ಸ್ವಯಂ ಪ್ರತಿಷ್ಠೆಯ ಭಾಷಣ ಬೇಡ; ಪ್ರಧಾನಿ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ

ದೇಶದ ಭದ್ರತೆ ವಿಚಾರದಲ್ಲಿ ಒಗ್ಗಟ್ಟು ಇರಬೇಕು.ನಾನು ಅದನ್ನು ಮಾಡಿದ್ದೇನೆ, ಇದನ್ನು ಮಾಡಿದ್ದೇನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.;

Update: 2025-06-01 16:33 GMT

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಎಲ್ಲ ನಾಯಕರು ಭದ್ರತೆ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡು ಇರಬೇಕು. ಸ್ವಯಂ ಪ್ರತಿಷ್ಠೆಯ ಭಾಷಣ ಮಾಡುವುದು ಬೇಡ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಭದ್ರತೆ ವಿಚಾರದಲ್ಲಿ ಒಗ್ಗಟ್ಟು ಇರಬೇಕು.ನಾನು ಅದನ್ನು ಮಾಡಿದ್ದೇನೆ, ಇದನ್ನು ಮಾಡಿದ್ದೇನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವುದು ಸರಿಯಲ್ಲ. ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಘರ್ಷವನ್ನು ಚುನಾವಣೆಗಾಗಿ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಕಿಡಿಕಾರಿದರು.

ನಾವು ಎಲ್ಲಿ ಮಾತಾಡಬೇಕು ಅನ್ನೋದು ಗೊತ್ತಿರಬೇಕು. ನಮ್ಮ ವಿರೋಧಿಗಳನ್ನು ಓಡಿಸುವ ಕೆಲಸ ಮಾಡಬೇಕು. ವಿರೋಧಿಗಳ ಹೇಳಿಕೆಗಳಿಗೆ ಪ್ರತಿ ಬಾರಿಯೂ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಮೋದಿ ಉದ್ವೇಗದ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದರು.

ಏನು ಘಟನೆ ಆಗಿದೆಯೋ ಅದರ ಬಗ್ಗೆ ತಿಳಿದುಕೊಂಡು ಮಾತಾಡೋದು ಒಳ್ಳೆಯದು. ನಿಯೋಗ ವರದಿಗೂ ಮೊದಲೇ ಮೋದಿಯವರು ಚುನಾವಣೆ ಪ್ರಚಾರ ಮಾಡುವುದು ಬೇಡ. ಇಡೀ ದೇಶ ನಮ್ಮ ಸೇನೆಯ ಹಿಂದೆ ಇದೆ. ಸೇನೆಗೆ ಸಂಪೂರ್ಣ ಅಧಿಕಾರ‌ ಕೊಟ್ಟಿದ್ದೇನೆ ಎಂದು ಮೋದಿಯವರೇ ಈ ಹಿಂದೆ ಹೇಳಿದ್ದರು. ಭದ್ರತೆ ವಿಚಾರ ಚುನಾವಣೆಗೇಕೆ ಬಳಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಸಂಘರ್ಷ, ಆಪರೇಷನ್ ಸಿಂದೂರ್ ಹಾಗೂ ಕದನ ವಿರಾಮ ಘೋಷಣೆ ಕುರಿತು ಚರ್ಚಿಸಲು ಸಂಸತ್ ಅಧಿವೇಶನ ಕರೆಯುವಂತೆ ಪದೇ ಪದೇ ಮನವಿ ಮಾಡಿದರೂ ಚಕಾರ ಎತ್ತುತ್ತಿಲ್ಲ.

ಪಾಕಿಸ್ತಾನ ಸರ್ಕಾರ ಸಂಸತ್ ಅಧಿವೇಶನ ಕರೆದು ಚರ್ಚಿಸಿದೆ. ನಮ್ಮಲ್ಲಿ ಯಾಕೆ ಅಧಿವೇಶನ ಕರೆಯಬಾರದು. ನಾವ್ಯಾರೂ ದೇಶದ ವಿರೋಧ ಮಾತನಾಡುವುದಿಲ್ಲ ಎಂದು ಮೋದಿ ವಿರುದ್ಧ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ಭೇಟಿ ಮಾಡಿದ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಈ ವೇಳೆ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರು ಬಂದಾಗ ಭೇಟಿಯಾಗುವ ಸಂಪ್ರದಾಯ ಇದೆ. ಅದರಂತೆ ಭೇಟಿ ಮಾಡಿ ನಮ್ಮ ಇಲಾಖೆ, ರಾಜ್ಯದ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ನನ್ನ ಅನಾರೋಗ್ಯದ ಬಗ್ಗೆ ಅಧ್ಯಕ್ಷರು ವಿಚಾರಿಸಿದರು. ಯಾವ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೀರಾ ಎಂದು ಕೇಳಿದರು. ಗೃಹ ಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಆಗುತ್ತಿರುವ ಲಾಭದ ಕುರಿತು ವಿಚಾರಸಿದರು ಎಂದರು.

ಗೃಹಲಕ್ಷ್ಮಿ ಹಣ ಜಮೆ ಆಗದ ವಿಚಾರ ಪ್ರಸ್ತಾಪ

ರಾಜ್ಯದಲ್ಲಿ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಜಮೆ ಆಗದ ಬಗ್ಗೆಯೂ ಪ್ರಸ್ತಾಪಿಸಿದರು. ಆರ್ಥಿಕ ವರ್ಷಾಂತ್ಯವಾಗಿದ್ದ ಕಾರಣ ಸಮಸ್ಯೆಯಾಗಿದೆ. ಮಾರ್ಚ್ ತಿಂಗಳ ಹಣ ಜಮೆ ಆಗಿದೆ. ಏಪ್ರಿಲ್ ತಿಂಗಳ ಹಣ ಜಮೆ ಮಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.

Tags:    

Similar News