ಧರ್ಮಸ್ಥಳ ಅಸ್ಥಿಪಂಜರ ಪ್ರಕರಣ: ತನಿಖೆ ಚುರುಕುಗೊಳಿಸಿದ ಎಸ್ಐಟಿ, ಪೊಲೀಸರ ವಿಚಾರಣೆಗೆ ಸಿದ್ಧತೆ

ಎಸ್ಐಟಿ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರು ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ. ಈ ಹಿಂದೆ ಗುರುತಿಸಲಾಗಿದ್ದ ಎಂಟು ಸ್ಥಳಗಳ ಬಳಿಕ, ಇಂದು '9ನೇ ಪಾಯಿಂಟ್'ನಲ್ಲಿ ಉತ್ಖನನ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.;

Update: 2025-08-02 04:55 GMT

ಧರ್ಮಸ್ಥಳ. 

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಅಸ್ಥಿಪಂಜರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಇನ್ನಷ್ಟು ಚುರುಕುಗೊಳಿಸಿದೆ. ತನಿಖೆಯ ಭಾಗವಾಗಿ, ಅಧಿಕಾರಿಗಳು ಶನಿವಾರ '9ನೇ ಪಾಯಿಂಟ್' ಎಂದು ಗುರುತಿಸಲಾದ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ನೇತ್ರಾವತಿ ನದಿ ಬಳಿಯ ಬದಿಯಲ್ಲಿ ನಾಲ್ಕು ಕಡೆ ಇಂದು ಶೋಧಕಾರ್ಯ ನಡೆಯಲಿದೆ. 

ಎಸ್ಐಟಿ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರು ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ. ಈ ಹಿಂದೆ ಗುರುತಿಸಲಾಗಿದ್ದ ಎಂಟು ಸ್ಥಳಗಳ ಬಳಿಕ, ಇಂದು '9ನೇ ಪಾಯಿಂಟ್'ನಲ್ಲಿ ಉತ್ಖನನ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಪ್ರಯತ್ನ ಮುಂದುವರಿದಿದೆ. ಈ ನಿರ್ದಿಷ್ಟ ಸ್ಥಳದಲ್ಲಿ ಹೆಚ್ಚಿನ ಅವಶೇಷಗಳು ಪತ್ತೆಯಾಗುವ ಸಾಧ್ಯತೆಯಿರುವುದರಿಂದ ಶೋಧ ಕಾರ್ಯವು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಪೊಲೀಸ್ ಅಧಿಕಾರಿಗಳ ವಿಚಾರಣೆ

ಈ ಪ್ರಕರಣದ ತನಿಖೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಎಸ್ಐಟಿ ನಿರ್ಧರಿಸಿದೆ. ಈ ಹಿಂದೆ ಈ ಪ್ರದೇಶದಲ್ಲಿ ನಡೆದಿದ್ದ ಅಪರಾಧ ಕೃತ್ಯಗಳು, ನಾಪತ್ತೆ ಪ್ರಕರಣಗಳು ಹಾಗೂ ಇತರ ಸಂಶಯಾಸ್ಪದ ಚಟುವಟಿಕೆಗಳ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ತಂಡವು ಮುಂದಾಗಿದೆ. ಈ ಹಿಂದಿನ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆಯೇ ಅಥವಾ ಕರ್ತವ್ಯ ಲೋಪವಾಗಿದೆಯೇ ಎಂಬ ಬಗ್ಗೆ ಎಸ್ಐಟಿ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸುತ್ತಿದೆ.

ಈ ಸಂಬಂಧ ಈಗಾಗಲೇ ಕೆಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಶೀಘ್ರದಲ್ಲೇ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ಕಡೆ ಅಸ್ಥಿಪಂಜರಗಳು ಪತ್ತೆಯಾದ ಸ್ಥಳದಲ್ಲಿ ಶೋಧ ಕಾರ್ಯ ತೀವ್ರಗೊಂಡಿದ್ದರೆ, ಇನ್ನೊಂದು ಕಡೆ ಹಿಂದಿನ ತನಿಖಾ ವೈಫಲ್ಯಗಳ ಬಗ್ಗೆಯೂ ಎಸ್ಐಟಿ ಗಮನ ಹರಿಸಿರುವುದರಿಂದ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಈ ಬೆಳವಣಿಗೆಗಳು ಪ್ರಕರಣದ ತನಿಖೆಯ ದಿಕ್ಕನ್ನು ನಿರ್ಧರಿಸಲಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

Live Updates
2025-08-02 06:08 GMT

ನೇತ್ರಾವತಿ ನದಿ ರಸ್ತೆ ಬದಿಯಲ್ಲಿ ಕಳೇಬರ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಪೊಲೀಸರು ಬರುವ ಮುಂಚೆಯೇ ಡಿ-ಗ್ಯಾಂಗ್ ಎಂದು ಹೇಳಿಕೊಂಡ ಆಟೋ ಚಾಲಕರ ಗುಂಪು ಸುತ್ತುವರಿದಿದ್ದ ಪ್ರಸಂಗ ಶನಿವಾರ ನಡೆದಿದೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ ಆಟೊ ಚಾಲಕರನ್ನು ಚದುರಿಸಲಾಯಿತು.

ಪೊಲೀಸರನ್ನು ಹೊರತುಪಡಿಸಿ ಇನ್ನಾರು ಇರುವಂತಿಲ್ಲ ಎಂದು ಸೂಚಿಸಲಾಯಿತು. ಒಂದು ಅಸ್ಥಿಪಂಜರ ಸಿಕ್ಕ ಬಳಿಕ ಮತ್ತೆ ಸಿಗಬಹುದೇ ಎಂಬ ಅನುಮಾನದ ಮೇರೆಗೆ ಬಂದು ವೀಕ್ಷಣೆ ಮಾಡುತ್ತಿದ್ದು, ಮಾಹಿತಿ ರವಾನೆಗಾಗಿ ಗ್ಯಾಂಗ್ ಸ್ಥಳಕ್ಕೆ ಬಂದಿತ್ತು ಎಂದು ಸ್ಥಳೀಯ ಮೂಲಗಳು ಹೇಳಿವೆ.

 

2025-08-02 05:41 GMT

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ 2015 ರ ನಡುವೆ ದಾಖಲಾದ ಅಪರಿಚಿತ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳನ್ನು(UDR)ಡಿಲೀಟ್ ಆಗಿರುವ ಪ್ರತಿಕ್ರಿಯೆ ಕೇಳಿಬಂದ ನಂತರ ಬೆಳ್ತಂಗಡಿ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಇದೇ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರುದಾರ ಆರೋಪಿಸಿದ್ದಾನೆ. 1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನಗೆ ಹೂಳಿಸಲಾಗಿದೆ ಎಂದು ಆರೋಪಿ ಹೇಳಿರುವುದರಿಂದ ಈಗ ದಾಖಲೆಗಳ ನಾಶಪಡಿಸುವಿಕೆ ತೀವ್ರ ಕಳವಳಕ್ಕೆ ಕಾರಣವಾಗಿದೆ.

Tags:    

Similar News