ಮಳೆ ಅಬ್ಬರಕ್ಕೆ ಶಿರಾಡಿ ಘಾಟ್‌ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ; ಪ್ರಯಾಣಿಕರಲ್ಲಿ ಹೆಚ್ಚಿದ ಆತಂಕ

ಶಿರಾಡಿ ಘಾಟ್ ಉದ್ದಕ್ಕೂ ಸೋಮವಾರ ಸುರಿದ ಮಳೆಗೆ ಗುಡ್ಡಗಳು ಕುಸಿದು ಮಣ್ಣು ರಸ್ತೆ ಮೇಲೆ ಬರುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ. ಮಳೆಯ ಆರ್ಭಟ ಮುಂದುವರಿದಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಪ್ರಯಾಣ ದುಸ್ತರವಾಗಲಿದೆ.;

Update: 2025-06-17 10:13 GMT

ಹಾಸನ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಶಿರಾಡಿ ಘಾಟ್ನಲ್ಲಿ ಪದೇ ಪದೇ ಗುಡ್ಡ ಕುಸಿತ ಸಂಭವಿಸುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ- 75 ರಲ್ಲಿ ಬರುವ ಶಿರಾಡಿ ಘಾಟ್ ಉದ್ದಕ್ಕೂ ಸೋಮವಾರ ಸುರಿದ ಮಳೆಗೆ ಗುಡ್ಡಗಳು ಕುಸಿದು ಮಣ್ಣು ರಸ್ತೆ ಮೇಲೆ ಬರುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ. ಮಳೆಯ ಆರ್ಭಟ ಮುಂದುವರಿದಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಪ್ರಯಾಣ ದುಸ್ತರವಾಗಲಿದೆ.

ಶಿರಾಡಿ ಘಾಟ್- ಮಾರನಹಳ್ಳಿ ಸಮೀಪದ ಹೆಗ್ಗದ್ದೆ ಗ್ರಾಮದಲ್ಲಿ ಗುಡ್ಡದಿಂದ ಮಣ್ಣು ಹಾಗೂ ಮರಗಳು ಕುಸಿಯುತ್ತಿವೆ. ಸೋಮವಾರ ಮಳೆಯ ನಡುವೆ ಜನರು ನೋಡ ನೋಡುತ್ತಿದ್ದಂತೆ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಇದೇ ಗ್ರಾಮದಲ್ಲಿ15 ದಿನಗಳ ಹಿಂದೆ ಸಣ್ಣ ಪ್ರಮಾಣದ ಮಣ್ಣು ಕುಸಿದಿತ್ತು.

ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ರಾಷ್ಟೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಕಾಮಗಾರಿ ಆರಂಭವಾಗಿ ಎಂಟು ವರ್ಷ ಕಳೆದಿದೆ. ಇನ್ನೂ ಕಾಮಗಾರಿ ಮುಗಿದಿಲ್ಲ. ಇದರಿಂದಲೇ ಪದೇ ಪದೇ ಗುಡ್ಡ ಕುಸಿತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೋಣಿಗಲ್ ಬಳಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿಬಿದ್ದ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು. ಕಪ್ಪಳ್ಳಿ ಬಳಿ ಭಾರೀ ಪ್ರಮಾಣದ ಮಣ್ಣಿನ ರಾಶಿ ರಸ್ತೆಗೆ ಬಿದ್ದುದರಿಂದ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ದೊಡ್ಡತಪ್ಲು ಬಳಿ ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಕುಸಿದು ಬಿದ್ದು ಅಪಾರ ಪ್ರಮಾಣದ ಕಾಫಿ ತೋಟ ನಾಶವಾಗಿದೆ. ಈಗಾಗಲೇ ಮುಂಗಾರು ಪೂರ್ವ ಮಳೆಗೆ ಸಾಕಷ್ಟು ಹಾನಿಗೆ ಒಳಗಾಗಿದ್ದ ಮಲೆನಾಡಿನ ಜನರು ಈಗ ಮುಂಗಾರು ಮಳೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

Tags:    

Similar News