Save Karnataka Tigers | ಮಲೆಮಹದೇಶ್ವರ ವನ್ಯಜೀವಿಧಾಮದ ಹುಲಿಗಳ ಹತ್ಯೆ: ಜಿಲ್ಲಾ ಎಸ್ಪಿ ಪತ್ರಕ್ಕೆ ಇಲ್ಲ ಮನ್ನಣೆ; ತಜ್ಞರ ಅಭಿಪ್ರಾಯವೇನು?
ಜೂನ್ 10ರಂದುನೇ ಚಾಮರಾಜನಗರ ಎಸ್ಪಿ ಡಾ. ಬಿ.ಟಿ.ಕವಿತಾ ಅರಣ್ಯ ಇಲಾಖೆಗೆ ಪತ್ರ ಬರೆದು ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯ ಪಾಲಾರ್ ಚೆಕ್ ಪೋಸ್ಟ್ ಬಳಿ 15-15 ಅಳತೆಯ ಪೊಲೀಸ್ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದಿದ್ದರು.;
ಮೃತಪಟ್ಟಿರುವ ಹುಲಿಗಳು
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವ್ಯಾಪ್ತಿಯಲ್ಲಿ ಸತ್ತಿರುವುದು ಐದು ಹುಲಿಗಳು ಮಾತ್ರವಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ದಕ್ಷತೆ, ಕಾಡಂಚಿನ ಗ್ರಾಮಗಳ ಜನರ ಮಾನವೀಯತೆ ಮತ್ತು ಸರ್ಕಾರದ ಬದ್ಧತೆ.
ಹೌದು, ವಿಷವಿಟ್ಟು ಸುಮಾರು 8 ವರ್ಷದ ತಾಯಿ ಹುಲಿ, 2.5 ವರ್ಷದ ನಾಲ್ಕು ಮರಿ ಹುಲಿಗಳನ್ನು ಕೊಂದ ಘಟನೆಯ ಹಿಂದೆ ಬಿದ್ದರೆ ಹಲವಾರು ಕ್ರೂರ ಆಯಾಮಗಳು ಕಾಣಿಸಿಕೊಳ್ಳುತ್ತವೆ. ಇವು ಹಸಿದಾಗ ಮಾತ್ರ ಬೇಟೆಯಾಡಿ ತಿನ್ನುವ ಹುಲಿಗಳ ಕ್ರೂರತೆಗಿಂತಲೂ ಸಾವಿರ ಪಟ್ಟು ಹೆಚ್ಚು.
ಅರಣ್ಯ ಸಂಪತ್ತು ರಕ್ಷಿಸಬೇಕಾದ ಅಧಿಕಾರಿಗಳು ತಮ್ಮ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವತ್ತಲೇ ಗಮನಕೊಟ್ಟಂತೆ ಕಾಣುತ್ತಿದೆ. ಸರ್ಕಾರ ಸದಾ ತನ್ನ ಉದಾಸೀನ ಪೃವೃತ್ತಿಗೆ ಅಂಟಿಕೊಂಡಿದೆ. ಕಾಡಂಚಿನ ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಜನರಲ್ಲಿ ಕೆಲವರು ದುಷ್ಟ ಕೂಟಗಳೊಂದಿಗೆ ಕೈ ಜೋಡಿಸಿ ಅಕ್ರಮ ಚಟುವಟಿಕೆ, ಬೇಟೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬುಡಕ್ಕೆ ತಾವೇ ಬೆಂಕಿ ಹಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಇದೆಲ್ಲವನ್ನೂ ಪ್ರಶ್ನೆ ಮಾಡುವವರ ದನಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಇವೆಲ್ಲದರ ಒಟ್ಟು ಮೊತ್ತವೇ ಇಂದು ಐದು ಹುಲಿಗಳ ಮಾರಣಹೋಮ.
1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆರಂಭಿಸಿದ ಪ್ರಾಜೆಕ್ಟ್ ಟೈಗರ್ ಯೋಜನೆ ನಿರೀಕ್ಷಿತ ಫಲ ನೀಡಿದ್ದು ಸತ್ಯ. ಯೋಜನೆಯಂತೆ ದೇಶಾದ್ಯಂತ 58 ಹುಲಿ ಸಂರಕ್ಷಿತ ಅರಣ್ಯಗಳನ್ನು ಗುರುತು ಮಾಡಿ ಹುಲಿಗಳ ರಕ್ಷಣೆ, ಸಂತಾನಾಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಧ್ಯ ಪ್ರದೇಶ, ತಮಿಳುನಾಡು, ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು (ಐದು) ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳು ಇರುವುದು ಕರ್ನಾಟಕದಲ್ಲಿಯೇ. ಸುಮಾರು 400ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ಹುಲಿಗಳಿಗೆ ಸೂಕ್ತ ಸಂರಕ್ಷಣೆ ಇಲ್ಲವೇ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಅಕ್ರಮಗಳಿಗೆ ಕಡಿವಾಣ ಬಿದ್ದೇ ಇಲ್ಲ..
ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಮಲೆ ಮಹದೇಶ್ವರ ವನ್ಯಜೀವಿಧಾಮ ವೀರಪ್ಪನ್ ಕಾಲದಿಂದಲೂ ಅತಿ ಹೆಚ್ಚಿನ ಶೋಷಣೆಗೆ ತುತ್ತಾದ ಪ್ರದೇಶ. ಇಲ್ಲಿನ ಅರಣ್ಯ ಸಂಪತ್ತು ಗಣನೆಗೆ ನಿಲುಕದಷ್ಟು ಲೂಟಿಯಾಗಿದೆ. ಕಾಡು ಪ್ರಾಣಿಗಳ ಬೇಟೆ ಕಾವೇರಿ ಹರಿದಷ್ಟೇ ಸಹಜವಾಗಿ ನಡೆದಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಿಗಿ ಕ್ರಮಗಳನ್ನು ಕೈಗೊಂಡಿದ್ದರೂ, ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದೇ ಇಲ್ಲ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲು ಶಿಫಾರಸ್ಸು ಮಾಡಿದ್ದರೂ ಸರ್ಕಾರ ಇದಕ್ಕೆ ಮನ್ನಣೆ ಕೊಡಲೇ ಇಲ್ಲ. ಇದೂ ಕೂಡ ಈಗ ನಡೆದಿರುವ ಹುಲಿಗಳ ಹತ್ಯೆಗೆ ಪ್ರಮುಖ ಕಾರಣ ಎಂದು ವನ್ಯ ಜೀವಿ ತಜ್ಱ ಜೋಸೆಫ್ ಹೂವರ್ ಅವರು ದ ಫೆಡರಲ್ ಕರ್ನಾಟಕದೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಎಸ್ಪಿ ಬರೆದ ಪತ್ರಕ್ಕೆ ಇನ್ನಾದರೂ ಸಿಗುವುದೇ ಮನ್ನಣೆ..?
ಜೂನ್ ತಿಂಗಳ 10ನೇ ತಾರೀಖು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಅವರು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಪತ್ರದಲ್ಲಿ ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯ ಪಾಲಾರ್ ಚೆಕ್ ಪೋಸ್ಟ್ ಬಳಿ 15-15 ಅಳತೆಯ ಪೊಲೀಸ್ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಕೋರಿರುತ್ತಾರೆ. ಈ ಕೋರಿಕೆಗೆ ಅವರು ಕೊಟ್ಟ ಕಾರಣ ಇಂತಿವೆ.
ಪಾಲಾರ್ ಚೆಕ್ ಪೋಸ್ಟ್ ತಮಿಳುನಾಡಿನ ಸೇಲಂ, ಕೃಷ್ಣಗಿರಿ, ಧರ್ಮಪುರಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ನಿತ್ಯವೂ ಹಾದುಹೋಗುವ ವಾಹನಗಳು, ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಪಾಲಾರ್ ಪಕ್ಕದ ತಮಿಳುನಾಡಿಗೆ ಸೇರಿದ ಗೋವಿಂದಪಾಡಿ, ಶೆಟ್ಟಿಪಟ್ಟಿ, ಕರಂಗಲೂರು, ಕಾರೆಕಾಡು, ಕತ್ತರಿಮಲೈ ಸೇರಿ ಇನ್ನಿತರ ಗ್ರಾಮಗಳಲ್ಲಿ ಕಳ್ಳ ಬೇಟೆಗಾರರಿದ್ದು, ಇವರ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎನ್ನುವ ಅಂಶವನ್ನು ಉಲ್ಲೇಖ ಮಾಡಿರುತ್ತಾರೆ.
ಅಂದರೆ ಇಲ್ಲಿ ಬೇಟೆಗಾರಿಕೆ, ಅಕ್ರಮವಾಗಿ ಅರಣ್ಯ ಸಂಪತ್ತಿನ ನಿರಂತರ ಲೂಟಿ ನಡೆಯುತ್ತಿತ್ತೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಲ್ಲದೇ ಈ ಗಡಿ ಅಂಚಿನ ಸೀಮೆಯಲ್ಲಿ ತಮಿಳಿಗರ ಚಲನವಲನಗಳೇ ಹೆಚ್ಚು. ಅವರೇ ಹೆಚ್ಚಾಗಿ ದನಕರುಗಳನ್ನು ಮೇಯಿಸುವುದು ಎನ್ನುವ ಮಾತೂ ಇದೆ.
ಯಾರ ಮೇಲೆ ಅನುಮಾನ..?
ಈಗ ಐದು ಹುಲಿಗಳು ಸತ್ತಿರುವ ಸಮೀಪದಲ್ಲಿಯೇ ಹಸುವಿನ ಕಳೇಬರ ಸಿಕ್ಕಿದ್ದು, ಹಸುವಿನ ಮೂಲಕ ಹುಲಿಗಳಿಗೆ ವಿಷ ಪ್ರಾಷನ ಮಾಡಿಸಿರುವ ಶಂಕೆ ಮೂಡಿದೆ. ತಮ್ಮ ಜಾನುವಾರುಗಳನ್ನು ಕೊಂದು ತಿನ್ನುತ್ತಿದ್ದ ಹುಲಿಗಳ ನಾಶಕ್ಕೆ ಈ ರೀತಿಯ ಹೀಯಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನುವ ಅನುಮಾನವೂ ಎದ್ದಿದೆ.
ಈ ನಿಟ್ಟಿನಲ್ಲಿ ವನ್ಯಜೀವಿ ಹೋರಾಟಗಾರ ಹೂವರ್ ಆರೋಪ ಮಾಡಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಿ ಹುಲಿಗಳ ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಸತ್ಯಕ್ಕೆ ಹತ್ತಿರವಾದಂತೆ ಕಾಣುತ್ತಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಐಎಫ್ಎಸ್ ಅಧಿಕಾರಿ ಸಿಸಿಎಫ್ ಹೀರಾಲಾಲ್ ಅವರು, ಮೇಲ್ನೋಟಕ್ಕೆ ಹುಲಿಗಳು ವಿಷ ಪ್ರಾಷನದಿಂದ ಸತ್ತಿವೆ ಎನ್ನಿಸುತ್ತಿದೆ. ಹುಲಿಗಳು ತಮ್ಮ ದನಗಳನ್ನು ತಿನ್ನುತ್ತಿವೆ ಎನ್ನುವ ಕಾರಣಕ್ಕೆ ದನಗಾಹಿಗಳು ಈ ರೀತಿ ಮಾಡಿರಬಹುದು. ಈ ಹಿಂದೆ ಹುಲಿ ಉಗುರು, ಚರ್ಮ, ಹಲ್ಲುಗಳಿಗಾಗಿ ಬೇಟೆ ನಡೆಯುತ್ತಿತ್ತು. ಆದರೆ ಈಗ ಕಾನೂನು ಬಿಗಿಯಾಗಿರುವುದರಿಂದ ಈ ಕಾರಣಕ್ಕಾಗಿ ಹುಲಿಗಳ ಹತ್ಯೆ ಆಗಿರುವುದಿಲ್ಲ. ಇದು ಹುಲಿಗಳ ಮೇಲಿನ ಭಯ, ಅವುಗಳ ಕಾಟ ತಪ್ಪಿಸಿಕೊಳ್ಳುವ ಕಾರಣಕ್ಕೆ ಆಗಿರಬಹುದು ಎಂದು ಅಭಿಪ್ರಾಯಪಡುತ್ತಾರೆ.
ಈ ಬಗ್ಗೆ ವನ್ಯಜೀವಿ ತಜ್ಱ ಸಂಜಯ್ ಗುಬ್ಬಿ ಅವರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, ಇದೊಂದು ಅಮಾನವೀಯ ಮತ್ತು ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ. ಈಗಾಗಲೇ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಿ 14 ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶ ಮಾಡಿ ಪಿಸಿಸಿಎಫ್ ರವಿ ಅವರ ನೇತೃತ್ವದಲ್ಲಿ ಹೈ ಪವರ್ ಕಮಿಟಿ ರಚನೆ ಮಾಡಿದೆ. ಅದರಲ್ಲಿ ನಾನೂ ಸೇರಿ ಎಪಿಸಿಸಿಎಫ್ ಶ್ರೀನಿವಾಸಲು, ಚಾ.ನಗರ ಸಿಸಿಎಫ್ ಹೀರಾಲಾಲ್, ಎನ್ಟಿಸಿಎ ಪ್ರತಿನಿಧಿ, ಮೈಸೂರು ಮೃಗಾಲಯದ ವೈದ್ಯಾಧಿಕಾರಿ ಇದ್ದಾರೆ. ಈ ಹಂತದಲ್ಲಿ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ತಿಳಿಸಿದರು.
ಐದು ಹುಲಿಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಈಗಾಗಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆದೇಶ ಮಾಡಿದ್ದಾರೆ. ಅದರಂತೆ ತಕ್ಷಣ ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿ, ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ತಡೆ ನೀಡಬೇಕು. ನಮ್ಮ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬದ್ಧತೆ ಪ್ರದರ್ಶನ ಮಾಡಬೇಕು ಎನ್ನುವ ಒತ್ತಾಯವನ್ನೂ ಇಲ್ಲಿನ ಸ್ಥಳೀಯರು ಮಾಡುತ್ತಿದ್ದಾರೆ.