Caste Census | ಹೊಸ ಸಮೀಕ್ಷೆಯಲ್ಲಿ ಜನಸಂಖ್ಯೆ ವ್ಯತ್ಯಾಸ ಬಂದರೆ ಒಪ್ಪಿಕೊಳ್ಳುತ್ತೇವೆ; ಒಕ್ಕಲಿಗರ ಸಂಘ

ಸರ್ಕಾರದ ಸಮೀಕ್ಷೆಯ ಹೊರತಾಗಿಯೂ ಒಕ್ಕಲಿಗರ ಸಂಘದಿಂದ ಸಮುದಾಯದ ಪ್ರತ್ಯೇಕ ಡಿಜಿಟಲ್ ಸರ್ವೆ ನಡೆಸಲಾಗುವುದು. ಜನಾಂಗದ ಹಿತದೃಷ್ಟಿಯಿಂದ ನಾವು ಸಮೀಕ್ಷೆ ಮಾಡಿಸುತ್ತಿದ್ದೇವೆ ಎಂದು ಒಕ್ಕಲಿಗರ ಸಂಘದ ಕೆಂಚಪ್ಪಗೌಡ ಹೇಳಿದ್ದಾರೆ.;

Update: 2025-06-13 10:43 GMT

ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು

ರಾಜ್ಯದಲ್ಲಿ ಮತ್ತೊಮ್ಮೆ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಡಿ ಸಮುದಾಯದ ಜನಸಂಖ್ಯೆಯಲ್ಲಿ ಏನೇ ವ್ಯತ್ಯಾಸಗಳಾದರೂ ಅದನ್ನು ಒಪ್ಪಿಕೊಳ್ಳುತ್ತೇವೆ. ಮತ್ತೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದರೆ ಒಕ್ಕಲಿಗರ ಸಂಘ ಹೋರಾಟದ ಹಾದಿ ತುಳಿಯಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ. 

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು, ಹೊಸದಾಗಿ ಸಮೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಸರ್ಕಾರದ ಸಮೀಕ್ಷೆಯ ಹೊರತಾಗಿಯೂ ಒಕ್ಕಲಿಗರ ಸಂಘದಿಂದ ಸಮುದಾಯದ ಪ್ರತ್ಯೇಕ ಡಿಜಿಟಲ್ ಸರ್ವೆ ನಡೆಸಲಾಗುವುದು. ಈ ಬಗ್ಗೆ ಆದಿಚುಂಚನಗಿರಿ ಮಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸೂಚನೆ ಮೇರೆಗೆ ಸಮುದಾಯದ ಡಿಜಿಟಲ್ ಸರ್ವೆ ನಡೆಸಲಾಗುವುದು. ಜನಾಂಗದ ಹಿತದೃಷ್ಟಿಯಿಂದ ನಾವು ಸಮೀಕ್ಷೆ ಮಾಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ತಪ್ಪಾದರೆ ಮತ್ತೆ ಹೋರಾಟ

ರಾಜ್ಯ ಸರ್ಕಾರ ಹೊಸದಾಗಿ ನಡೆಸುವ ಜಾತಿಗಣತಿ ಸಮೀಕ್ಷೆಯಲ್ಲಿ ಮತ್ತೆ ತಪ್ಪುಗಳಾದರೆ ಒಕ್ಕಲಿಗರ ಸಂಘ ಹೋರಾಟಕ್ಕೆ ಇಳಿಯಲಿದೆ. ಆಯಾ ಜನಾಂಗಕ್ಕೆ ಸರ್ಕಾರಿ ಸೌಲಭ್ಯಗಳು ಸಿಗಬೇಕಾದರೆ ವೈಜ್ಞಾನಿಕ ರೀತಿಯಲ್ಲಿ ಗಣತಿಯಾಗಬೇಕು. ಕಾಂತರಾಜು ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆದಿರಲಿಲ್ಲ. ಜೊತೆಗೆ ವರದಿ ಅಂಗೀಕರಿಸಲು ವಿಳಂಬವಾಗಿ 10 ವರ್ಷದಷ್ಟು ಹಳೆಯದ್ದಾಗಿತ್ತು. ಹಾಗಾಗಿ ಹೊಸ ಸಮೀಕ್ಷೆಗೆ ಒತ್ತಾಯ ಮಾಡಿದ್ದೆವು. ನಮ್ಮ ಬೇಡಿಕೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮ್ಮತಿಸಿ ಹೊಸ ಸಮೀಕ್ಷೆಗೆ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ.  

ಡಿಜಿಟಲ್, ಆನ್‌ಲೈನ್ ತಂತ್ರಜ್ಞಾನ ಬಳಸಿಕೊಂಡು ಹಳ್ಳಿ, ಗಲ್ಲಿ, ಪಟ್ಟಣಗಳಲ್ಲಿ ಸಮೀಕ್ಷೆ ಮಾಡಬೇಕು. ಸಮೀಕ್ಷೆಗೆ ನಮ್ಮ ಸಮುದಾಯ ಸಹಕಾರ ನೀಡಲಿದ್ದು, ಸ್ವಯಂ ಸೇವಕರನ್ನೂ ನೇಮಿಸುತ್ತೇವೆ ಎಂದು ಕೆಂಚಪ್ಪಗೌಡ ತಿಳಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಗಣತಿ ನಡೆಸಿ

ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಜಾತಿಗಣತಿ ಮಾಡಿಸಿದರೆ ನ್ಯಾಯಸಮ್ಮತವಾಗಿರಲಿದೆ. ಗಣತಿಗೆ ಮೂರು ತಿಂಗಳ ಸಮಯಾವಕಾಶ ಸಾಲುವುದಿಲ್ಲ. ಇನ್ನೂ ಎರಡು ತಿಂಗಳು ಹೆಚ್ಚು ನೀಡಿದರೆ ಅನುಕೂಲವಾಗಲಿದೆ. ವಿರಶೈವ, ಒಕ್ಕಲಿಗ, ಬ್ರಾಹ್ಮಣರು ಈಗಿರುವ ವರದಿಗೆ ವಿರೋಧ ವ್ಯಕ್ತಪಡಿಸಿ ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿದ್ದವು ಎಂದು ಕೆಂಚಪ್ಪಗೌಡ ಹೇಳಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಹತ್ತು ವರ್ಷಗಳಷ್ಟು ಹಳೆಯ ಹಾಗೂ ಕಾರ್ಯದರ್ಶಿ ಸಹಿ ಇಲ್ಲದೆ ಗೊಂದಲಕಾರಿಯಾಗಿರುವ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದೆವು. ಈಗ ಹೊಸದಾಗಿ ಜಾತಿಗಣತಿ ಮಾಡಲಿದ್ದು, ಆಧಾರ್‌ ಲಿಂಕ್‌ ಜೋಡಣೆ ಮಾಡಿ ಗಣತಿ ನಡೆಸಬೇಕು. ಜಿಯೋ ಟ್ಯಾಗ್ ಮಾಡಿದರೆ ಆಯಾ ಕುಟುಂಬದ ಆರ್ಥಿಕತೆಯ ಮಾಹಿತಿಯೂ ಪಡೆಯಬಹುದು. ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಕರಾರುವಕ್ಕಾಗಿ ಜಾತಿಗಣತಿ ಮಾಡಿದಾಗ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಘದ ಗೌರವಾಧ್ಯಕ್ಷ ಎಲುವಳ್ಳಿ ರಮೇಶ್ ಮಾತನಾಡಿ, ಮನೆ ಮನೆಗೂ ಭೇಟಿ ನೀಡಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು. ಸಮೀಕ್ಷೆ ನಂತರ ಆಕ್ಷೇಪಣಾ ಸಲ್ಲಿಕೆಗೂ ಅವಕಾಶ ಇರಬೇಕು. ಎಲ್ಲಾ ಸಮುದಾಯಗಳಿಗೂ ನ್ಯಾಯ ದೊರಕುವ ರೀತಿ ಇರಬೇಕು. ಜಾತಿಗಣತಿ ಸಂದರ್ಭದಲ್ಲಿ ಉಪಜಾತಿಗಳ ಬದಲಾಗಿ ಒಕ್ಕಲಿಗ ಎಂಬುದನ್ನೇ ನಮೂದಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಂಘದ ಕಾರ್ಯಾಧ್ಯಕ್ಷ ಬಿ.ಪಿ.ಮಂಜೇಗೌಡ, ಉಪಾಧ್ಯಕ್ಷ ಎಲ್ ಶ್ರೀನಿವಾಸ್, ಖರೀದಿ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ಒಕ್ಕಲಿಗರ ಸಂಘದ ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜೆ.ರಾಜು ಇದ್ದರು.

Tags:    

Similar News