ಕಾಂಗ್ರೆಸ್ ಸರಕಾರದಿಂದ ಒಳಮೀಸಲಾತಿ ಆದೇಶ ರದ್ದು ಮಾಡುವ ದುರುದ್ದೇಶ- ಗೋವಿಂದ ಕಾರಜೋಳ
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಪರಿಶಿಷ್ಟ ಜನಾಂಗ ಮತ್ತು ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ನಿರಂತರ ಹೋರಾಟ ನಡೆದಿತ್ತು.
ಗೋವಿಂದ ಕಾರಜೋಳ
ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಆರಂಭಗೊಳ್ಳುವ ಮೊದಲು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಕೇಸುಗಳು ದಾಖಲಾಗಿ ಒಳಮೀಸಲಾತಿ ಆದೇಶ ರದ್ದಾಗಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯರ ಸರಕಾರದ ದುರುದ್ದೇಶ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಪರಿಶಿಷ್ಟ ಜನಾಂಗ ಮತ್ತು ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ನಿರಂತರ ಹೋರಾಟ ನಡೆದಿತ್ತು. ಇದರ ಫಲವಾಗಿ ಪ್ರಧಾನಿ ನರೇಂದ್ರ ಮೋದಿಜೀ ಅವರ ಸರಕಾರವು ಮುತುವರ್ಜಿ ವಹಿಸಿ ನ್ಯಾಯ ಒದಗಿಸಿ ಈಗ 1 ವರ್ಷ 3 ತಿಂಗಳು ಕಳೆದಿದೆ. ಆದರೂ, ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ವಿಳಂಬ ನೀತಿ ಮತ್ತು ಗೊಂದಲ ಸೃಷ್ಟಿಸುತ್ತಿದ್ದು, ದೋಷಭರಿತ ಆದೇಶಗಳನ್ನು ನೀಡುವ ಮೂಲಕ ಪರಿಶಿಷ್ಟ ಜನಾಂಗದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈಚೆಗೆ ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಕೇಸ್ ಬಂದಾಗ ರಾಜ್ಯ ಸರಕಾರದ ಕಡೆಯಿಂದ ಯಾರೂ ಹಾಜರಾಗದ ಕಾರಣ ಆದೇಶ ಭಾಗಶಃ ತಡೆಯಾಗಿದೆ ಎಂದು ವಿವರಿಸಿದರು.
ಒಂದು ಜಾತಿಯ ಹಿತ ಕಾಯಲು ದೊಂಬರಾಟ
ಸಿದ್ದರಾಮಯ್ಯನವರು 101 ಜಾತಿಯ ಹಿತ ಕಾಯಲು ಬಯಸುತ್ತಿಲ್ಲ, ಕೇವಲ ಒಂದು ಜಾತಿಯ ಹಿತಕ್ಕಾಗಿ ಈ ದೊಂಬರಾಟ ಮಾಡುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ನೇಮಕಾತಿ ಮುಂದೆ ಹೋದಷ್ಟೂ ಸರಕಾರಕ್ಕೆ ಒಳ್ಳೆಯದೆಂಬ ಭಾವನೆ ಇದೆ, ಖಜಾನೆ ಖಾಲಿಯಾಗಿರುವುದರಿಂದ ನೇಮಕಾತಿ ಮಾಡಲೂ ಅವರು ತಯಾರಿಲ್ಲ ಎಂದು ದೂರಿದರು. ಮತ್ತೆ ಈ ಜನಾಂಗಕ್ಕೆ ಮೋಸ ಮಾಡಲು ಸಿದ್ದರಾಮಯ್ಯರ ಸರಕಾರವು ಇಂದು ಸಂಪುಟ ಸಭೆ ನಡೆಸುತ್ತಿದೆ, ಕರಡು ಮಸೂದೆ ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಇದೇ ತಿಂಗಳ 5ರೊಳಗೆ ರಾಜ್ಯ ಸರಕಾರವು ಹೈಕೋರ್ಟಿಗೆ ತನ್ನ ವಾದವನ್ನು ಮಂಡಿಸಲು ಬೇಕಾದ ವಿವರಣೆ ನೀಡಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ನೀಚಬುದ್ಧಿ
ದಲಿತರು ಮತ್ತು ಅಸ್ಪೃಶ್ಯರು ಉದ್ಧಾರ ಆಗಬಾರದು ಎಂಬುದೇ ರಾಜ್ಯದ ಕಾಂಗ್ರೆಸ್ ಮನಸ್ಥಿತಿ ಎಂದು ಗೋವಿಂದ ಕಾರಜೋಳ ಅವರು ತೀವ್ರ ವಾಗ್ದಾಳಿ ನಡೆಸಿದರು. "79 ವರ್ಷ ಮತಬ್ಯಾಂಕ್ ಆಗಿದ್ದರು, ಮುಂದೆಯೂ 100 ವರ್ಷ ಮತಬ್ಯಾಂಕ್ ಆಗಿರಬೇಕು ಹಾಗೂ ಅವರು ಉದ್ಧಾರ ಆಗಬಾರದು ಎಂಬುದೇ ಕಾಂಗ್ರೆಸ್ಸಿನ ನೀಚಬುದ್ಧಿ" ಎಂದು ಟೀಕಿಸಿದರು.
ಸಮಾಜ ಕಲ್ಯಾಣ ಇಲಾಖೆಯು ಕೋರ್ಟಿನಲ್ಲಿ ಸಮರ್ಪಕವಾಗಿ ವಾದ ಮಂಡಿಸಲು ಯಾವುದೇ ತಯಾರಿ ಮಾಡುತ್ತಿಲ್ಲ. ಸ್ವತಃ ಅವರೇ ನೇಮಿಸಿದ ನ್ಯಾ. ನಾಗಮೋಹನ್ ದಾಸ್, ನ್ಯಾ. ಸದಾಶಿವ ಅವರ ವರದಿಯನ್ನೂ ಒಪ್ಪಿಲ್ಲ ಮತ್ತು ನಮ್ಮ ಸರಕಾರದ ಮಾಧುಸ್ವಾಮಿಯವರ ಸಂಪುಟ ಉಪ ಸಮಿತಿ ವರದಿಯನ್ನೂ ಒಪ್ಪಿಲ್ಲ ಎಂದು ದೂರಿದರು.
ಮತ್ತೆ ಗೊಂದಲ ಸೃಷ್ಟಿ: ಎ. ನಾರಾಯಣಸ್ವಾಮಿ ಆಕ್ಷೇಪ
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ಒಳ ಮೀಸಲಾತಿ ವಿಚಾರದಲ್ಲಿ ಗೊಂದಲಗಳಿವೆ. ಸಂವಿಧಾನಬದ್ಧವಾಗಿ ಯೋಚಿಸದೇ ಈ ರಾಜ್ಯ ಸರಕಾರವು ರಾಜಕೀಯ ತೀರ್ಮಾನ ತೆಗೆದುಕೊಂಡಿದೆ. ಒಂದು ವಾರದಿಂದ ಅಲೆಮಾರಿಗಳ ಮೀಸಲಾತಿ ಕುರಿತ ಚರ್ಚೆ ನಡೆಯುತ್ತಿದ್ದು, ಅಲೆಮಾರಿ ಸಮುದಾಯವು ಪ್ರತ್ಯೇಕ ಮೀಸಲಾತಿ ಕೇಳುತ್ತಿದ್ದಾರೆಯೇ ಹೊರತು ಪ್ಯಾಕೇಜ್ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಮತ್ತು ಈ ಸರಕಾರವು ಮತ್ತೆ ಮತ್ತೆ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ ಎಂದು ದೂರಿದರು.
ಒಂದು ಸಮುದಾಯ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆಗೆ ಬಂದಾಗ ಸರಕಾರದ ಪರ ಒಬ್ಬರೂ ಧ್ವನಿ ಎತ್ತಿಲ್ಲ. "ನಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನಮ್ಮ ಸಮುದಾಯಗಳು ಕೆಳಹಂತದ ಅಧಿಕಾರ ಅನುಭವಿಸುವಂತೆ ಮಾಡುವ ಇಚ್ಛಾಶಕ್ತಿ ನಿಮಗಿಲ್ಲವೇ? ನೀವು ಯಾರ ವಿರುದ್ಧ ಇದ್ದೀರಿ?" ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬದ್ಧತೆ ತೋರಿಸಿ ಎಂದು ಆಗ್ರಹಿಸಿದ ಅವರು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾದಿಗರು ಉಗ್ರ ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ, ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಅನಿಲ್ ಕುಮಾರ್, ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.