ಮುಂದಿನ ಎರಡೂ ವರ್ಷವೂ ನಾನೇ ಸಿಎಂ: ಅಧಿಕಾರಾವಧಿ ಬಗ್ಗೆ ಮತ್ತೊಮ್ಮೆ ಸಿದ್ದರಾಮಯ್ಯ ಸ್ಪಷ್ಟನೆ!

ಬುಧವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

Update: 2025-10-01 12:49 GMT

"ವಿರೋಧ ಪಕ್ಷದವರು ಭವಿಷ್ಯಕಾರರಲ್ಲ, ಅವರ ಭವಿಷ್ಯ ನಿಜವಾಗುವುದಿಲ್ಲ. ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವುದಿಲ್ಲ, ಬಜೆಟ್ ಮಂಡಿಸುವುದಿಲ್ಲ ಎಂದೆಲ್ಲಾ ಹೇಳಿದ್ದರು. ಆದರೆ, ನಾನೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮುಂದುವರಿದು, ಬಜೆಟ್ ಕೂಡ ಮಂಡಿಸಿದ್ದೇನೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ," ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಅಧಿಕಾರಾವಧಿಯ ಕುರಿತಾದ ಚರ್ಚೆಗಳಿಗೆ ಮತ್ತೊಮ್ಮೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಆಯುಧ ಪೂಜೆಯ ದಿನದಂದೇ ಅವರು ನೀಡಿರುವ ಈ ಹೇಳಿಕೆಯು, ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಬಣಕ್ಕೆ ನೀಡಿದ ಸಂದೇಶವೆಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಬುಧವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. "ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೆ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ. ಪಕ್ಷದ ವರಿಷ್ಠರ ಆದೇಶದಂತೆ ನಾವೆಲ್ಲರೂ ನಡೆಯಬೇಕಿದೆ," ಎಂದು ಅವರು ಸ್ಪಷ್ಟಪಡಿಸಿದರು.

ವಿಪಕ್ಷಗಳಿಗೆ ತಿರುಗೇಟು

ಈ ಬಾರಿಯ ದಸರಾ ಉದ್ಘಾಟಕರ ಆಯ್ಕೆಯ ಕುರಿತು ಬಿಜೆಪಿ ಎತ್ತಿದ್ದ ವಿರೋಧದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕರ್ನಾಟಕ ಒಂದು ಜಾತ್ಯತೀತ ರಾಜ್ಯ. ಸಂವಿಧಾನದ ಬಗ್ಗೆ ಅರಿವಿಲ್ಲದವರೇ ಇಂತಹ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದಕ್ಕಾಗಿಯೇ ಸುಪ್ರೀಂ ಕೋರ್ಟ್‌ನಲ್ಲಿಯೂ ಅವರಿಗೆ ಛೀಮಾರಿ ಹಾಕಲಾಯಿತು. ದಸರಾ ಉತ್ಸವವು ರಾಜಕೀಯದ ವಿಷಯವಲ್ಲ," ಎಂದು ಖಾರವಾಗಿ ನುಡಿದರು.

ದಸರಾ ಸಿದ್ಧತೆ ಮತ್ತು ಪ್ರಾಧಿಕಾರದ ಬಗ್ಗೆ ಅಭಿಪ್ರಾಯ

ಮೈಸೂರು ದಸರಾ ಸಿದ್ಧತೆಗಳ ಕುರಿತು ಮಾತನಾಡಿದ ಅವರು, "ಈ ಬಾರಿ ದಸರಾಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಏರ್ ಶೋ, ದೀಪಾಲಂಕಾರ, ಡ್ರೋನ್ ಶೋನಂತಹ ವಿವಿಧ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಜನರು ಸಂತಸದಿಂದ ಪಾಲ್ಗೊಳ್ಳುವುದೇ ನಿಜವಾದ ದಸರಾ ಉತ್ಸವ," ಎಂದರು.

ಪ್ರತ್ಯೇಕ ದಸರಾ ಪ್ರಾಧಿಕಾರದ ಅವಶ್ಯಕತೆಯ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡ ಅವರು, "ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ, ಹೊಸದಾಗಿ ದಸರಾ ಪ್ರಾಧಿಕಾರದ ಅವಶ್ಯಕತೆ ಇಲ್ಲ," ಎಂದು ಸ್ಪಷ್ಟಪಡಿಸಿದರು.

ದಸರಾ ಉದ್ಘಾಟನೆಯ ಕುರಿತು ಸಾರ್ವಜನಿಕರ ಪ್ರತಿಕ್ರಿಯೆ ಹೇಗಿತ್ತು ಎಂಬ ಪತ್ರಕರ್ತರ ಪ್ರಶ್ನೆಗೆ, "ವರ್ಷಕ್ಕೊಮ್ಮೆ ನಡೆಯುವ ನಾಡಹಬ್ಬದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಅತ್ಯಂತ ಸಂತೋಷದಿಂದ ಭಾಗವಹಿಸಿ, ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ," ಎಂದು ಉತ್ತರಿಸಿದರು.

ತುಟ್ಟಿಭತ್ಯೆ ಬಗ್ಗೆ ಭರವಸೆ

ಇದೇ ವೇಳೆ, ಸರ್ಕಾರಿ ನೌಕರರ ತುಟ್ಟಿಭತ್ಯೆ ಬಾಕಿ ಉಳಿದಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ಘೋಷಿಸಿದ ನಂತರ, ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡುತ್ತದೆ," ಎಂದು ಭರವಸೆ ನೀಡಿದರು.

Tags:    

Similar News