ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ |ಡಿಡಿಪಿಐಗಳಿಗೆ ನೋಟಿಸ್‌ ನೀಡಲು ಸಿಎಂ ಸೂಚನೆ

ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಗಳ ಉಪ ನಿರ್ದೇಶಕರಿಗೆ ನೋಟಿಸ್‌ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ಶಿಕ್ಷಕರು, ಸಿಬ್ಬಂದಿ ಕೊರತೆ ಎಂದು ಕಾರಣ ಹೇಳಬೇಡಿ ಎಂದು ತಾಕೀತು ಮಾಡಿದರು.;

Update: 2025-05-31 09:43 GMT

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ‌ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನೋಟಿಸ್‌ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೂಚಿಸಿದರು. ಒಂದು ವೇಳೆ ನೋಟಿಸ್‌ಗೆ ಕೊಟ್ಟ ಉತ್ತರ ಸಮರ್ಪಕ‌ವಾಗಿ ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಶನಿವಾರ ವಿಧಾನಸೌಧದಲ್ಲಿ ನಡೆದ ಎರಡನೇ ದಿನದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವುದಕ್ಕೆ ಶಿಕ್ಷಕರು, ಸಿಬ್ಬಂದಿ ಕೊರತೆ ಎಂಬ ಕಾರಣ ಹೇಳಬೇಡಿ. ದಕ್ಷಿಣ ಕನ್ನಡ, ಉಡುಪಿ ಸೇರಿ ಇತರೆ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಹೀಗಿರುವಾಗ ಬೇರೆ ಜಿಲ್ಲೆಗಳಲ್ಲಿ ಏಕೆ ಉತ್ತಮ ಫಲಿತಾಂಶ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಕಡಿಮೆ ಫಲಿತಾಂಶ ಬಂದಿರುವುದಕ್ಕೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಪರೀಕ್ಷಾ ಫಲಿತಾಂಶ ಮತ್ತು ಮಕ್ಕಳ ದಾಖಲಾತಿಯಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶ ಪಡೆದಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮುಂದಿನ ಶೈಕ್ಷಣಿಕ ಪರೀಕ್ಷೆ ವೇಳೆಗೆ ಪರಿಸ್ಥಿತಿ ಉತ್ತಮಪಡಿಸಬೇಕು ಎಂದು ನಿರ್ದೇಶಿಸಿದರು.   

ಅನಿರೀಕ್ಷಿತ ಭೇಟಿ ನೀಡಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಡಿಡಿಪಿಐಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೋ, ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಬೇಕು. ಫಲಿತಾಂಶಕ್ಕೆ ಇಲ್ಲಸಲ್ಲದ ನೆಪ ಹೇಳಬೇಡಿ. ಡಿಡಿಪಿಐಗಳು ಹಾಗೂ ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡಿದರೆ ಒಳ್ಳೆಯ ಫಲಿತಾಂಶ ಬರಲಿದೆ ಎಂದು ತಿಳಿಸಿದರು. 

ದಾಖಲಾತಿ ಕುಸಿಯಲು ಕಾರಣವೇನು?

ಸರ್ಕಾರವು ಮೊಟ್ಟೆ, ಹಾಲು, ರಾಗಿ ಮಾಲ್ಟ್‌, ಸೋಪು, ಹಾಸ್ಟೆಲ್‌ ಸವಲತ್ತು ನೀಡುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯಲು ಕಾರಣವೇನು. ಪ್ರತಿ ವರ್ಷ ದಾಖಲಾತಿ ಕ್ಷೀಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದಾಖಲಾತಿ ಕಡಿಮೆಯಾಗದಂತೆ ಶಿಕ್ಷಕರು ಹಾಗೂ ಅಧಿಕಾರಿಗಳು ಪೋಷಕರ ಮನವೊಲಿಸಬೇಕು ಎಂದು ಸೂಚಿಸಿದರು.   

ಪ್ರಾಮಾಣಿಕ ಪ್ರಯತ್ನದಿಂದ ಫಲಿತಾಂಶ ಸಾಧ್ಯ

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದ ಕಡೆ ಹೆಚ್ಚಿನ ಆಸಕ್ತಿ ಕೊಡಬೇಕು. ಫಲಿತಾಂಶ ಕಡಿಮೆ ಇರುವುದಕ್ಕೆ ಕಾರಣಗಳು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನವಿದ್ದರೆ ಉತ್ತಮ ಫಲಿತಾಂಶ ಬರಲಿದೆ ಎಂದು ಸಿಎಂ ಹೇಳಿದರು. 

ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಬಂದ ಜಿಲ್ಲೆಗಳು 

ಕೊಪ್ಪಳ ಶೇ. 57.32, ಬೀದರ್‌ ಶೇ. 53.25, ರಾಯಚೂರು ಶೇ. 52.05, ಯಾದಗಿರಿ ಶೇ. 51.06, ವಿಜಯಪುರ ಶೇ. 49.58, ಕಲಬುರಗಿ ಶೇ. 42.43 ರಷ್ಟು ಫಲಿತಾಂಶ ಪಡೆದಿದ್ದು, ಈ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಕ್ತ ಉತ್ತರ ನೀಡಲು ನೋಟಿಸ್‌ ನೀಡುವಂತೆ ಸಿಎಂ ಅವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಏಪ್ರಿಲ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8,42,173 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 3,17,189 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಈ ವರ್ಷ ಒಟ್ಟಾರೆ ರಾಜ್ಯಾದ್ಯಂತ ಶೇ.66 ರಷ್ಟು ಫಲಿತಾಂಶ ಬಂದಿತ್ತು.

Tags:    

Similar News