ಸೆಪ್ಟೆಂಬರ್‌ನಲ್ಲಿ ʼರಾಜಕೀಯ ಕ್ಷಿಪ್ರಕ್ರಾಂತಿʼ ; ಸಚಿವ ಕೆ.ಎನ್.ರಾಜಣ್ಣ ಭವಿಷ್ಯ

2013 ರಿಂದ 2018 ರವರೆಗೆ ಒಂದೇ ಶಕ್ತಿಕೇಂದ್ರವಿತ್ತು. ಅದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಒತ್ತಡವಿರಲಿಲ್ಲ. ಈಗ ಶಕ್ತಿ ಕೇಂದ್ರಗಳು ಹೆಚ್ಚಾಗಿವೆ. ಸೆಪ್ಟೆಂಬರ್‌ನಲ್ಲಿ ಕೆಲ ಬದಲಾವಣೆ ಆಗಲಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದ್ದಾರೆ.;

Update: 2025-06-26 10:35 GMT

ಸಹಕಾರ ಸಚಿವ ಕೆ.ಎನ್‌. ರಾಜಣ್ಣ

ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ತಿಂಗಳ 'ಕ್ಷಿಪ್ರ ಕ್ರಾಂತಿʼಯ ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಬಿಜೆಪಿ ನಾಯಕರು ನುಡಿದ ʼಸೆಪ್ಟೆಂಬರ್‌ ತಿಂಗಳ ರಾಜಕೀಯ ಬೆಳವಣಿಗೆʼ ಕುರಿತ ಭವಿಷ್ಯವಾಣಿ ಈಗ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲೂ ಸಂಚಲನ ಮೂಡಿಸಿದೆ. 

ಸೆಪ್ಟೆಂಬರ್‌ ತಿಂಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದು ಎರಡೂವರೆ ವರ್ಷ ಪೂರ್ಣವಾಗಲಿದೆ. ಕಾಂಗ್ರೆಸ್‌ ಪಕ್ಷದ ಆಂತರಿಕ ಒಪ್ಪಂದದಂತೆ ಸಿಎಂ ಸ್ಥಾನ ಬದಲಾವಣೆ ಆಗಬೇಕೆಂಬ ಮಾತುಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ತಿಂಗಳು ಮಹತ್ವ ಪಡೆದಿದೆ. ಈ ಮಧ್ಯೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕೂಡ ರಾಜಕೀಯ ಕ್ಷಿಪ್ರಕ್ರಾಂತಿ ಖಚಿತ ಎಂದು ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ. 

ಕೆ.ಎನ್‌. ರಾಜಣ್ಣ ಹೇಳಿದ್ದೇನು?

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎನ್‌.ರಾಜಣ್ಣ ಅವರು, ರಾಜ್ಯದಲ್ಲಿ ರಾಜಕೀಯ ಶಕ್ತಿ ಕೇಂದ್ರಗಳು ಲೆಕ್ಕಕ್ಕಿಲ್ಲದಷ್ಟು ಹೆಚ್ಚಾಗಿವೆ. 2013 ರಿಂದ 2018 ರವರೆಗೆ ಒಂದೇ ಶಕ್ತಿ ಕೇಂದ್ರವಿತ್ತು. ಅದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಇದೀಗ ಶಕ್ತಿ ಕೇಂದ್ರಗಳು ಹೆಚ್ಚಾಗಿ, ಜಂಜಾಟ ಜಾಸ್ತಿಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗುವುದು ನಿಶ್ಚಿತ ಎಂದು ಹೇಳಿದ್ದಾರೆ. 

ಸಚಿವ ಕೆ.ಎನ್‌. ರಾಜಣ್ಣ ಅವರ ಈ ಹೇಳಿಕೆ ನಾನಾ ಅರ್ಥ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಪೂರೈಸಲಿದ್ದು, ಸಿಎಂ ಕುರ್ಚಿಯಿಂದ ಇಳಿಯುತ್ತಾರೋ ಅಥವಾ ಇಲ್ಲವೋ ಎಂಬ ಚರ್ಚೆ ಒಂದೆಡೆಯಾದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಆಗುತ್ತಾರಾ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದರ ಸಂಕೇತವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.  

ಅನುದಾನ ಹಂಚಿಕೆಯಲ್ಲಿ ತಾರತಮ್ಯವಿಲ್ಲ 

ಸಿಎಂ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಸರ್ಕಾರದ ಬಳಿ ಹಣಕಾಸಿನ ಸಮಸ್ಯೆ ಇದ್ದಿದ್ದರೆ ಅಭಿವೃದ್ಧಿ ಮಾಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿರುವ ಅವರು,  ಬೇಡಿಕೆಗೆ ತಕ್ಕಂತೆ ಅನುದಾನ ದೊರೆತಿಲ್ಲ ಎಂಬ ಕಾರಣದಿಂದ ಕೆಲ ಶಾಸಕರಿಗೆ ಅಸಮಾಧಾನ ಆಗಿರಬಹುದು. ಆದರೆ, ಯಾವುದೇ ರೀತಿಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಇಲ್ಲ ಎಂದು ಕೆ.ಎನ್‌. ರಾಜಣ್ಣ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಹೊರೆ

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ.  ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಅನುದಾನ ನೀಡಲಾಗುತ್ತಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎಂಬ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದು ಸಚಿವ ರಾಜಣ್ಣ ತಿಳಿಸಿದ್ದಾರೆ. 

ಶಾಸಕ ಬಿ.ಆರ್. ಪಾಟೀಲ್‌ಗೆ ಕೆಲ ಸಚಿವರ ಮೇಲೆ ಅಸಮಾಧಾನವಿದ್ದರೆ ಮುಖ್ಯಮಂತ್ರಿಗಳ ಬಳಿ ಅವರ ಹೆಸರನ್ನು ಬಹಿರಂಗಪಡಿಸಲಿ. ಮನುಷ್ಯನಲ್ಲಿ ಕೆಲವು ಲೋಪಗಳಿರುತ್ತವೆ. ಅವುಗಳನ್ನ ತಿಳಿಸಿದರೆ ತಿದ್ದಿಕೊಳ್ಳೊಲು ಅವಕಾಶ ಇರುತ್ತದೆ. ಇಲ್ಲದಿದ್ದರೆ ಶಾಸಕರು ಹಾಗೂ ಸಚಿವರು ಎಲ್ಲವೂ ಸರಿ ಇದೆ ಎಂದು ಸುಮ್ಮನೆ ಇರುತ್ತಾರೆ ಎಂದು ಹೇಳಿದ್ದಾರೆ. 

ವಸತಿ ಸಚಿವ ಆಪ್ತ ಸಹಾಯಕ ಸರ್ಫರಾಜ್‌ ಖಾನ್‌ ಹಾಗೂ ಶಾಸಕ ಬಿ.ಆರ್. ಪಾಟೀಲ್ ನಡುವೆ ಮಾತನಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಅವರು ಹೇಳಿರುವುದು ಸುಳ್ಳು ಎಂದು ಹೇಳುವುದಿಲ್ಲ. ಅವರ ಅನುಭವದ ಆಧಾರದ ಮೇಲೆ ಅವರ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

Tags:    

Similar News