾತನಾಡಿರುವುದು ಸರಿಯಲ್ಲ. ಬೈಕ್ ಟ್ಯಾಕ್ಸಿಯಿಂದ ಆಗುತ್ತಿರುವ ಸಮಸ್ಯೆಗಳ ಅರಿವು ಪೈ ಅವರಿಗೆ ಇಲ್ಲವೇ ಎಂದು ನಟರಾಜ್‌ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕಾರ್ಪೋರೇಟ್ ಕಂಪನಿಗಳ ಪರವಾಗಿ ಮಾತನಾಡುವವರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬೇಕಿದ್ದರೆ ಬೈಕ್ ಟ್ಯಾಕ್ಸಿಯವರು ಸುಪ್ರೀಂಕೋರ್ಟ್‌ಗೆ ಹೋಗಲಿ ಎಂದು ತಾಕೀತು ಮಾಡಿದ್ದಾರೆ.

Tags:    

Similar News