Caste Census | ಇಂದು ಸಚಿವ ಸಂಪುಟ ಸಭೆ; ಜಾತಿಗಣತಿ ವರದಿ ಕುರಿತು ನಿರ್ಣಾಯಕ ಚರ್ಚೆ
ಕೇಂದ್ರ ಸರ್ಕಾರ ಮುಂದಿನ ಜನಗಣತಿ ವೇಳೆ ಜಾತಿ ಗಣತಿಯನ್ನೂ ಮಾಡುವುದಾಗಿ ಹೇಳಿರುವ ಕಾರಣ ವರದಿ ಜಾರಿ ಮಾಡಲೇ ಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿ ಇಂದಿನ ಸಭೆ ನಿರ್ಣಾಯಕ ಎನ್ನಲಾಗುತ್ತಿದೆ.;
ತೀವ್ರ ಕುತೂಹಲ ಕೆರಳಿಸಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.
ಏ. 11ರಂದು ವರದಿಯನ್ನು ಸ್ವೀಕರಿಸಿದ್ದ ರಾಜ್ಯ ಸರ್ಕಾರ ಏ. 17ರಂದು ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ, ಸಚಿವರ ಅಭಿಪ್ರಾಯ ಸಂಗ್ರಹಿಸಿತ್ತು.
ಸಂಪುಟ ಸಭೆಯಲ್ಲಿ ವರದಿ ಅಂಕಿ ಅಂಶಗಳಿಗೆ ಕೆಲ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಮೇ 2ರಂದು ಮತ್ತೊಂದು ಸಭೆಯನ್ನು ಕರೆಯಲಾಗಿತ್ತು. ಆದರೆ, ಪ್ರಬಲ ಜಾತಿಗಳ ಒತ್ತಡ ಹಾಗೂ ಇತರೆ ಕಾರಣಗಳಿಂದ ಸಭೆ ಮುಂದೂಡಲಾಗಿತ್ತು. ಆ ಸಭೆ ಇಂದು (ಶುಕ್ರವಾರ) ಮಧ್ಯಾಹ್ನ ನಡೆಯಲಿದೆ.
ಕೇಂದ್ರ ಸರ್ಕಾರ ಮುಂದಿನ ಜನಗಣತಿ ವೇಳೆ ಜಾತಿ ಗಣತಿಯನ್ನೂ ಮಾಡುವುದಾಗಿ ಹೇಳಿರುವ ಕಾರಣ ವರದಿ ಜಾರಿ ಮಾಡಲೇ ಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿ ಇಂದಿನ ಸಭೆ ನಿರ್ಣಾಯಕ ಎನ್ನಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವರದಿಯನ್ನು ಜಾರಿಗೊಳಿಸಿ ಅದರ ಯಶಸ್ಸನ್ನು ಪಡೆಯುವ ಅವಕಾಶಗಳೂ ಕೂಡ ದೊರೆತಿವೆ.
ಚರ್ಚೆ ಮುಂದೂಡಿಕೆ ಸಾಧ್ಯತೆ?
ಭಾರತ ಹಾಗೂ ಪಾಕಿಸ್ತಾನದ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದರಿಂದ ವರದಿ ಕುರಿತು ಚರ್ಚೆಯನ್ನು ಮುಂದಿನ ಸಭೆಗೆ ಕೊಂಡೊಯ್ಯುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ಸಂಪೂರ್ಣವಾಗಿ ಯುದ್ದದ ಪರಿಸ್ಥಿತಿ ನಿಭಾಯಿಸುತ್ತಿದ್ದು, ರಾಜ್ಯದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಪಾಕಿಸ್ತಾನ ಹಾಗೂ ಭಾರತ ಯುದ್ದದ ಮೇಲೆ ಎಲ್ಲರ ಚಿತ್ತವಿದೆ. ಹಾಗಾಗಿ ಆತುರದಲ್ಲಿ ವರದಿ ಜಾರಿ ಮಾಡದಿರಲು ನಿರ್ಧರಿಸಲಾಗಿದೆ ಎನ್ನಲಾಗಿದೆ.