ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣ | ಎಚ್‌ ಡಿ ರೇವಣ್ಣ ಸೇರಿ 9 ಆರೋಪಿಗಳಿಗೆ ಸಮನ್ಸ್‌ ಜಾರಿ

Update: 2024-08-22 10:20 GMT

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ ಡಿ ರೇವಣ್ಣ ಸೇರಿ ಒಂಬತ್ತು ಆರೋಪಿಗಳಿಗೆ ಸಮನ್ಸ್​ ಜಾರಿ ಮಾಡಲಾಗಿದೆ.

ಮೈಸೂರು ಜಿಲ್ಲೆಯ ಕೆಆರ್​ ನಗರದ ಮಹಿಳೆಯ ಅಪಹರಣ ಪ್ರಕರಣದ ಆರೋಪಿಗಳಾದ ಸತೀಶ್ ಬಾಬು, ಮನುಗೌಡ, ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು, ಎಸ್.ಟಿ.ಕೀರ್ತಿ ಮತ್ತು ಅಜಿತ್ ಕುಮಾರ್‌ಗೆ ಐಪಿಸಿ ಸೆಕ್ಷನ್​ 364 A ಕೈಬಿಟ್ಟು ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ. ಎಲ್ಲಾ ಒಂಬತ್ತು ಆರೋಪಿಗಳು ಆ. 28 ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್​ ಜಾರಿ ಮಾಡಿದೆ.

ಭವಾನಿ ರೇವಣ್ಣ ಜಾಮೀನು ರದ್ದು ಸಾಧ್ಯತೆ

ಆರೋಪಿ ಭವಾನಿ ರೇವಣ್ಣಗೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಎಸ್‌ಐಟಿ ಅಧಿಕಾರಿಗಳು, ಸುಪ್ರೀಂಕೋರ್ಟ್‌ಗೆ ಇತ್ತೀಚೆಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಭವಾನಿ ರೇವಣ್ಣಾಗೆ ನೊಟೀಸ್ ಜಾರಿ ಮಾಡಿತ್ತು. ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.

ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಪ್ರಶ್ನಿಸಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ವಿಚಾರಣೆ ಎದುರಿಸಬೇಕು ಎಂದು ಹೇಳಿತ್ತು. ಮಗನ ಮೇಲೆ ಗಂಭೀರವಾದ ಆರೋಪಗಳಿವೆ, ಮಗ ಮಾಡಿದ ತಪ್ಪಿಗೆ ತಾಯಿಯ ಪಾತ್ರವೇನು ಎಂದು ಎಸ್ಐಟಿ ಪರ ವಕೀಲ ಕಪಿಲ್‌ ಸಿಬಲ್‌ ಅವರನ್ನು ನ್ಯಾಯಪೀಠ ಪ್ರಶ್ನೆ ಮಾಡಿತ್ತು.

ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಕಪಿಲ್‌ ಸಿಬಲ್‌, ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಭವಾನಿ ಮೇಲಿದೆ ಎಂದು ವಾದಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಆಕೆ ಆರೋಪದಿಂದ ಮುಕ್ತ ಎನ್ನುವಂತಿಲ್ಲ. ವಿಚಾರಣೆ ಎದುರಿಸಬೇಕು ಎಂದಿದ್ದರು. ಆ ಹಿನ್ನೆಲೆಯಲ್ಲಿ ಕೋರ್ಟ್, ಭವಾನಿಗೆ ನೋಟಿಸ್ ಜಾರಿ ಮಾಡಿದೆ.

ಇನ್ನು ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣರ ಕಾರು ಚಾಲಕ ಅಜಿತ್‌ನನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ವಿರುದ್ಧ ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪವಿದೆ. ಭವಾನಿ ಸೂಚನೆ ಮೇರೆಗೆ ಮನೆಯಿಂದ ಕಾರಿನಲ್ಲಿ ಸಂತ್ರಸ್ತೆಯನ್ನು ಕರೆದೊಯ್ದ ಆರೋಪ ಕೂಡ ಇದೆ.

Tags:    

Similar News