ಮಾದಕ ವಸ್ತುಗಳ ಸ್ವರ್ಗ ಕರ್ನಾಟಕ: ಎನ್. ರವಿಕುಮಾರ್ ಆರೋಪ
ಈಶಾನ್ಯ ಭಾಗದ ರಾಜ್ಯಗಳು ಹಾಗೂ ಪಂಜಾಬ್ನಲ್ಲಿ ಯುವಕರ ಜೀವನವನ್ನು ಡ್ರಗ್ಸ್ ಹಾಳು ಮಾಡುತ್ತಿದೆ. ಇತ್ತೀಚೆಗೆ ಆ ರಾಜ್ಯಗಳ ಪಟ್ಟಿಗೆ ಕರ್ನಾಟಕ ಸೇರುತ್ತಿರುವುದು ದುರಾದೃಷ್ಟ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.;
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್
ಕಲಬುರ್ಗಿ, ಬೆಂಗಳೂರು, ಮಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿದ್ದು, ಕರ್ನಾಟಕವು ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದ್ದಾರೆ.
ಮಂಗಳವಾರ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಾನ್ಯ ಭಾಗದ ರಾಜ್ಯಗಳು ಹಾಗೂ ಪಂಜಾಬ್ನಲ್ಲಿ ಯುವಕರ ಜೀವನವನ್ನು ಡ್ರಗ್ಸ್ ಹಾಳು ಮಾಡುತ್ತಿದೆ. ಇತ್ತೀಚೆಗೆ ಆ ರಾಜ್ಯಗಳ ಪಟ್ಟಿಗೆ ಕರ್ನಾಟಕ ಸೇರಿರುವುದು ದುರಾದೃಷ್ಟ ಎಂದು ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲರಿಗೆ ಆತ್ಮೀಯನಾಗಿದ್ದ ಕಾಂಗ್ರೆಸ್ ಪಕ್ಷದ ಕಲಬುರಗಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಲಿಂಗರಾಜ್ ಕಣ್ಣಿಯ ಬಂಧನವಾಗಿದೆ. ಅನೇಕ ವರ್ಷಗಳಿಂದ ಈತ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದ. ಕಾಂಗ್ರೆಸ್ ಕಾರ್ಯಕರ್ತ ಮಲ್ಲಿನಾಥ್ ಸೊಂತ್ ಎಂಬುವರ ಮಗನೂ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು ಆತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪ್ತನಾಗಿದ್ದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಕಲಬುರ್ಗಿಯಲ್ಲಿ ಪೊಲೀಸರ ರಕ್ಷಣೆ ಮತ್ತು ಕಣ್ಗಾವಲಿನಲ್ಲಿ ಡ್ರಗ್ಸ್ ಅವ್ಯವಹಾರ ನಡೆದಿದೆಯೇ? ಇದರ ಕುರಿತು ಗೃಹ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊರಬೇಕು. ಕಲಬುರ್ಗಿ ಜಿಲ್ಲೆ 50 ವರ್ಷಗಳಿಂದ ಖರ್ಗೆಯವರ ಕುಟುಂಬದ ಕೈಯಲ್ಲೇ ಇದೆ. ಡ್ರಗ್ಸ್ ಶೂನ್ಯ ಪ್ರಮಾಣದಲ್ಲಿ ಇರಬೇಕಿತ್ತು. ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಡ್ರಗ್ಸ್ ಆರೋಪಿಗೆ ಸಚಿವರಿಂದ ರಕ್ಷಣೆ
ಕಲಬುರಗಿಯಲ್ಲಿ ಮೂರು ತಿಂಗಳ ಹಿಂದೆ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಆಗಲೂ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ಲಿಂಗರಾಜ್ ಕಣ್ಣಿ ಬಂಧನಕ್ಕೂ ಮೊದಲು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಕಮೀಷನರ್ ಡ್ರಗ್ಸ್ ವಿರುದ್ಧ ಅಭಿಯಾನ ಮಾಡುವುದಾಗಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು. ಇದೀಗ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲರು ರಕ್ಷಿಸಿದ ಕಾರಣ ಇವರನ್ನು ಕರ್ನಾಟಕದ ಪೊಲೀಸರು ಬಂಧಿಸಿರಲಿಲ್ಲ ಎಂಬ ಸಂಶಯ ಮೂಡಿದೆ ಎಂದು ತಿಳಿಸಿದ್ದಾರೆ.
ಕೈಗಾರಿಕೆಗಳ ಸ್ಥಳಾಂತರ ಯಾಕೆ ?
ರಾಜ್ಯದಲ್ಲಿನ ಟೊಯೊಟೊ ಎಲೆಕ್ಟ್ರಿಕಲ್ ಕಾರ್ ಉತ್ಪಾದಿಸುವ 25 ಸಾವಿರ ಕೋಟಿ ಹೂಡಿಕೆಯ ಕೈಗಾರಿಕೆ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಗಿದೆ. ಇದರಿಂದ 30 ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಇನ್ಫೋಸಿಸ್ ಸಂಸ್ಥೆಯ ಹೊಸ ಶಾಖೆ ಹೈದರಾಬಾದ್ಗೆ, ಆಪಲ್ನ ಫಾಕ್ಸ್ಕಾನ್ ಬ್ರ್ಯಾಂಡ್ ತಮಿಳುನಾಡಿಗೆ ಸ್ಥಳಾಂತರವಾಗಿದ್ದು ಯಾಕೆ?, ಇವು ಅತ್ಯಂತ ದಕ್ಷರು, ಸಮರ್ಥರು ಇರುವ ಕರ್ನಾಟಕದಲ್ಲೇ ಇರಬೇಕಿತ್ತು ಅಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಕುಂಟು ನೆಪ ಸರಿಯಲ್ಲ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ದೇಶದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಆರು ದಶಕಗಳಿಂದ ಆಗದೇ ಇರುವ ಕೆಲಸವನ್ನು ಸಚಿವ ನಿತಿನ್ ಗಡ್ಕರಿ ಮಾಡಿದ್ದಾರೆ. ರಾಜ್ಯದ ಸಿಗಂಧೂರು ಸೇತುವೆಗೆ ಅವರೇ ಶಿಲಾನ್ಯಾಸ ಮಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ದಿನಕ್ಕೆ 8 ಕಿ.ಮೀ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಇದೀಗ ಅದು 34 ಕಿ.ಮೀಗೆ ಏರಿದೆ. ಶಿಷ್ಟಾಚಾರದ ಕುಂಟು ನೆಪ ಹೇಳಿ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದು ಸಿಎಂ, ಡಿಸಿಎಂಗೆ ಶೋಭೆ ತರುವುದಿಲ್ಲ. ಇದೊಂದು ಕುಂಟುನೆಪ ಅಷ್ಟೇ ಎಂದು ಟೀಕಿಸಿದ್ದಾರೆ.