ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ವಿಘ್ನ? ಭಗವಾಧ್ವಜ ತೆರವಿನಿಂದ ವಿವಾದ

ವಿಜಯದಶಮಿ ಹಾಗೂ ಆರ್‌ಎಸ್‌ಎಸ್‌ ಸ್ಥಾಪನೆಯ 100ನೇ ವರ್ಷದ 'ಶತಾಬ್ದಿ' ಸಂಭ್ರಮದ ಅಂಗವಾಗಿ ಅಕ್ಟೋಬರ್ 19ರಂದು ಚಿತ್ತಾಪುರದಲ್ಲಿ ಪಥ ಸಂಚಲನವನ್ನು ಆಯೋಜಿಸಲಾಗಿತ್ತು.

Update: 2025-10-18 04:17 GMT

ಚಿತ್ತಾಪುರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕಾಗಿ ಅಳವಡಿಸಲಾಗಿದ್ದ ಭಗವಾ ಧ್ವಜಗಳು 

Click the Play button to listen to article

ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪಥ ಸಂಚಲನಕ್ಕಾಗಿ ಅಳವಡಿಸಲಾಗಿದ್ದ ಭಗವಾ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ತಡರಾತ್ರಿ ಪುರಸಭೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ಆರ್‌ಎಸ್‌ಎಸ್‌ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯದಶಮಿ ಹಾಗೂ ಆರ್‌ಎಸ್‌ಎಸ್‌ ಸ್ಥಾಪನೆಯ 100ನೇ ವರ್ಷದ 'ಶತಾಬ್ದಿ' ಸಂಭ್ರಮದ ಅಂಗವಾಗಿ ಅಕ್ಟೋಬರ್ 19ರಂದು ಚಿತ್ತಾಪುರದಲ್ಲಿ ಪಥ ಸಂಚಲನವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಪಟ್ಟಣದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಸಂಘದ ಕಾರ್ಯಕರ್ತರು ಕೇಸರಿ ಪತಾಕೆ, ಭಗವಾ ಧ್ವಜ ಮತ್ತು ಬ್ಯಾನರ್‌ಗಳನ್ನು ಕಟ್ಟಿ ಅಲಂಕಾರ ಮಾಡಿದ್ದರು. ಆದರೆ, ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪುರಸಭೆ ಸಿಬ್ಬಂದಿ, "ಯಾವುದೇ ಪೂರ್ವಾನುಮತಿ ಇಲ್ಲದೆ ಅಳವಡಿಸಲಾಗಿದೆ" ಎಂದು ಹೇಳಿ ಧ್ವಜಗಳು ಮತ್ತು ಪೋಸ್ಟರ್‌ಗಳನ್ನು ಹರಿದುಹಾಕಿ ತೆರವುಗೊಳಿಸಿದ್ದಾರೆ.

ಆರ್​ಎಸ್​ಎಸ್​ ಕಾರ್ಯಕರ್ತರಿಂದ ಧಿಕ್ಕಾರ

ಈ ಕ್ರಮವನ್ನು ವಿರೋಧಿಸಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪುರಸಭೆ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಈ ತೆರವು ಕಾರ್ಯಾಚರಣೆ ನಡೆದಿರುವುದು ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಸೇರಿದಂತೆ ಖಾಸಗಿ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ನಿರ್ಬಂಧ ಹೇರುವ ಕುರಿತ ಚರ್ಚೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಲು ಸಚಿವ ಸಂಪುಟ ತೀರ್ಮಾನಿಸಿತ್ತು. ಇತ್ತೀಚೆಗೆ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ರಾಯಚೂರು ಜಿಲ್ಲೆಯ ಪಿಡಿಒ ಒಬ್ಬರನ್ನು ಅಮಾನತುಗೊಳಿಸಿದ್ದು ಸಹ ಈ ವಿವಾದಕ್ಕೆ ಹೊಸ ಆಯಾಮ ನೀಡಿದೆ.

Tags:    

Similar News