ಫೋಟೊ ತೆಗೆಯುವ ನೆಪದಲ್ಲಿ ಪತಿಯ ಕೊಲೆ: ಪತ್ನಿ ಮತ್ತು ಆಕೆಯ ಸ್ನೇಹಿತನ ಬಂಧನ

ದೇಹದ ಮೇಲಿದ್ದ ಗಾಯದ ಗುರುತುಗಳಿಂದ ಅನುಮಾನಗೊಂಡ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಕೊಲೆ ಎಂದು ದೃಢಪಟ್ಟಿದೆ.;

Update: 2025-07-29 05:09 GMT

ಸಾಂದರ್ಭಿಕ ಚಿತ್ರ

ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದ ಒಂದು ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಮೃತನ ಪತ್ನಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ. ಇತ್ತೀಚೆಗೆ ರಾಯಚೂರಿನಲ್ಲಿ ನಡೆದಿದ್ದ ಮೇಲ್ಸೇತುವೆ ಪ್ರಕರಣವನ್ನು ನೆನಪಿಸುವಂತಹ ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹರಿಹರದ ನಿವಾಸಿ, ಗೌಂಡಿ ಕೆಲಸ ಮಾಡುತ್ತಿದ್ದ ಶಫೀವುಲ್ಲಾ (38) ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಹಲಗೇರಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಜುಲೈ 27 ರಂದು, ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲಿದ್ದ ಗಾಯದ ಗುರುತುಗಳಿಂದ ಅನುಮಾನಗೊಂಡ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಕೊಲೆ ಎಂದು ದೃಢಪಟ್ಟಿದೆ. ಪ್ರಕರಣದ ಆರಂಭದಲ್ಲಿ ಪತ್ನಿಯೇ ತನ್ನ ಪತಿ ಕಾಣೆಯಾಗಿದ್ದಾರೆಂದು ದೂರು ನೀಡಿದ್ದರು. ಆದರೆ, ಆಕೆಯ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ, ಕೊಲೆಯಲ್ಲಿ ಆಕೆ ಹಾಗೂ ಆಕೆಯ ಸ್ನೇಹಿತನ ಪಾತ್ರವಿರುವುದನ್ನು ಪತ್ತೆ ಹಚ್ಚಿದ್ದಾರೆ.

ಅಕ್ರಮ ಸಂಬಂಧವೇ ಕೊಲೆಗೆ ಕಾರಣ

ಮೃತ ಶಫೀವುಲ್ಲಾ ಅವರ ಪತ್ನಿಯು ಹಲಗೇರಿಯ 21 ವರ್ಷದ ಯುವಕನೊಂದಿಗೆ ಸಲುಗೆ ಹೊಂದಿದ್ದಳು. ಈ ಸಂಬಂಧವನ್ನು ಮುಂದುವರಿಸಲು, ಆಕೆ ತನ್ನ ಪತಿ ಮತ್ತು ಮಕ್ಕಳನ್ನು ಯುವಕನ ಬಾಡಿಗೆ ಮನೆಗೇ ಕರೆತಂದು ವಾಸವಿದ್ದಳು. ಆರಂಭದಲ್ಲಿ ಶಫೀವುಲ್ಲಾ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಆದರೆ, ಇತ್ತೀಚೆಗೆ ಶಫೀವುಲ್ಲಾ ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದುದು ಅವರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿತ್ತು. ಇದರಿಂದ ಬೇಸತ್ತ ಪತ್ನಿ ಮತ್ತು ಆಕೆಯ ಸ್ನೇಹಿತ, ಶಫೀವುಲ್ಲಾನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.

ಹತ್ಯೆಯ ವಿವರಗಳು

ಯೋಜನೆಯ ಪ್ರಕಾರ, ಜುಲೈ 25 ರಂದು ಪತ್ನಿಯ ಸ್ನೇಹಿತನು ಶಫೀವುಲ್ಲಾ ಅವರನ್ನು ಮದ್ಯ ಕುಡಿಯುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಶಫೀವುಲ್ಲಾಗೆ ಹೆಚ್ಚು ಮದ್ಯ ಕುಡಿಸಿ, ಸಂಜೆ 6 ಗಂಟೆ ಸುಮಾರಿಗೆ ಮದಗ ಮಾಸೂರು ಕೆರೆಯ ಬಳಿ ಕರೆದೊಯ್ದಿದ್ದಾನೆ. ಅಲ್ಲಿ, ಮೊದಲು ತನ್ನ ಫೋಟೊ ತೆಗೆಸಿಕೊಂಡ ಆರೋಪಿ, ನಂತರ "ನಿನ್ನ ಫೋಟೊ ತೆಗೆಯುತ್ತೇನೆ" ಎಂದು ಹೇಳಿ ಮದ್ಯದ ಅಮಲಿನಲ್ಲಿದ್ದ ಶಫೀವುಲ್ಲಾ ಅವರನ್ನು ಕೆರೆಯ ದಡದಲ್ಲಿ ನಿಲ್ಲಿಸಿದ್ದಾನೆ. ಇದೇ ಸಮಯ ಸಾಧಿಸಿ, ಅವರನ್ನು ಕೆರೆಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆರೆಗೆ ಬಿದ್ದ ರಭಸಕ್ಕೆ ಕಲ್ಲುಗಳಿಗೆ ತಾಗಿ ಗಾಯಗೊಂಡ ಶಫೀವುಲ್ಲಾ, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸರ ವಿಚಾರಣೆ ವೇಳೆ, "ಶಫೀವುಲ್ಲಾನನ್ನು ಕೊಂದರೆ ನನ್ನನ್ನು ಮದುವೆಯಾಗುವುದಾಗಿ ಆತನ ಪತ್ನಿ ಹೇಳಿದ್ದಳು, ಅದಕ್ಕಾಗಿಯೇ ಕೊಲೆ ಮಾಡಿದೆ" ಎಂದು ಸ್ನೇಹಿತ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಪತ್ನಿ ಈ ಆರೋಪವನ್ನು ನಿರಾಕರಿಸುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Tags:    

Similar News