ಬೆಳಗಾವಿ| ಉರುಸ್ ಮೆರವಣಿಗೆ ವೇಳೆ ಘರ್ಷಣೆ; ಮನೆಗಳ ಮೇಲೆ ಕಲ್ಲು ತೂರಾಟ
ಪ್ರತಿವರ್ಷ ನಡೆಯುವ ಉರುಸ್ ಮೆರವಣಿಗೆ ಸಾಮಾನ್ಯವಾಗಿ ಜಾಲ್ಗಾರಗಲ್ಲಿ ಮತ್ತು ಶನಿವಾರಕೂಟ ಗಲ್ಲಿಯ ಮೂಲಕ ಸಾಗುತ್ತಿತ್ತು. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಮೆರವಣಿಗೆಯು ಖಡಕ್ಗಲ್ಲಿಯ ಮೂಲಕ ಹಾದು ಹೋಗಿದ್ದು ಘಟನೆಗೆ ಕಾರಣವಾಗಿದೆ.
ಕಲ್ಲು ತೂರಾಟ ವಿರೋಧಿಸಿ ಯುವಕರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿದ್ದಿರುವ ಕಲ್ಲು
ಬೆಳಗಾವಿ ನಗರದಲ್ಲಿ ಉರುಸ್ ಮೆರವಣಿಗೆಯ ವೇಳೆ ಕಲ್ಲುತೂರಾಟ ಸಂಭವಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ (ಅ.4) ರಾತ್ರಿ ಖಡೇಬಜಾರ್ನ ಖಡಕ್ಗಲ್ಲಿ ಪ್ರದೇಶದಲ್ಲಿ ಆಕಸ್ಮಿಕವಾಗಿ ಮನೆಗಳ ಮುಂದೆ ಕಲ್ಲು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಘಟನೆಯ ಹಿನ್ನೆಲೆ
ಪ್ರತಿ ವರ್ಷ ನಡೆಯುವ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಸಾಮಾನ್ಯವಾಗಿ ಜಾಲ್ಗಾರಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿ ಮೂಲಕ ಸಾಗುತ್ತಿತ್ತು. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಮೆರವಣಿಗೆಯು ಖಡಕ್ಗಲ್ಲಿಯ ಮೂಲಕ ಹಾದು ಹೋಗಿದೆ. ಇದೇ ಘರ್ಷಣೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ಮೆರವಣಿಗೆಯಲ್ಲಿ ಕೆಲ ಯುವಕರು ಘೋಷಣೆ ಕೂಗಿದ್ದು, ಇದಕ್ಕೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಅಪರಿಚಿತರು ಕಲ್ಲುತೂರಾಟ ನಡೆಸಿದರೆಂದು ಮಾಹಿತಿ ಲಭ್ಯವಾಗಿದೆ.
ಅಶಾಂತಿ ಸೃಷ್ಟಿಸಲು ಯತ್ನ
ಸ್ಥಳೀಯರ ಪ್ರಕಾರ, ಕೆಲವರು ಕಲ್ಲುತೂರಾಟ ನಡೆಸಿದ್ದಲ್ಲದೇ ತಲ್ವಾರ್ ಪ್ರದರ್ಶಿಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಪ್ರದೇಶದಲ್ಲಿ ಕ್ಷಣಾರ್ಧದಲ್ಲಿ ಉದ್ವಿಗ್ನ ವಾತಾವರಣ ಆವರಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮತ್ತು ಡಿಸಿಪಿ ನಾರಾಯಣ ಭರಮನಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕಲ್ಲುತೂರಾಟ ಮತ್ತು ಗಲಭೆ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಗಲ್ಲಿಯಲ್ಲಿ ಪೊಲೀಸ್ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್ಪಿ ಪಡೆಯನ್ನು ಕರೆಸಿಕೊಳ್ಳಲಾಗಿದೆ. ಸಾರ್ವಜನಿಕರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಖಡಕ್ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.