ರೈತರ ಆತ್ಮಹತ್ಯೆ, ಪರಿಹಾರ ವಿಳಂಬಕ್ಕೆ ಸಿಎಂ ಸಿದ್ದರಾಮಯ್ಯ ಗರಂ

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 1609 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆಗೆ ಸಾಲಬಾಧೆ ಪ್ರಮುಖ ಕಾರಣವಾಗಿದೆ. ಕೃಷಿಯಲ್ಲಿ ಹಾಗೂ ಬೆಳೆ ನಷ್ಟವನ್ನು ಸರಿಪಡಿಸಿಕೊಳ್ಳಲು ಹಾಗೂ ಇತರ ಕಾರಣಗಳಿಗಾಗಿ ಸಾಲ ಪಡೆದುಕೊಂಡ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.;

Update: 2025-05-30 08:17 GMT

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ಆದಷ್ಟು ಬೇಗ ಬಗೆಹರಿಸಿ ಪರಿಹಾರ ಒದಗಿಸಿ ಎಂದು ಅಧಿಕಾರಿಗಳಿಗೆ  ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಶುಕ್ರವಾರ(ಮೇ30)  ವಿಧಾನಸೌಧದಲ್ಲಿ ನಡೆದ ರಾಜ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಂದ ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿ ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ‌ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು ಶೀಘ್ರವೇ ಪರಿಹಾರ ನೀಡುವಂತೆ ತಿಳಿಸಿದರು.

ಎರಡು ವರ್ಷಗಳಲ್ಲಿ 1609 ರೈತರು ಆತ್ಮಹತ್ಯೆಗೆ ಶರಣು

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 1609 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆಗೆ ಸಾಲಬಾಧೆ ಪ್ರಮುಖ ಕಾರಣವಾಗಿದೆ. ಕೃಷಿಯಲ್ಲಿ ಹಾಗೂ ಬೆಳೆ ನಷ್ಟವನ್ನು ಸರಿಪಡಿಸಿಕೊಳ್ಳಲು ಹಾಗೂ ಇತರ ಕಾರಣಗಳಿಗಾಗಿ ಸಾಲ ಪಡೆದುಕೊಂಡ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 2023 ರಿಂದ 24ನೇ ಸಾಲಿನಲ್ಲಿ 1082 ಮಂದಿ ಹಾಗೂ 2024 ರಿಂದ 25ನೇ ಸಾಲಿನಲ್ಲಿ 527 ಮಂದಿ ರಾಜ್ಯದಲ್ಲಿ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಯಾವ ಜಿಲ್ಲೆಯಲ್ಲಿ ಎಷ್ಟು ಆತ್ಮಹತ್ಯೆ?

ಬಾಗಲಕೋಟೆ 53, ಬಳ್ಳಾರಿ 20, ಬೆಳಗಾವಿ 144, ಬೀದರ್ 96, ಚಾಮರಾಜನಗರ 1, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 81, ಚಿತ್ರದುರ್ಗ 48, ದಕ್ಷಿಣ ಕನ್ನಡ 9, ದಾವಣಗೆರೆ 76, ಧಾರವಾಡ 101, ಗದಗ 44, ಹಾಸನ 63, ಹಾವೇರಿ 179, ಕಲಬುರ್ಗಿ 106, ಕೊಡಗು 9, ಕೊಪ್ಪಳ 33, ಮಂಡ್ಯ 61, ಮೈಸೂರು 109, ರಾಯಚೂರು 31, ರಾಮನಗರ 9, ಶಿವಮೊಗ್ಗ 83, ತುಮಕೂರು 26, ಉತ್ತರ ಕನ್ನಡ 16, ವಿಜಯಪುರ 75, ವಿಜಯನಗರ 38 ಹಿಂಗೂ ಯಾದಗಿರಿಯಲ್ಲಿ 92 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯದಲ್ಲಿ ಕಂದಾಯ ಗ್ರಾಮಗಳ ಘೋಷಣೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ ಇನ್ನೂ ಬಾಕಿಯುಳಿದಿರುವ ಕಂದಾಯ ಗ್ರಾಮಗಳನ್ನು ಘೋಷಿಸುವ ಕಾರ್ಯ ಮುಂದಿನ 6ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಬಗರ್ ಹುಕುಂ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸಬೇಕು. ಇದು ಯಾಕೆ ಕಡಿಮೆಯಾಗುತ್ತಿದೆ? ಪೋಡಿಮುಕ್ತ ಅಭಿಯಾನ ನಿರಂತರವಾಗಿ ಮುಂದುವರೆಸಬೇಕು. ಶೇ. 63ರಷ್ಟು ಪೋಡಿಮುಕ್ತ ಆಗಿದ್ದು, ಇದರಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದರು. 

ರೈತರಿಂದ ಅರಣ್ಯ ಹಕ್ಕುಗಳಿಗಾಗಿ 2,95,176 ಅರ್ಜಿಗಳು ಸಲ್ಲಿಕೆಯಾಗಿದ್ದು, 16,700 ಅರ್ಜಿಗಳು ಮಾತ್ರ ಅರಣ್ಯ ಹಕ್ಕು ಪತ್ರ ಒದಗಿಸಲಾಗಿದೆ. ಇದನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪವಿಭಾಗಧಿಕಾರಿಗಳು ಕೋರ್ಟ್‌ಗಳಲ್ಲಿ ಪ್ರಕರಣಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜೇಷ್ಠತೆ ಆಧಾರದ ಮೇಲೆ ತೀರ್ಮಾನ ಮಾಡಬೇಕು. ಕಂದಾಯ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಮುಂದಕ್ಕೆ ಹಾಕುವ ಪ್ರವೃತ್ತಿ ಇರಬಾರದು. ಇದರಿಂದ ರೈತರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು. 

Tags:    

Similar News