ಮಾವು ಬೆಳೆಗೆ ಬೆಂಬಲ ಬೆಲೆ: ಕುಮಾರಸ್ವಾಮಿ-ಬಿಜೆಪಿ ಆಟ; ಕಾಂಗ್ರೆಸ್‌ಗೆ ಪೀಕಲಾಟ

ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಬಗ್ಗೆ ಎರಡು ದಿನ ಮೊದಲೇ ಕೇಂದ್ರದೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡಲಾಗಿತ್ತು. ಆದರೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪತ್ರ ಬರೆದ ಬೆನ್ನಲ್ಲೇ ಘೋಷಣೆಯಾಗಿರುವುದು ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.;

Update: 2025-06-24 15:19 GMT

ಬೆಲೆ ಕುಸಿತದಿಂದ ತೀವ್ರ ಕಂಗಾಲಾಗಿರುವ ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಇದರ ಬೆನ್ನಲ್ಲೇ ರಾಜಕೀಯ ಮೇಲಾಟ ನಡೆದಿದೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾವಿಗೆ ಬೆಂಬಲ ಬೆಲೆ ಘೋಷಿಸುವಂತೆ ಮನವಿ ಮಾಡಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ಗೆ ಪತ್ರ ಬರೆದ ಕೆಲವೇ ಗಂಟೆಯಲ್ಲಿ ಪ್ರತಿ ಉತ್ತರ ನೀಡಿದ್ದಾರೆ. ಇದರಿಂದ ದು ಕುಮಾರಸ್ವಾಮಿ ಅವರ ಪ್ರಯತ್ನದ ಸಂದ ಫಲ ಎಂಬ ಸಂದೇಶವನ್ನು ರಾಜಕೀಯವಾಗಿ ರವಾನಿಸುವ ಪ್ರಯತ್ವವನ್ನು ಕುಮಾರಸ್ವಾಮಿ ನಡೆಸಿದ್ದಾರೆ. 

ಮುಖ್ಯವಾಗಿ ಮಾವು ಬೆಳೆಯುವ ಪ್ರದೇಶಗಳಾದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಲ್ಲಿ ರಾಜಕೀಯವಾಗಿಯೂ ಜನತಾದಳ (ಎಸ್‌) ತನ್ನ ಹಿಡಿತವನ್ನು ಇನ್ನೂ ಇಟ್ಟುಕೊಂಡಿದೆ. ಹಾಗಾಗಿ ಕುಮಾರಸ್ವಾಮಿ ಅವರು ತಮ್ಮ ಪ್ರಯತ್ನದ ಫಲ ಎನ್ನುವುದನ್ನು ಬಿಂಬಿಸಲು ಹೊರಟಿರುವುದು ಕಾಂಗ್ರೆಸ್‌ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚಲುವರಾಯಸ್ವಾಮಿ ಸಭೆ

2025–26 ಸಾಲಿನ ಮಾವು ಬೆಳೆಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ 1,616 ರೂಪಾಯಿಯಂತೆ ಗರಿಷ್ಠ 2.50೦ಲಕ್ಷ  ಮೆಟ್ರಿಕ್ ಟನ್‌ ಮಾವಿಗೆ ಪರಿಹಾರ ಧನ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ವಿಪರ್ಯಾಸವೆಂದರೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪತ್ರ ಬರೆಯುವ ಮುನ್ನವೇ ರಾಜ್ಯ ಸರ್ಕಾರದ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರೊಂದಿಗೆ ಸಭೆ ನಡೆಸಿ ಬೆಂಬಲ ಬೆಲೆ ಘೋಷಿಸುವಂತೆ ಮನವಿ ಮಾಡಿದ್ದರು

ಶನಿವಾರ ಕೇಂದ್ರದೊಂದಿಗೆ ಸಭೆ ನಡೆಸಲಾಗಿದ್ದು, ಸೋಮವಾರ ಬೆಂಬಲ ಬೆಲೆ ಘೋಷಣೆ ಮಾಡುವ ಬಗ್ಗೆ ನಿರೀಕ್ಷೆ ಇತ್ತು. ಆದರೆ, ಮಂಗಳವಾರ ಘೋಷಣೆ ಮಾಡಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಪತ್ರ ಬರೆದ ಬಳಿಕ ಕೈಗೊಂಡಿರುವ ತೀರ್ಮಾನದಲ್ಲಿಯೂ ರಾಜಕೀಯ ನಡೆಸಲಾಗಿದೆ ಎಂದು ಮಾತುಗಳು ಕೇಳಿ ಬಂದಿವೆ. 

ಶನಿವಾರ ಕೇಂದ್ರ ಕೃಷಿ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯದಲ್ಲಿ ಮಾವಿನ‌ ಬೆಲೆ ಕುಸಿತದ ಹಿನ್ನಲೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿ ಕೇಂದ್ರವು ಸಹ ಸಕಾರಾತ್ಮಕ ಸಮ್ಮತಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ಪ್ರತಿ ಕೆ.ಜಿ.ಗೆ ಎರೆಡೆರೆಡು ರೂಪಾಯಿಗಳಂತೆ ಒಟ್ಟು‌ ನಾಲ್ಕು ರೂಪಾಯಿ ವ್ಯತ್ಯಾಸ ಪಾವತಿಸಿ ಮಾರುಕಟ್ಟೆ ಚೈತ್ಯನ್ಯಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿತ್ತು.

2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಸೋಮವಾರ ಈ‌ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ‌ಇತ್ತು. ಅದರಂತೆ ಕೇಂದ್ರವು ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಪತ್ರ ಬರೆದ ನಂತರ ಘೋಷಣೆ ಮಾಡಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಮಾವು ಬೆಳೆಗಾರರ ವಿಷಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯ ಲಾಭ ಪಡೆದುಕೊಳ್ಳುವಲ್ಲಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. 

ಕುಮಾರಸ್ವಾಮಿ ನೆರವು?

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದರು. ಆಗಲೂ ಮಾವಿನ ದರ ಕುಸಿದಿತ್ತು. ಆಗ ಎಚ್‌.ಡಿ.ಕುಮಾರಸ್ವಾಮಿ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ಪರ ಇರುವುದನ್ನು ಸಾಬೀತು ಪಡಿಸಿದ್ದರು. ಈಗಲೂ ಮಾವಿನ ದರಕ್ಕೆ ಬೆಂಬಲ ಬೆಲೆ ಘೋಷಣೆಯಾಗುವಂತೆ ನೋಡಿಕೊಂಡು ರೈತರ ಪರ ಇರುವ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಹ ಪತ್ರ ಬರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್‌ಗೆ ಬರೆದ ಪತ್ರದಲ್ಲಿ ಕರ್ನಾಟಕದ ಗ್ರಾಮೀಣ ಭಾಗದ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರಕಾರ ಮಾರುಕಟ್ಟೆ ಮಧ್ಯೆಪ್ರವೇಶ ಮಾಡಿ, ನಫೆಡ್ ಮತ್ತು ಎನ್‍ಸಿಸಿಎಫ್ ಮೂಲಕ ತಕ್ಷಣ ಮಾವು ಖರೀದಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. 

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ, ಇದನ್ನು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ವಿಶೇಷವಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8-10 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಆದಾಗ್ಯೂ, ಪ್ರತಿಕೂಲ ಹವಾಮಾನ ಮತ್ತು ರೋಗಗಳಿಂದಾಗಿ, ಈ ವರ್ಷ ಮಾವಿನ ಇಳುವರಿ ಶೇಕಡಾ 30 ಕ್ಕಿಂತ ಕಡಿಮೆಯಾಗಿದೆ. ಮಾವು ಬೆಲೆಗಳು ಕ್ವಿಂಟಲ್‌ಗೆ 12 ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿಗೆ ಇಳಿದಿವೆ. ಆದರೆ ಕೃಷಿ ವೆಚ್ಚ ಮಾತ್ರ ಕ್ವಿಂಟಲ್‌ಗೆ 5,466 ರೂಪಾಯಿಗಳಷ್ಟಿವೆ. ಇದು ರೈತರಿಗೆ ಆರ್ಥಿಕವಾಗಿ ಒತ್ತಡವನ್ನುಂಟು ಮಾಡಿದೆ. ಅನೇಕ ಸಣ್ಣ ಮತ್ತು ಅತಿ ಸಣ್ಣ ಮಾವು ಬೆಳೆಗಾರರು ಮೂಲಭೂತ ವೆಚ್ಚಗಳನ್ನು ಸಹ ಭರಿಸಲು ಸಾಧ್ಯವಾಗುತ್ತಿಲ್ಲ.

ಕರ್ನಾಟಕದ ಗಡಿಯಲ್ಲಿರುವ ಚಿತ್ತೂರು ಜಿಲ್ಲೆಗೆ ತೋತಾಪುರಿ ಮಾವಿನ ಹಣ್ಣುಗಳನ್ನು ಪ್ರವೇಶಿಸುವುದನ್ನು ಆಂಧ್ರಪ್ರದೇಶ ನಿಷೇಧಿಸಿರುವುದರಿಂದ ಪೂರೈಕೆ ಸರಪಳಿಯಲ್ಲಿ ಅಡ್ಡಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಮೂಲಕ ಮಾವು ಬೆಳೆಗಾರರಿಗೆ ನೆರವಾಗಬೇಕು. ಬೆಂಬಲ ಬೆಲೆಯಡಿ ಮಾವು ಖರೀದಿಸಬೇಕು ಎಂದು ಮನವಿ ಮಾಡಿದ್ದರು. 

ಸಂಪುಟ ಸಭೆಯಲ್ಲಿ ಬೆಂಬಲ ಬೆಲೆ ಘೋಷಿಸದ ಸಿಎಂ ಸಿದ್ದರಾಮಯ್ಯ

ಮಾವು ಬೆಳೆ ನಷ್ಟವಾಗಿದ್ದರಿಂದ ಮಾವು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸಿದರು. ಆದರೂ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತ ಭಾಗದ ಸಚಿವರು ಮತ್ತು ಕಿತ್ತೂರು ಕರ್ನಾಟಕ ಭಾಗದ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಮಾವು ಬೆಳೆಗಾರರ ಪ್ರತಿಭಟನೆ ಮತ್ತು ಮಾವು ಬೆಲೆ ಕುಸಿತದ ಕುರಿತು ಪ್ರಸ್ತಾಪಿಸಿದ್ದರು. ಬೆಂಬಲ ಬೆಲೆ ಘೋಷಣೆ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆಸದೆ ಕೇಂದ್ರ ಸರ್ಕಾರದ ಜೊತೆ ಮಾತನಾಡುವ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿಗೆ ಜವಾಬ್ದಾರಿ ವಹಿಸಲಾಯಿತು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಬೆಂಬಲ ಬೆಲೆ ಘೋಷಣೆ  ಮಾಡುವರೆಂಬ ನಿರೀಕ್ಷೆ ಮಾವು ಬೆಳೆಗಾರರದಾಗಿತ್ತು. ಅದರೆ, ಸಿದ್ದರಾಮಯ್ಯ ಯಾವುದೇ ನಿರ್ಧಾರಕ್ಕೆ ಬಾರದೇ ಇರುವುದರಿಂದ ಮಾವು ಬೆಳೆಗಾರರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಬಳಿಕ ಕೇಂದ್ರದೊಂದಿಗೆ ನಡೆದ ಸಭೆಯಲ್ಲಿ ರಾಜ್ಯ ಮಾವು ಬೆಳೆಗಾರರ ಸಮಸ್ಯೆಗಳನ್ನು ಮನದಟ್ಟು ಮಾಡಿದ ಸಚಿವ ಚಲುವರಾಯಸ್ವಾಮಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕ್ರಮ ಕೈಗೊಂಡರು. 

1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ: 

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲೊಂದಾಗಿದೆ. 2025-26ನೇ ಋತುವಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಅಂದಾಜು 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ. ಕರ್ನಾಟಕದಲ್ಲಿ, ಮಾವಿನ ಕೊಯ್ಲು ಮೇ ನಿಂದ ಜುಲೈ ವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ, ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳನ್ನು ಗಮನಿಸಲಾಗಿದೆ.

ಮೇ ತಿಂಗಳಲ್ಲಿ  ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಮಾದರಿ ಬೆಲೆಗಳು ಕ್ವಿಂಟಾಲ್‌ಗೆ ರೂ.1,200 ರಿಂದ ರೂ.2,500 ರವರೆಗೆ ಇತ್ತು. ಇವುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದೀಗ ಕೇಂದ್ರ ಸರ್ಕಾರವು ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ಇದರ ಲಾಭ ಪಡೆದುಕೊಳ್ಳಲು ಇದೀಗ ರಾಜಕೀಯ ಮೇಲಾಟಗಳು ಪ್ರಾರಂಭವಾಗಿದೆ. 

Tags:    

Similar News