ಎಲ್ಲ ವಲಯಗಳಲ್ಲೂ ಬರ್ಬಾದ್ ಮಾಡುವುದೇ ಕಾಂಗ್ರೆಸ್ಸಿನ ಕರ್ನಾಟಕ ಮಾಡೆಲ್: ಬಿಜೆಪಿ ವ್ಯಂಗ್ಯ

Update: 2024-07-02 12:52 GMT

ಕರ್ನಾಟಕವನ್ನು ಎಲ್ಲ ವಲಯಗಳಲ್ಲಿಯೂ ಬರ್ಬಾದ್‌ ಮಾಡುವುದೇ ಕಾಂಗ್ರೆಸ್‌ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್ ಎಂದು ಆರ್ಥಿಕ ಮುಗ್ಗಟ್ಟು ಕುರಿತು ಸರ್ಕಾರಕ್ಕೆ ಇಂಧನ ಇಲಾಖೆ ಬರೆದ ಪತ್ರ ಉಲ್ಲೇಖಿಸಿ ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಇಂದು (ಮಂಗಳವಾರ) ರಾಜ್ಯ ಬಿಜೆಪಿ ಘಟಕ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ʻʻಕರ್ನಾಟಕವನ್ನು ಎಲ್ಲಾ ವಲಯಗಳಲ್ಲೂ ಬರ್ಬಾದ್‌ ಮಾಡುವುದೇ ಕಾಂಗ್ರೆಸ್‌ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್, ಈಗಾಗಲೇ ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ ಹಾಳು ಮಾಡಿದ್ದು, ಇದರ ಸಂಪೂರ್ಣ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆʼʼ ಎಂದು ವಾಗ್ದಾಳಿ ನಡೆಸಿದೆ.

ʻʻರಾಜ್ಯದ ಇಂಧನ ಇಲಾಖೆ ತನ್ನ ದೈನಂದಿನ ಚಟುವಟಿಕೆಗಳಿಗೂ ಸಹ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಹೆಚ್ಚಿನ ಸಾಲ ಪಡೆಯಲು ಅನುಮತಿ ನೀಡಿ, ಇಲ್ಲವೇ ಸರ್ಕಾರದಿಂದ ಬರಬೇಕಿರುವ ಬಾಕಿಯನ್ನು ಪಾವತಿಸಿ ಎಂದು ಪತ್ರ ಬರೆದಿರುವುದು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಷ್ಟರ ಮಟ್ಟಿಗೆ ಹದಗೆಡಿಸಿದೆ ಎಂಬುದರ ಸುಸ್ಪಷ್ಟ ನಿದರ್ಶನವಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಕರ್ನಾಟಕ ಬರ್ಬಾದ್‌ ಆಗಿದೆ ಎಂಬುದು ನಿಮ್ಮ ಇಂಧನ ಇಲಾಖೆ ಬರೆದ ಪತ್ರದಿಂದಲೇ ಕೊನೆಗೂ ಋಜುವಾತಾಗಿದೆ. ಸಿದ್ದರಾಮಯ್ಯ, ಕರ್ನಾಟಕ ಕಂಡ ಅತ್ಯಂತ ದುರ್ಬಲ ಸಿಎಂ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ?ʼʼ ಎಂದು ಕಿಡಿಕಾರಿದೆ.

ವಿದ್ಯುತ್​ ಸರಬರಾಜು ಕಂಪನಿಗಳು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ವಿದ್ಯುತ್​ ಖರೀದಿ ಶುಲ್ಕವನ್ನು ಪಾವತಿಸಲು ಹಾಗೂ ಕಂಪನಿಯ ಇತರೆ ವೆಚ್ಚಗಳನ್ನು ಭರಿಸಲು ಕಷ್ಟಕರವಾಗಿದ್ದು, ಬಾಕಿ ಪಾವತಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಈ ಹಿನ್ನಲೆ ಬಿಜೆಪಿಯು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

Tags:    

Similar News