ಆರ್ಡಿಕ್ಸ್ ಬಳಸುವವರು ಯಾವ ಶಾಂತಿ ಧರ್ಮಕ್ಕೆ ಸೇರಿದವರು; ಸಿಎಂಗೆ ಸಿ.ಟಿ. ರವಿ ಪ್ರಶ್ನೆ
ದೇಶದ ಉದ್ದಗಲಕ್ಕೂ ಆರ್ಡಿಎಕ್ಸ್ ಪತ್ತೆಯಾಗಿದೆ. ಯಾವ ಶಾಂತಿದೂತರು ಅದನ್ನು ಕಳಿಸಿಕೊಟ್ಟರು? ಮುಖ್ಯಮಂತ್ರಿಗಳು ಬೇಹುಗಾರಿಕಾ ದಳದಿಂದ ಈ ಕುರಿತು ವರದಿ ತರಿಸಿಕೊಳ್ಳಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ
ಆರ್ಡಿಎಕ್ಸ್ ಸ್ಫೋಟಕ ಬಳಸುವವರು ಮತ್ತು ಅದನ್ನು ಸಂಗ್ರಹಿಸುವವರು ಯಾರು? ಅವರು ಯಾವ ಶಾಂತಿ ಧರ್ಮಕ್ಕೆ ಸೇರಿದವರೆಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ(ನ.11) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಇಸ್ಲಾಂ ಎಂದರೆ ಶಾಂತಿ ಎಂದಿದ್ದರು. ಅದನ್ನು ಒಪ್ಪಿಕೊಳ್ಳೋಣ. ಡಾ. ಅಹ್ಮದ್ ಮೊಹಿಯುದ್ದೀನ್ ಸಯೀದ್ ಪ್ರಾಣ ಉಳಿಸುವ ವೈದ್ಯನಲ್ಲ. ಸಾಮೂಹಿಕ ನರಮೇಧಕ್ಕೆ ತಯಾರಿ ನಡೆಸುತ್ತಿದ್ದ ವ್ಯಕ್ತಿ. ಇನ್ನೊಬ್ಬ ಸಯ್ಯದ್ ಮೊಹಮ್ಮದ್ ಸುಹೇಲ್ ಮತ್ತು ಆಜಾದ್ ಯಾವ ಶಾಂತಿ ಧರ್ಮಕ್ಕೆ ಸೇರಿದವರು ಎಂದು ಪ್ರಶ್ನಿಸಿದರು.
ದೇಶದ ಉದ್ದಗಲಕ್ಕೂ ಆರ್ಡಿಎಕ್ಸ್ ಪತ್ತೆಯಾಗಿದೆ. ಯಾವ ಶಾಂತಿದೂತರು ಅದನ್ನು ಕಳಿಸಿಕೊಟ್ಟರು? ಮುಖ್ಯಮಂತ್ರಿಗಳು ಬೇಹುಗಾರಿಕಾ ದಳದಿಂದ ಈ ಕುರಿತು ವರದಿ ತರಿಸಿಕೊಳ್ಳಲಿ. ಇನ್ನೊಬ್ಬ ಭಯೋತ್ಪಾದಕನಿಗೆ ಇಲ್ಲಿನ ಜೈಲಿನಲ್ಲಿ ಮೊಬೈಲ್ ಕೊಟ್ಟಿದ್ದೀರಲ್ಲವೇ? ಅವನ್ಯಾವ ಶಾಂತಿದೂತ? ದೇಶದ ಉದ್ದಗಲಕ್ಕೆ ಬಾಂಬ್ ಸ್ಫೋಟ ನಡೆಸಲು ನೆರವಾಗಲೆಂದು ಕರ್ನಾಟಕದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಕೊಟ್ಟಿದ್ದೀರಾ ? ಬಾಂಬ್ ಸ್ಫೋಟಕ್ಕೆ ನಿರ್ದೇಶನ ನೀಡಲೆಂದು ಮೊಬೈಲ್ ಕೊಡಲಾಯಿತೇ ಎಂದರು.
ಭಯೋತ್ಪಾದಕರಿಗೆ ಮೊಬೈಲ್ ಕೊಡುವ ಅಯೋಗ್ಯರನ್ನು ಅಸಮರ್ಥರು ಎನ್ನುತ್ತಾರೆ. ಅವರ ನೇತೃತ್ವ ವಹಿಸಿದ ಸರ್ಕಾರವನ್ನು ಅಸಮರ್ಥರು ಎನ್ನುತ್ತಾರೆ. ಬಿರಿಯಾನಿ ಕೊಡುವುದು, ಯಾಸಿನ್ ಮಲಿಕ್ ಜೀ ಎನ್ನುವುದು ಹಾಗೇಯೆ ಪ್ರಧಾನಿ ಕಚೇರಿಗೆ ಕರೆದು ಚಹಾ ಕೊಟ್ಟು ಆಲಂಗಿಸಿಕೊಳ್ಳುವುದು ಅಸಮರ್ಥತೆ. ಸರ್ಜಿಕಲ್ ದಾಳಿ, ಆಪರೇಷನ್ ಸಿಂದೂರದ ಮೂಲಕ ಉತ್ತರ ಕೊಡುವವರು ಅಸಮರ್ಥರಲ್ಲ ಎಂದು ತಿಳಿಸಿದರು.
ಕೇಂದ್ರದಿಂದ ಭಯೋತ್ಪಾದನೆ ಕಿತ್ತು ಹಾಕಲು ಯತ್ನ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸವಿದೆ. ಬೇರೆಯವರಂತೆ ಭಯೋತ್ಪಾದಕರ ಜೊತೆ ಸೇರಿ ಲಾಭ - ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವ ಸರ್ವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸಂಸತ್ ಭವನದ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಪರ ವಕಾಲತ್ತು ವಹಿಸಿದ ವಕೀಲರ ಪಟ್ಟಿ ಕೊಡಲೇ? ನಿಮ್ಮ ಯಾವ್ಯಾವ ಕಾಂಗ್ರೆಸ್ ನಾಯಕರು ಅವನ ಪರ ಮಾತನಾಡಿದ್ದಾರೆಂದು ಜನರ ಮುಂದಿಡಬೇಕೆ ಎಂದು ಪ್ರಶ್ನಿಸಿದರು.
ನರಮೇಧಕ್ಕೆ ಯೋಜನೆ ರೂಪಿಸಿದ್ದ ಉಗ್ರರು
ಇತ್ತೀಚೆಗೆ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಎನ್ಐಎ, ಎಟಿಎಸ್ ಹಲವು ಭಯೋತ್ಪಾದಕರನ್ನು ಬಂಧಿಸಿದ್ದವು. ಅವರು ಇಡೀ ದೇಶದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸಂಚು ನಡೆಸಿದ್ದು, ಅಪಾಯಕಾರಿ ರಿಸಿನ್ನಂಥ ವಿಷವನ್ನು ತಯಾರಿಸಿ ಸಾಮೂಹಿಕ ನರಮೇಧಕ್ಕೆ ಯೋಜನೆ ರೂಪಿಸಿದ್ದನ್ನು ಎನ್ಐಎ, ಎಟಿಎಸ್ ಮತ್ತು ಪೊಲೀಸ್ ಇಲಾಖೆ ವಿಫಲಗೊಳಿಸಿದೆ ಎಂದರು.