ಮೈಸೂರು ಮುಡಾ ಕಚೇರಿಯಲ್ಲಿ ಎರಡನೇ ದಿನವೂ ಮುಂದುವರಿದ ಇಡಿ ಶೋಧ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ ಎರಡನೇ ದಿನವೂ ದಾಖಲೆಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Update: 2024-10-19 10:39 GMT
ಮೈಸೂರು ಮುಡಾ ಕಚೇರಿಯಲ್ಲಿ ಇಡಿ ಎರಡನೇ ದಿನವೂ ಶೋಧ ಮುಂದುವರೆಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ ಎರಡನೇ ದಿನವಾದ ಶನಿವಾರವೂ ದಾಖಲೆಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಮುಡಾ ಆಯುಕ್ತ ಎಎನ್ ರಘುನಂದನ್ ಮತ್ತು ಕಾರ್ಯದರ್ಶಿ ಪ್ರಸನ್ನ ವಿಕೆ ಸೇರಿದಂತೆ ಮುಡಾದ ಎಲ್ಲಾ ಅಧಿಕಾರಿಗಳನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ರಾತ್ರಿ 11.30ರವರೆಗೂ ಶೋಧ ಮುಂದುವರಿದಿತ್ತು ಎಂದು ಮುಡಾ ಮೂಲಗಳು ತಿಳಿಸಿವೆ. ಇಡಿ ತನಿಖೆ ನಡೆಯುತ್ತಿರುವುದರಿಂದ 40 ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ನಗರ ಪೊಲೀಸರು ಮುಡಾ ಕಚೇರಿಯನ್ನು ಸುತ್ತುವರಿದಿದ್ದಾರೆ.

ಮೈಸೂರಿನ ವಿಜಯನಗರ ಮೂರು ಮತ್ತು ನಾಲ್ಕನೇ ಹಂತದಲ್ಲಿ ಮುಡಾದಿಂದ ಹಂಚಿಕೆಯಾಗಿರುವ 14 ಪರ್ಯಾಯ ನಿವೇಶನಗಳಿಗೆ ಸಂಬಂಧಿಸಿದಂತೆ ಮೈಸೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿಗೆ ದೂರು ನೀಡಿದ್ದರು.

ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3.16 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳದೆ ಮುಡಾ ನಿವೇಶನ ಮಾಡಿ ಬಡಾವಣೆ ನಿರ್ಮಿಸಿದೆ. ಅದಕ್ಕೆ ಪ್ರತಿಯಾಗಿ ಸಿಎಂ ಪತ್ನಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ ಎಂದು ಕೃಷ್ಣ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ, ಪ್ರಕರಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ 2002 (2003 ರ 15) ನಿಬಂಧನೆಗಳ ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾರ್ವತಿ ಅವರು ಎಲ್ಲಾ ನಿವೇಶನಗಳನ್ನು ಮುಡಾಕ್ಕೆ ಹಿಂತಿರುಗಿಸಿದ್ದಾರೆ.

Tags:    

Similar News