ಬೆಂಗಳೂರಲ್ಲಿ ಧಾರಾಕಾರ ಮಳೆ: ಹಲವೆಡೆ ಸ್ಥಳ ಪರಿಶೀಲನೆ ನಡೆಸಿದ ಮುಖ್ಯ ಕಾರ್ಯದರ್ಶಿ
ಮಳೆಯಿಂದಾಗ ಹಾನಿಗೊಳಾಗುವ ಪ್ರದೇಶಗಳಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭೇಟಿ ನೀಡಿ ಸೂಕ್ತ ಕ್ರಮ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳ ಬಗ್ಗೆ ಪರಿಶೀಲನೆ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸೂಕ್ತ ಕ್ರಮ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಲ್ಕ್ಬೋರ್ಡ್, ಎಚ್ಎಸ್ಆರ್ ಲೇಔಟ್ 5 ಮತ್ತು 6ನೇ ಸೆಕ್ಟರ್, ಅಗರ ಕೆರೆ ರಸ್ತೆ, ಇಬ್ಲೂರು ಜಂಕ್ಷನ್ ಸೇರಿದಂತೆ ಇತರೆಡೆ ಪರಿಶೀಲನೆ ನಡೆಸಿದರು. ಗುಂಡಿಗಳನ್ನು ಮುಚ್ಚಿ ಜಲಾವೃತವಾಗುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಿಲ್ಕ್ ಬೋರ್ಡ್ನ ಮೇಲ್ಸೇತುವೆ ಕೆಳಭಾಗದ ಸುತ್ತಲೂ, ರಾಜಕಾಲುವೆಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಬೇಕು. ಬಳಕೆಯಾಗದ ಜಾಗದಲ್ಲಿ ಡೆಬ್ರೀಸ್, ರಾಜಕಾಲುವೆಯಲ್ಲಿ ಹೂಳನ್ನು ತೆರವುಗೊಳಿಸಿ ಸುಂದರೀಕರಣ ಮಾಡಿ, ಫೇವರ್ ಬ್ಲಾಕ್ಸ್ ಅಳವಡಿಸಬೇಕು. ಸ್ಕೈವಾಕ್ ನಿರ್ಮಾಣ ಮಾಡುವುದು, ಪಾಲಿಕೆಯಿಂದ ಹೈ ರೈಸ್ ಪೆಡೆಸ್ಟ್ರಿಯನ್ ಕ್ರಾಸಿಂಗ್ ಮಾಡುವುದು ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಬೇಕು. ರಾಜಕಾಲುವೆಯಲ್ಲಿ ಹೂಳೆತ್ತಿದ ತಕ್ಷಣ, ಹೂಳನ್ನು ಸ್ಥಳದಲ್ಲಿಯೇ ಬಿಡದೆ ತಕ್ಷಣ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮೆಟ್ರೋ ಇಲಾಖೆಯಿಂದ 25 ಮೀ. ನಿಂದ 45 ಮೀ. ಗೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಕೆಎಎಲ್ ಕಾಲೋನಿಯಲ್ಲಿ ಅಳವಡಿಸಲು ಬೃಹತ್ ಪೈಪ್ಗಳನ್ನು ಜಂಕ್ಷನ್ನಲ್ಲಿ ಹಾಕಿದ್ದು, ಅದನ್ನು ಕೂಡಲೆ ತೆರವುಗೊಳಿಸಲು ಹಾಗೂ ಸಿಲ್ಕ್ ಬೋರ್ಡ್ ಮೆಟ್ರೋ ಇಲಾಖೆಯು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಬ್ಬಿಣ ಸೇರಿದಂತೆ ಇತರೆ ಸಾಮಗ್ರಿಗಳನ್ನು ರಸ್ತೆಯಲ್ಲಿಯೇ ಹಾಕಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು
ಡಾಂಬರೀಕರಣ ಹಾಕಲು ಸೂಚನೆ:
ಎಚ್ಎಸ್ಆರ್ 6ನೇ ಸೆಕ್ಟರ್ (ಮಂಗಮ್ಮನ ಪಾಳ್ಯ ಮುಖ್ಯ ರಸ್ತೆ) ಬಳಿ ಅನುಪಯುಕ್ತ ಸಾಮಗ್ರಿಗಳನ್ನು ಕೂಡಲೆ ತೆರವುಗೊಳಿಸಬೇಕು. ಜತೆಗೆ ರಸ್ತೆ ಬದಿ ಸ್ವಚ್ಛತೆ ಹಾಗೂ ಡಾಂಬರೀಕರಣ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಎಚ್ಎಸ್ಆರ್ 5ನೇ ಸೆಕ್ಟರ್ ರಸ್ತೆ ತಿರುವು ಬಳಿ ಪಾದಚಾರಿ, ಎಲೆಕ್ಟ್ರಿಕಲ್ ಕಂಬಗಳನ್ನು ಸಮರ್ಪಕವಾಗಿ ವ್ಯವಸ್ಥಿತಗೊಳಿಸಿ ಸುಗಮ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ಮಾಡಬೇಕು. ರಸ್ತೆ ಮೇಲೆ ನೀರು ನಿಲ್ಲುತ್ತದೆ. ತಕ್ಷಣವೇ ಕಾಮಗಾರಿ ನಡೆಸಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶಿಸಿದರು.
ಅಗರ ಕೆರೆ ರಸ್ತೆ ಪರಿಶೀಲನೆ:
ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆಯನ್ನು ಸಂಪೂರ್ಣ ಸುಸ್ಥಿತಿಯಲ್ಲಿಡಬೇಕು. ಕೂಡಲೆ ಡ್ರೈನೇಜ್ ಕೆಲಸ ಮುಗಿಸಬೇಕು. ಹಾಳಾಗಿರುವ ಕಡೆ ರಸ್ತೆ ಲೆವೆಲ್ ಮಾಡಿ ರೋಲ್ ಮಾಡಿ, ವೆಟ್ ಮಿಕ್ಸ್ ಹಾಕಿ ಮೋಟರೆಬಲ್ ಮಾಡಬೇಕು. ಸ್ಯಾನಿಟರಿ ಲೈನ್ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಇದೇ ವೇಳೆ ನಾಗರಿಕರು, ಫೆಬ್ರವರಿಯಲ್ಲಿ ಕೆಲಸ ಪ್ರಾರಂಭವಾಗಿದ್ದು, ಕೆಲಸಕ್ಕೆ ಮಾತ್ರ ವೇಗ ನೀಡಿಲ್ಲ ಎಂದು ದೂರಿದರು. ಈ ಸಂಬಂಧ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಲಿನಿ ರಜನೀಶ್, ಯಾರು ಗುತ್ತಿಗೆದಾರರು? ಯಾವಾಗ ಕೆಲಸ ಪ್ರಾರಂಭಿಸಲಾಗಿದೆ? ಯಾವಾಗ ಮುಗಿಯುತ್ತದೆ ? ಇತ್ಯಾದಿ ಸಂಪೂರ್ಣ ಮಾಹಿತಿ ತಿಳಿಸಬೇಕು ಎಂದರು.
ಅಗರ ಜಂಕ್ಷನ್ ಬಳಿ ಮೇಲ್ಸೇತುವೆಯ ಮೇಲೆ ಬೀಳುವ ನೀರಿಗೆ ಅಳವಡಿಸಿರುವ ಪೈಪ್ ಹಾಳಾಗಿದ್ದು, ರಸ್ತೆ ಮೇಲೆ ನೀರು ಬೀಳುತ್ತಿದೆ. ಈ ಸಂಬಂಧ ರಸ್ತೆ ಮೇಲೆ ನೀರು ಬೀಳದಂತೆ ಪೈಪ್ ಗಳನ್ನು ಅಳವಡಿಸಬೇಕು. ಮುಖ್ಯ ರಸ್ತೆಯನ್ನು ಮೆಟ್ರೋ, ಸರ್ವೀಸ್ ರಸ್ತೆಯನ್ನು ಪಾಲಿಕೆ ದುರಸ್ತಿ ಮಾಡಬೇಕಿದ್ದು, ಈ ಕ್ಷಣವೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಮೆಟ್ರೋ ಅಧಿಕಾರಿಗೆ ಸೂಚಿಸಿದರು.
ಇಬ್ಲೂರು ಜಂಕ್ಷನ್ ಪರಿಶೀಲನೆ:
ಸರ್ಜಾಪುರ ಸರ್ವೀಸ್ ರಸ್ತೆಯನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ದಕ್ಷಿಣ ವಲಯದ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಅವರು, ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡುವಂತೆ ತಿಳಿಸಿದರು. ರಸ್ತೆಯಲ್ಲಿ ಜಲಾವೃತವಾಗದಂತೆ ಹಾಗೂ ಜಂಕ್ಷನ್ ನ ಸಮಗ್ರ ಅಭಿವೃದ್ಧಿ ಮಾಡಬೇಕು. ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ನಡೆಸಿ, ಸ್ವಚ್ಛವಾಗಿಡಬೇಕು. ಇಬ್ಲೂರು ಜಂಕ್ಷನ್ನಿಂದ ಮಾರತಹಳ್ಳಿಯವರೆಗೆ ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆ ವಿಲೀನ ಮಾಡಿದರೆ ಬಹಳಷ್ಟು ಸಂಚಾರ ದಟ್ಟಣೆ ಕಡಿಮೆ ಆಗಲಿದ್ದು, ಅದಕ್ಕೆ ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಳಚರಂಡಿ ದುರಸ್ತಿಗೆ ನಿರ್ದೇಶನ:
ಪಣತ್ತೂರು ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಒಳಚರಂಡಿ ನೀರು ಹರಿಯುವಂತಾಗಿದೆ. ತಕ್ಷಣವೇ ದುರಸ್ತಿ ಕಾರ್ಯ ನಡೆಸಲು ತಿಳಿಸಿದರು. ಪಾದಚಾರಿ ಮಾರ್ಗ ಸ್ಲ್ಯಾಬ್ ಹಾಳಾಗಿದ್ದು, ಅದನ್ನು ಬದಲಿಸಿ ಡ್ರೈನೇಜ್ ನಲ್ಲಿ ಹೂಳೆತ್ತಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಪಣತ್ತೂರು ರಸ್ತೆ ಅಗಲೀಕರಣಕ್ಕೆ ವೇಗ ನೀಡಬೇಕು. ಇನ್ನು, ವಿಬ್ಗಯಾರ್ ಸ್ಕೂಲ್ ರಸ್ತೆ ತೂಬರಹಳ್ಳಿ ಬಳಿ ರಸ್ತೆ ಬಳಿ ನಡೆಯುತ್ತಿರುವ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಬೇಕು. ಕೆಲಸ ಮುಗಿದ ಬಳಿಕ ಯಾವುದೇ ತ್ಯಾಜ್ಯಗಳು ಇರಬಾರದು. ವಿಪತ್ತು ನಿರ್ವಹಣೆ ಕಾಯ್ದೆ ಅಡಿ ನೀರುಗಾಲುವೆ ಮಾಡಲು ಸೂಚನೆಗಳನ್ನು ನೀಡಿದರು.