The Federal Exclusive| ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿಸಲು ಕೊಡಬೇಕಂತೆ 500, 1000 ರೂ ; ಕೆಪಿಸಿಸಿ ಉಪಾಧ್ಯಕ್ಷ ಗಂಭೀರ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸುತ್ತಮುತ್ತ ವಂಚಕರ(Fraud) ಸಂತೆಯೇ ತುಂಬಿಕೊಂಡಿದೆ‌‌ ಎಂದು ಕೆಪಿಸಿಸಿ ಉಪಾಧ್ಯಕ್ಷ ಎ.ಆರ್‌.ಎಂ..ಹುಸೇನ್ ಆರೋಪಿಸಿದ್ದಾರೆ.;

Update: 2025-06-08 03:00 GMT

ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಬೇಕಾದರೆ  ಕಾರ್ಯಕರ್ತರು ದುಡ್ಡು ಕೊಡಬೇಕಂತೆ..!

ಹೌದು, ಇಂಥದ್ದೊಂದು ಗಂಭೀರ ಅರೋಪ‌ ಮಾಡಿದವರು ಬೇರೆ ಯಾರೂ ಅಲ್ಲ. ಸ್ವಪಕ್ಷಿಯರೇ ಆಗಿರುವ ಕೆಪಿಸಿಸಿ ಉಪಾಧ್ಯಕ್ಷರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸುತ್ತಮುತ್ತ ವಂಚಕರ(Fraud) ಸಂತೆಯೇ ತುಂಬಿಕೊಂಡಿದೆ. ಗನ್ ಮ್ಯಾನ್ ಗಳ ಉಪಟಳವೂ ಸಹಿಸಲು ಆಗದಂತಾಗಿದೆ. ದೂರದ ಊರುಗಳಿಂದ‌ ಸಮಸ್ಯೆ ಹೊತ್ತು ಬರುವ ಕಾರ್ಯಕರ್ತರನ್ನು ಉಪ ಮುಖ್ಯಮಂತ್ರಿಗಳ ಭೇಟಿಗೆ ಬಿಡುವುದೇ ಇಲ್ಲ. ಕಾರ್ಯಕರ್ತರು ಕೂಡ ದುಡ್ಡು ಕೊಟ್ಟು ಉಪ ಮುಖ್ಯಮಂತ್ರಿಗಳನ್ನು ಕಾಣಬೇಕಾದ ಪರಿಸ್ಥಿತಿ‌ ಇದೆ. ಇಂತಹ ನೀಚರಿಂದ ಕಾರ್ಯಕರ್ತರು ರೋಸಿ ಹೋಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಎ.ಆರ್‌.ಎಂ. ಹುಸೇನ್ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಅಸಮಾಧಾನದ ಸಂದರ್ಭವೇನು?

ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ‌ರಾದ ಗೋವಿಂದರಾಜು ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಗೇಟ್ ಪಾಸ್ ನೀಡಿದ ನಿರ್ಧಾರವನ್ನು ಎ.ಎಂ.ಆರ್ ಹುಸೇನ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಹುಸೇನ್ ಅವರು, ಇಂತಹ ಕ್ರಮ ಖಂಡಿತ ಆಗಬೇಕು. ಗೋವಿಂದರಾಜುವಿನಿಂದ ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಯಾವುದೇ ಲಾಭವಿಲ್ಲ. ಮುಖ್ಯಮಂತ್ರಿಯ ಅಕ್ಕಪಕ್ಕ ಇಂತಹ ಇನ್ನಷ್ಟು ಶನಿ ಸಂತಾನಗಳಿದ್ದಾರೆ.  ಅಂತವರನ್ನು ದೂರವಿಡಬೇಕು ಎಂದಿದ್ದರು.‌ ಇದಲ್ಲದೇ ಉಪ ಮುಖ್ಯಮಂತ್ರಿಗಳ ಸುತ್ತಲೂ ಫ್ರಾಡ್ ಗಳ ಸಂತೆಯೇ ತುಂಬಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಡಿಸಿಎಂ ಭೇಟಿಗೆ ಹಣ ಕೊಡಬೇಕಾದ ಪರಿಸ್ಥಿತಿ

'ದ ಫೆಡರಲ್‌‌‌ ಕರ್ನಾಟಕ' ದ ಜೊತೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್‌.ಎಂ..ಹುಸೇನ್ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಕಾರ್ಯಕರ್ತರನ್ನು ಒಳಗೆ ಬಿಡುವುದೇ ಇಲ್ಲ.

ದೂರದ ಬೀದರ್ ಇತ್ಯಾದಿ ಕಡೆಗಳಿಂದ‌ ಬರುವ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರನ್ನು ನೋಡಬೇಕಾದರೆ ಅಲ್ಲಿರುವ ಸಿಬ್ಬಂದಿಗೆ 500, 1000 ನೀಡಿದರೆ ಮಾತ್ರ ಗೇಟ್ ಒಳಗೆ ಬಿಡುತ್ತಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ.ಕೆ‌.ಶಿವಕುಮಾರ್ ಅವರ ಸುತ್ತಲೂ ಇಂತಹ ವಂಚಕರೇ ತುಂಬಿರುವುದರಿಂದ ಅವರ ವರ್ಚಸ್ಸು ಹಾಳಾಗುತ್ತಿದೆ. ತಮ್ಮ ಸುತ್ತಮುತ್ತ ಇಂತಹ ವಂಚಕರು ಇರುವುದು ಉಪ ಮುಖ್ಯಮಂತ್ರಿಗಳಿಗೆ ತಿಳಿಯುತ್ತಿಲ್ಲ. ಅವರ ಗನ್ ಮ್ಯಾನ್ ಗಳೇ ಕಾರ್ಯಕರ್ತರಿಂದ ಹಣ ಕೀಳುತ್ತಾರೆ ಎಂದು ಆರೋಪಿಸಿದರು..

ಕಾರ್ಯಕರ್ತರನ್ನು ಡಿಕೆಶಿ ಸುತ್ತಮುತ್ತ ಇರುವವರೇ ತಡೆಯುತ್ತಿದ್ದಾರೆ. ಯಾರಾದರೂ 500 ಅಥವಾ 1000 ಸಾವಿರ ರೂಪಾಯಿ ನೀಡಿದರೆ ಮಾತ್ರ ಗೇಟ್ ಒಳಗೆ ಬಿಡುತ್ತಾರೆ. ಬೀದರ್ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಾರ್ಯಕರ್ತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಡಿಕೆಶಿ ಒಳ್ಳೆಯವರು, ವಂಚಕರ ಬಗ್ಗೆ ಗೊತ್ತಿಲ್ಲ 

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯವರು. ಅವರಿಗೆ ಇಂತಹ ವಂಚಕರ ಬಗ್ಗೆ ಗೊತ್ತಿಲ್ಲ. ಇಂಥ ವಂಚಕರು ಡಿ.ಕೆ.ಶಿವಕುಮಾರ್ ಜೊತೆ ಹೆಗಲ ಮೇಲೆ ಕೈಹಾಕಿಸಿಕೊಂಡು ಪೊಟೋ ತೆಗೆಸಿಕೊಳ್ಳುತ್ತಾರೆ .‌ನಂತರ ಆ ಪೊಟೋ ಇಟ್ಟುಕೊಂಡು ಕಾರ್ಯಕರ್ತರನ್ನು ಸುಲಿಗೆ ಮಾಡುತ್ತಾರೆ. ಡಿಸಿಎಂ ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಇವರನ್ನು ಹೊರಗೆ ಹಾಕದಿದ್ದರೆ ಡಿ.ಕೆ.ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ಬರುವ ಆತಂಕವಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಗೋವಿಂದರಾಜು ಅವರಿಗೆ ಗೇಟ್ ಪಾಸ್ ನೀಡಿದರೂ ಇನ್ನು ಹಲವು ವಂಚಕರು ಅವರ ಸುತ್ತಲೂ ಇದ್ದಾರೆ. ಅವರನ್ನೂ ಹೊರಗೆ ಹಾಕಬೇಕು‌‌ ಎಂದು ಹುಸೇನ್ ಮನವಿ ಮಾಡಿದರು.

ಗೋವಿಂದರಾಜು ಸಿಎಂಗಳಿಗೆ ಹೇಗೆ ಪರಮಾಪ್ತರಾಗುತ್ತಾರೆ ಗೊತ್ತಿಲ್ಲ

ಗೋವಿಂದರಾಜು ಯಾವಾಗಲೂ ಹಿಂಬಾಗಿಲಿನಿಂದ ರಾಜಕಾರಣ ಮಾಡಿಕೊಂಡು ಬಂದವರು. ಎಸ್.ಎಂ ಕೃಷ್ಣ ಅವರ ಅವಧಿಯಿಂದಲೂ ಎಲ್ಲಾ ಸಿಎಂ ಇದ್ದಾಗಲೂ ಕಾಂಗ್ರೆಸ್ ನಲ್ಲಿ ಎಂಎಲ್ ಸಿ ಆಗುತ್ತಾರೆ. ಅವರಿಂದ ಪಕ್ಷಕ್ಕೆ ಏನೂ ಪ್ರಯೋಜನ ಇಲ್ಲ. ಆದರೆ ಸಿಎಂಗಳಿಗೆ ಹೇಗೆ ಪರಾಮಾಪ್ತರಾಗುತ್ತಾರೆ ಎಂಬುದೇ ನಿಗೂಢವಾಗಿದೆ. ಅವರು ಪರಮಾಪ್ತರಾಗುವ ಬಗ್ಗೆ ಬಹುಶಃ ಎಲ್ಲರಿಗೂ ತಿಳಿದಿದೆ. ಮಾಧ್ಯಮದವರಿಗೂ ಗೊತ್ತು. ಅದನ್ನೇಕೆ  ನಮ್ಮ ಬಾಯಲ್ಲಿ ಏಕೆ ಹೇಳಿಸುತ್ತೀರಾ‌ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷರ ಈ ಹೇಳಿಕೆ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ‌ ನೀಡಿದಂತಾಗಿದೆ. ಒಟ್ಟಾರೆ ಸಿಎಂ ಹಾಗೂ ಡಿಸಿಎಂ ಸುತ್ತಲೂ ಹೊಗಳುಭಟ್ಟರು ತುಂಬಿಕೊಂಡಿದ್ದು, ಅಂತವರಿಂದಲೇ ವಿವಾದಗಳು ಮೈಮೇಲೆ ಎಳೆದುಕೊಳ್ಳುವಂತಾಗಿದೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಚಸ್ಸು ಕಳೆದುಕೊಳ್ಳುವುದು ನಿಶ್ಚಿತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಹುಸೇನ್‌ ಅವರು ದ ಫೆಡರಲ್‌ ಕರ್ನಾಟಕದ ಜತೆ ನಡೆಸಿದ Exclusive ಮಾತುಕತೆ ವಿವರ ಇಲ್ಲಿದೆ.

Full View

    

Tags:    

Similar News