ಹೈಕಮಾಂಡ್ ಎದುರು ಸಿಎಂ ಬೆಕ್ಕಿನ ಮರಿಯಂತೆ ಕುಳಿತಿದ್ದರು; ಬಿಜೆಪಿ ಶಾಸಕ ವ್ಯಂಗ್ಯ
ತಮಗೆ ಸಮಸ್ಯೆ ಎದರುದಾಗಲೆಲ್ಲ ಜಾತಿ ಗಣತಿ ಹೆಸರು ಹೇಳುತ್ತಿದ್ದರು. ಇದೀಗ ದತ್ತಾಂಶ ಸರಿ ಆಗಿಲ್ಲ ಎಂದು ಅದನ್ನು ಕಸದ ಬುಟ್ಟಿಗೆ ಹಾಕಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದು ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.;
ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್
ಜಾತಿ ಗಣತಿ ವರದಿ ವಿಚಾರವಾಗಿ ಹೈಕಮಾಂಡ್ ಮುಂದೆ ಸಿಎಂ ಸಿದ್ದರಾಮಯ್ಯ ಬೆಕ್ಕಿನ ಮರಿಯಂತೆ ಕುಳಿತುಕೊಂಡು ವಾಪಸ್ ಬಂದಿರುವುದು ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಆರ್ಸಿಬಿ ವಿಜಯೋತ್ಸವದ ವೇಳೆ 11 ಜನ ಮೃತಪಟ್ಟಿದ್ದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ದಿನಕ್ಕೊಂದು ಸುಳ್ಳು ಹೇಳುತ್ತಾ ಬಂದಿದ್ದರು. ತಮಗೆ ಸಮಸ್ಯೆ ಎದರುದಾಗಲೆಲ್ಲ ಜಾತಿ ಗಣತಿ ಹೆಸರು ಹೇಳುತ್ತಿದ್ದರು. ಇದೀಗ ದತ್ತಾಂಶ ಸರಿಯಿಲ್ಲ ಎಂದು ಹೇಳಿ ವರದಿಯನ್ನು ಕಸದ ಬುಟ್ಟಿಗೆ ಹಾಕಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದು ಟೀಕಿಸಿದ್ದಾರೆ.
2014 ರಲ್ಲಿ ಜಾತಿಗಣತಿಗಾಗಿ 165 ಕೋಟಿ ರೂ. ಜನರ ತೆರಿಗೆ ಹಣವನ್ನು ವೆಚ್ಚ ಮಾಡಲಾಗಿದೆ. ಜಾತಿ ಗಣತಿ ಜಾರಿ ನನ್ನ ಬದ್ಧತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಸ್ವತಃ ಕಾಂಗ್ರೆಸ್ ಶಾಸಕರು ಹಾಗೂ ಕೆಲ ಸಚಿವರು ಇದನ್ನು ಒಪ್ಪಿಕೊಂಡು ದತ್ತಾಂಶ ಸರಿಯಾಗಿದೆ ಎಂದು ಸಚಿವ ಸಂಪುಟದಲ್ಲಿಯೂ ಹೇಳಿದ್ದರು. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮರು ಸಮೀಕ್ಷೆಗೆ ಸೂಚಿಸುತ್ತಿದ್ದಂತೆ ಕೇಳಿಕೊಂಡು ವಾಪಸ್ ಆಗಿರುವುದು ಹಾಸ್ಯಾಸ್ಪದ. ಗಣತಿಗೆ ವ್ಯಯಿಸಿದ ಹಣಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.