ವಿಮಾನ ದುರಂತದ ಬೆನ್ನಲ್ಲೇ ಡಿಜಿಸಿಎ ಕಠಿಣ ಕ್ರಮ: ಏರ್ ಇಂಡಿಯಾದ ಮೂವರು ಅಧಿಕಾರಿಗಳ ವಜಾ

ಏರ್ ಇಂಡಿಯಾ ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿದ ಮಾಹಿತಿ ಮತ್ತು ಪರಿಶೀಲನೆಯಲ್ಲಿ, ವಿಮಾನ ಸಿಬ್ಬಂದಿಯ ಶೆಡ್ಯೂಲಿಂಗ್ ಮತ್ತು ಕಾರ್ಯಾಚರಣೆಯಲ್ಲಿ ಲೈಸೆನ್ಸಿಂಗ್, ವಿಶ್ರಾಂತಿ ಅವಧಿ ಮತ್ತು ಇತ್ತೀಚಿನ ಅಗತ್ಯತೆಗಳ ಲೋಪಗಳಿಗೆ ಸಂಬಂಧಿಸಿದ ಗಂಭೀರ ಉಲ್ಲಂಘನೆಗಳು ಕಂಡುಬಂದಿವೆ.;

Update: 2025-06-21 11:32 GMT

ಕಳೆದ ವಾರ ಅಹಮದಾಬಾದ್‌ನಲ್ಲಿ ನಡೆದ ಭೀಕರ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ದುರಂತದ ನಂತರ, ವಿಮಾನಯಾನ ಸುರಕ್ಷತಾ ಮೇಲ್ವಿಚಾರಕ ಸಂಸ್ಥೆ 'ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್)' ಕಠಿಣ ಕ್ರಮಕ್ಕೆ ಮುಂದಾಗಿದೆ. ಟಾಟಾ ಗ್ರೂಪ್‌ಗೆ ಸೇರಿದ 'ಏರ್ ಇಂಡಿಯಾ'ದಲ್ಲಿ ಗಂಭೀರ ಸುರಕ್ಷತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಮೂವರು ಹಿರಿಯ ಅಧಿಕಾರಿಗಳನ್ನು, ಒಬ್ಬ ವಿಭಾಗೀಯ ಉಪಾಧ್ಯಕ್ಷರು (ಡಿವಿಷನಲ್ ವೈಸ್ ಪ್ರೆಸಿಡೆಂಟ್) ಸೇರಿದಂತೆ, ಸಿಬ್ಬಂದಿ ಶೆಡ್ಯೂಲಿಂಗ್ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳಿಂದ ತಕ್ಷಣವೇ ತೆಗೆದುಹಾಕಲು ಡಿಜಿಸಿಎ ಆದೇಶಿಸಿದೆ.

ಜೂನ್ 20ರಂದು ಜಾರಿಯಾದ ಆದೇಶದಲ್ಲಿ, ಈ ಮೂವರು ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮದ ಕಾರ್ಯವಿಧಾನ ಆರಂಭಿಸುವಂತೆ ಡಿಜಿಸಿಎ ಏರ್ ಇಂಡಿಯಾಕ್ಕೆ ಸೂಚಿಸಿದೆ. ಡಿಜಿಸಿಎ ಆದೇಶದ ಪ್ರಕಾರ, ಏರ್ ಇಂಡಿಯಾ ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿದ ಮಾಹಿತಿ ಮತ್ತು ಪರಿಶೀಲನೆಯಲ್ಲಿ, ವಿಮಾನ ಸಿಬ್ಬಂದಿಯ ಶೆಡ್ಯೂಲಿಂಗ್ ಮತ್ತು ಕಾರ್ಯಾಚರಣೆಯಲ್ಲಿ ಲೈಸೆನ್ಸಿಂಗ್, ವಿಶ್ರಾಂತಿ ಅವಧಿ ಮತ್ತು ಇತ್ತೀಚಿನ ಅಗತ್ಯತೆಗಳ ಲೋಪಗಳಿಗೆ ಸಂಬಂಧಿಸಿದ ಗಂಭೀರ ಉಲ್ಲಂಘನೆಗಳು ಕಂಡುಬಂದಿವೆ.

ಈ ಉಲ್ಲಂಘನೆಗಳು 'ಏಆರ್‌ಎಂಎಸ್' (ಏರ್ ರೂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ನಿಂದ 'ಸಿಎಇ ಫ್ಲೈಟ್ ಮತ್ತು ಕ್ರೂ ಮ್ಯಾನೇಜ್‌ಮೆಂಟ್ ಸಿಸ್ಟಮ್'ಗೆ ಬದಲಾವಣೆಯ ನಂತರದ ಪರಿಶೀಲನೆಯಲ್ಲಿ ಕಂಡುಬಂದಿವೆ ಎಂದು ಡಿಜಿಸಿಎ ವಿವರಿಸಿದೆ. ಏಆರ್‌ಎಂಎಸ್ ಎನ್ನುವುದು ಸಿಬ್ಬಂದಿ ರೋಸ್ಟರಿಂಗ್ ಮತ್ತು ವಿಮಾನ ಯೋಜನೆಯನ್ನು ಒಳಗೊಂಡಂತೆ ವಿವಿಧ ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ಏರ್‌ಲೈನ್ ಬಳಸುವ ಸಾಫ್ಟ್‌ವೇರ್ ಫ್ಲ್ಯಾಟ್​ಫಾರ್ಮ್​ .

ವ್ಯವಸ್ಥಿತ ವೈಫಲ್ಯ 

ಏರ್ ಇಂಡಿಯಾ ಸ್ವಯಂಪ್ರೇರಿತವಾಗಿ ಲೋಪಗಳನ್ನು ಬಹಿರಂಗಪಡಿಸಿದ್ದರೂ, 'ಸಿಬ್ಬಂದಿ ಶೆಡ್ಯೂಲಿಂಗ್, ಮೇಲ್ವಿಚಾರಣೆ ಮತ್ತು ಆಂತರಿಕ ಜವಾಬ್ದಾರಿಯಲ್ಲಿ ವ್ಯವಸ್ಥಿತ ವೈಫಲ್ಯಗಳು ಇವೆ ಎಂದು ಡಿಜಿಸಿಎ ಆದೇಶವು ಸ್ಪಷ್ಟಪಡಿಸಿದೆ. ಈ ಕಾರ್ಯಾಚರಣಾ ಲೋಪಗಳಿಗೆ ನೇರವಾಗಿ ಜವಾಬ್ದಾರರಾದ ಪ್ರಮುಖ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತಿನ ಕ್ರಮಗಳ ಕೊರತೆಯ ಬಗ್ಗೆ ಡಿಜಿಸಿಎ ಗಂಭೀರ ಆತಂಕ ವ್ಯಕ್ತಪಡಿಸಿದೆ. ಈ ಅಧಿಕಾರಿಗಳು 'ಅನಧಿಕೃತ ಮತ್ತು ಅನುಸರಣೆಯಿಲ್ಲದ ಸಿಬ್ಬಂದಿ ವ್ಯವಸ್ಥೆ , ಲೈಸೆನ್ಸಿಂಗ್ ಮತ್ತು ಇತ್ತೀಚಿನ ಗುಣಮಟ್ಟದ ನಿಯಮಗಳ ಉಲ್ಲಂಘನೆ, ಮತ್ತು ಶೆಡ್ಯೂಲಿಂಗ್ ಪ್ರೋಟೋಕಾಲ್ ಹಾಗೂ ಮೇಲ್ವಿಚಾರಣೆಯಲ್ಲಿ ವ್ಯವಸ್ಥಿತ ವೈಫಲ್ಯಗಳು' ಸೇರಿದಂತೆ ಗಂಭೀರ ಮತ್ತು ಪದೇ ಪದೇ ಲೋಪಗಳಲ್ಲಿ ಭಾಗಿಯಾಗಿದ್ದಾರೆ ಎಂದು ಡಿಜಿಸಿಎ ಹೇಳಿದೆ.

ಏರ್ ಇಂಡಿಯಾಕ್ಕೆ ಡಿಜಿಸಿಎ ಎಚ್ಚರಿಕೆ

ಸಿಬ್ಬಂದಿ ಶೆಡ್ಯೂಲಿಂಗ್‌ನಲ್ಲಿ ಮುಂದಿನ ಯಾವುದೇ ಉಲ್ಲಂಘನೆಗಳು 'ಲೈಸೆನ್ಸ್ ಅಮಾನತು ಮತ್ತು ಕಾರ್ಯಾಚರಣಾ ನಿರ್ಬಂಧಗಳನ್ನು ಒಳಗೊಂಡಂತೆ ಕಠಿಣ ಕ್ರಮಗಳಿಗೆ ಕಾರಣವಾಗುತ್ತವೆ ಎಂದು ಡಿಜಿಸಿಎ ಏರ್ ಇಂಡಿಯಾಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ.

ಬಿಗಿ ಕ್ರಮ

ಜೂನ್ 12ರಂದು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಫ್ಲೈಟ್ ಎಐ-171, 242 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಅಹಮದಾಬಾದ್‌ನಲ್ಲಿ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್​ ಕಟ್ಟಡಕ್ಕೆ ಡಿಕ್ಕಿ ಹೊಡೆದು ದುರಂತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಒಬ್ಬರನ್ನು ಹೊರತುಪಡಿಸಿ ಎಲ್ಲರೂ (241) ಮತ್ತು 29 ಜನ ಸಾರ್ವಜನಿಕರು ಈ ದುರಂತದಲ್ಲಿ ಮೃತಪಟ್ಟಿದ್ದರು.

ದುರಂತದ ನಂತರ ಏರ್ ಇಂಡಿಯಾ ಡಿಜಿಸಿಎಯ ಮೇಲ್ವಿಚಾರಣೆಯಲ್ಲಿದೆ. ಏರ್ ಇಂಡಿಯಾ ನಿಯಂತ್ರಕ ಸಂಸ್ಥೆಯ ಆದೇಶವನ್ನು ಒಪ್ಪಿಕೊಂಡಿದ್ದು, ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಶನಿವಾರದ ಹೇಳಿಕೆಯಲ್ಲಿ ತಿಳಿಸಿದೆ. 'ತಾತ್ಕಾಲಿಕವಾಗಿ, ಕಂಪನಿಯ ಚೀಫ್ ಆಪರೇಷನ್ಸ್ ಆಫೀಸರ್ ಇಂಟಿಗ್ರೇಟೆಡ್ ಆಪರೇಷನ್ಸ್ ಕಂಟ್ರೋಲ್ ಸೆಂಟರ್ (ಐಒಸಿಸಿ)ಗೆ ನೇರ ಮೇಲ್ವಿಚಾರಣೆ ಮಾಡಲಿದ್ದಾರೆ,' ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

Tags:    

Similar News