ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮಾಲೀಕರ ಮುಷ್ಕರ ವಾಪಸ್
ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನುವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ.;
ಸರ್ಕಾರದ ನೀತಿಗಳನ್ನು ವಿರೋಧಿಸಿ ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಲಾರಿ ಮುಷ್ಕರವನ್ನು ಇದೀಗ ಹಿಂದಕ್ಕೆ ಪಡೆಯಲಾಗಿದೆ.
ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನುವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಷ್ಕರ ಈ ಸಮಯದಿಂದಲೇ ವಾಪಸ್ ಪಡೆಯುತ್ತೇನೆ. ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ. 20 ವರ್ಷಗಳಲ್ಲಿ ಈಡೇರದ ಬೇಡಿಕೆ ಸಚಿವ ರಾಮಲಿಂಗಾ ರೆಡ್ಡಿ ಈಡೇರಿಸಿದ್ದಾರೆ. ಲಾರಿ ಮುಷ್ಕರದಿಂದ ಆದ ತೊಂದರೆಗೆ ಜನರಲ್ಲಿ ವಿಷಾದ ವ್ಯಕ್ತಪಡಿಸಿದ್ದೇನೆ. ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಒಂದು ದಿನದ ಲಾರಿ ಮುಷ್ಕರದಿಂದ 4500 ಕೋಟಿ ರೂಪಾಯಿ ನಷ್ಟವಾಗಿದೆ ಅವರು ತಿಳಿಸಿದರು.
ಈ ಬಗ್ಗೆ ಮಾತನಾಡಿರುವ ಸಚಿವ ರಾಮಲಿಂಗ ರೆಡ್ಡಿ, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಲಾರಿ ಮಾಲೀಕರ ಸಂಘದವರು ಪ್ರಮುಖವಾಗಿ 6 ಬೇಡಿಕೆ ಇಟ್ಟಿದ್ದರು. ಗಡಿ ಭಾಗದಲ್ಲಿ ಟೋಲ್ ತೆಗೆಯಲು ಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಮೂರು ದಿನಗಳ ಬಳಿಕ ವರದಿ ತರಸಿಕೊಳ್ಳುತ್ತೇನೆ. ನೋ ಎಂಟ್ರಿ ಬೋರ್ಡ್ ಬದಲಾವಣೆ ಕುರಿತು ಚರ್ಚೆ ಮಾಡುತ್ತೇನೆ. ಲಾರಿ ಮಾಲೀಕರಿಗೆ ವಿಧಿಸುವ ದಂಡ ಕಡಿತ ಮಾಡುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.