ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ರಾಜ್ಯ ಸರ್ಕಾರದ ವರದಿ ಬಹಿರಂಗ; ಯಾರು ಹೊಣೆಗಾರರು?
ಜುಲೈ 8ರಂದು, ಈ ವರದಿಯನ್ನು ಗೌಪ್ಯವಾಗಿಡುವ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು, ನಂತರ ವರದಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರತಿವಾದಿಗಳಿಗೆ ಹಂಚಲು ನಿರ್ದೇಶಿಸಿತ್ತು.;
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳು ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಸ್ಥಿತಿಗತಿ ವರದಿ ಬಹಿರಂಗಗೊಂಡಿದೆ. ಕಾರ್ಯಕ್ರಮದ ಕೆಟ್ಟ ಆಯೋಜನೆಯೇ ದುರ್ಘಟನೆಗೆ ಮುಖ್ಯ ಕಾರಣ ಎಂದು ವರದಿ ಹೇಳುತ್ತದೆ. ಜುಲೈ 8ರಂದು, ಈ ವರದಿಯನ್ನು ಗೌಪ್ಯವಾಗಿಡುವ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು, ನಂತರ ವರದಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರತಿವಾದಿಗಳಿಗೆ ಹಂಚಲು ನಿರ್ದೇಶಿಸಿತ್ತು.
ಕಾರ್ಯಕ್ರಮ ಆಯೋಜಕರು ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಭಾವನೆ ಮೂಡಿಸಿದ್ದರು. ಆದರೆ, ಸಂದರ್ಭ ಬಂದಾಗ ಅದನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಸಂಘಟಕರು ಮುಂಚಿತವಾಗಿ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದರೆ, ಸಕ್ಷಮ ಪ್ರಾಧಿಕಾರವು ತುರ್ತು ವೈದ್ಯಕೀಯ ವ್ಯವಸ್ಥೆಗಳನ್ನು ಯೋಜಿಸಲು ಸಾಧ್ಯವಾಗುತ್ತಿತ್ತು. ಆರ್ಸಿಬಿ/ಡಿಎನ್ಎ/ಕೆಎಸ್ಸಿಎ ಸಂಸ್ಥೆಗಳು ವೈದ್ಯಕೀಯ ವ್ಯವಸ್ಥೆ ಕಲ್ಪಿಸುವುದು ತಮ್ಮ ಪ್ರಾಥಮಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿದ್ದರೂ ಅದನ್ನು ಮಾಡಿರಲಿಲ್ಲ ಎಂದು ವರದಿ ಆರೋಪಿಸಿದೆ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ಆಂಬುಲೆನ್ಸ್, ಅಗ್ನಿಶಾಮಕ ದಳ, ಹಾಗೂ ವೈದ್ಯರು, ಶುಶ್ರೂಷಕಿಯರನ್ನು ಒಳಗೊಂಡ ಎರಡು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಎಷ್ಟು ಜನರು ಬರಬಹುದು ಎಂದು ಅಂದಾಜಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ವಿಶ್ಲೇಷಣೆ ನಡೆಸಲು ಸಾಧ್ಯವಾಗಿರಲಿಲ್ಲ. ಜೂನ್ 4 ರಂದು ಜನಸಂದಣಿ ಅನಿರೀಕ್ಷಿತವಾಗಿ ಹೆಚ್ಚಾಗಿತ್ತು. “ಸಂಭಾವ್ಯ ಜನಸಂದಣಿಯ ಗಾತ್ರದ ಪ್ರಾಯೋಗಿಕ ಅಂದಾಜು ಮಾಡಲು ನಗರ ಪೊಲೀಸರಿಗೆ ಸೂಕ್ತ ಸಮಯ ನೀಡಲಾಗಿರಲಿಲ್ಲ” ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗಾಯಾಳುಗಳಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಿರುವುದು ಮತ್ತು ಅವರನ್ನು ಆಸ್ಪತ್ರೆಗೆ ವರ್ಗಾಯಿಸಿರುವುದರ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ. ಈ ಕುರಿತು ತನಿಖೆ ನಡೆಯುತ್ತಿದ್ದು, ಅದನ್ನು ಕಾಲಕ್ರಮೇಣ ಸಲ್ಲಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಾವನ್ನಪ್ಪಿದವರು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿರುವುದು ಮತ್ತು ಆಸ್ಪತ್ರೆಯ ವೈದ್ಯಕೀಯ ಕಾನೂನು ಮಾಹಿತಿಯನ್ನು ಪಟ್ಟಿ ಸಮೇತ ನೀಡಲಾಗಿದೆ.
ಜೂನ್ 4ರ ಕಾರ್ಯಕ್ರಮದ ಭಾಗವಾಗಿ 654 ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಸಂಚಾರ ದಟ್ಟಣೆ ನಿಯಂತ್ರಿಸಲು ನಿಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಸಂಚಾರದ ಮಾಹಿತಿ, ತಿರುವುಗಳ ಮಾಹಿತಿ ಜೊತೆಗೆ ವಿಜಯೋತ್ಸವ ಯಾತ್ರೆಯ ಮಾಹಿತಿಯನ್ನು ನೀಡಲಾಗಿತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ ಶಾಲೆ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಮಾಹಿತಿ ನೀಡಲಾಗಿತ್ತು. ನಿರ್ದಿಷ್ಟ ನಿಯಂತ್ರಣ ಕೊಠಡಿಯನ್ನೂ ರೂಪಿಸಲಾಗಿತ್ತು. ಕಾಲ್ತುಳಿತ ವರದಿಯಾಗುತ್ತಿದ್ದಂತೆ, 20 ರಾಜ್ಯ ಮೀಸಲು ಪೊಲೀಸ್ ಪಡೆಯ 440 ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಕ್ರೀಡಾಂಗಣದಲ್ಲಿನ ಜನಸಂದಣಿಯನ್ನು ಹೊರ ಹೋಗುವಂತೆ ಮಾಡಲು 200 ತರಬೇತಿಯಲ್ಲಿದ್ದ ಸಿಬ್ಬಂದಿ ಹಾಗೂ ಆರು ಡಿಸಿಪಿಗಳನ್ನು ನಿಯೋಜಿಸಲಾಗಿತ್ತು. “ಬೆಂಗಳೂರು ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಲಭ್ಯ ಇರುವ ಪೊಲೀಸ್ ಸಿಬ್ಬಂದಿಯ ಜೊತೆಗೆ ತಕ್ಷಣ ಘಟನಾ ಸ್ಥಳಕ್ಕೆ ಬಂದು ಜನಸಂದಣಿ ನಿಯಂತ್ರಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದರು” ಎಂದು ವರದಿಯಲ್ಲಿ ಹೇಳಲಾಗಿದೆ.
ಪರವಾನಗಿ ಮತ್ತು ಸಾರ್ವಜನಿಕ ಸಭೆ ಹಾಗೂ ಮೆರವಣಿಗೆ (ಬೆಂಗಳೂರು ನಗರ) ನಿಯಂತ್ರಣ ಆದೇಶ 2009 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾರ್ಗಸೂಚಿಯ ಜೊತೆಗೆ, ಕಾರ್ಯಕ್ರಮಕ್ಕೆ ಬೃಹತ್ ಪ್ರಮಾಣದಲ್ಲಿ ಜನ ಸೇರುವುದನ್ನು ನಿಯಂತ್ರಿಸುವುದಕ್ಕಾಗಿ ಹೊಸ ನಿರ್ದಿಷ್ಟ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.