ಅನ್ನಭಾಗ್ಯಕ್ಕೆ ಹೊಸ ರೂಪ: 5 ಕೆ.ಜಿ ಅಕ್ಕಿ ಬದಲು 'ಇಂದಿರಾ ಆಹಾರ ಕಿಟ್' ವಿತರಣೆಗೆ ಸಂಪುಟ ಅಸ್ತು

ಹೊಸ 'ಇಂದಿರಾ ಆಹಾರ ಕಿಟ್' ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಮತ್ತು ಸಕ್ಕರೆಯಂತಹ ಅಗತ್ಯ ಆಹಾರ ಪದಾರ್ಥಗಳು ಇರಲಿವೆ. ಇದರಿಂದ ಬಡ ಕುಟುಂಬಗಳಿಗೆ ಸಮತೋಲಿತ ಆಹಾರ ದೊರೆಯಲಿದೆ ಎಂಬುದು ಸರ್ಕಾರದ ಚಿಂತನೆ.

Update: 2025-10-09 09:47 GMT

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಹೊಸ ರೂಪ ನೀಡಲು ಸಚಿವ ಸಂಪುಟ ಸಭೆ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಯೋಜನೆಯಡಿ ವಿತರಿಸಲಾಗುತ್ತಿದ್ದ 5 ಕೆ.ಜಿ ಅಕ್ಕಿಯ ಬದಲಾಗಿ, ಇನ್ನು ಮುಂದೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒಳಗೊಂಡ 'ಇಂದಿರಾ ಆಹಾರ ಕಿಟ್' ವಿತರಿಸಲು ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯು ಅಕ್ರಮವಾಗಿ ಕಳ್ಳಸಾಗಾಟವಾಗುತ್ತಿದೆ ಮತ್ತು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹಾಗೂ ಫಲಾನುಭವಿಗಳಿಗೆ ಕೇವಲ ಅಕ್ಕಿಯ ಬದಲು ಇನ್ನಷ್ಟು ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಸರ್ಕಾರ ಈ ಬದಲಾವಣೆ ಮಾಡಿದೆ.

ಹೊಸ 'ಇಂದಿರಾ ಆಹಾರ ಕಿಟ್' ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಮತ್ತು ಸಕ್ಕರೆಯಂತಹ ಅಗತ್ಯ ಆಹಾರ ಪದಾರ್ಥಗಳು ಇರಲಿವೆ. ಇದರಿಂದ ಬಡ ಕುಟುಂಬಗಳಿಗೆ ಸಮತೋಲಿತ ಆಹಾರ ದೊರೆಯಲಿದೆ ಎಂಬುದು ಸರ್ಕಾರದ ಚಿಂತನೆ. ಈ ಕಿಟ್ ವಿತರಣೆಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ದುರ್ಬಳಕೆಯನ್ನು ತಡೆಯುವುದರ ಜೊತೆಗೆ, ಜನರಿಗೆ ನೇರವಾಗಿ ಪೌಷ್ಟಿಕ ಆಹಾರ ತಲುಪಿಸಿದಂತಾಗುತ್ತದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ

ಉದ್ಯೋಗಸ್ಥ ಮಹಿಳೆಯರಿಗೆ ರಾಜ್ಯ ಸರ್ಕಾರವು ಮಹತ್ವದ ಕೊಡುಗೆಯನ್ನು ನೀಡಲು ಮುಂದಾಗಿದ್ದು, ಪ್ರತಿ ತಿಂಗಳು ವೇತನ ಸಹಿತ ಒಂದು ದಿನದ ಋತುಚಕ್ರ ರಜೆ ನೀಡುವ ನೀತಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ನೀತಿಯು ರಾಜ್ಯದ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು (MNC), ಮಾಹಿತಿ ತಂತ್ರಜ್ಞಾನ (IT) ಮತ್ತು ಇತರ ಖಾಸಗಿ ಕೈಗಾರಿಕಾ ವಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಈ ಮೂಲಕ ಸರ್ಕಾರವು ಮಹಿಳಾ ಸ್ನೇಹಿ ಕೆಲಸದ ವಾತಾವರಣವನ್ನು ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದೆ.

ವಿದ್ಯುತ್-ನೀರಿನ ಸಂಪರ್ಕಕ್ಕೆ ಎನ್‌ಒಸಿ

ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರ (NOC) ನೀಡುವ ವಿಚಾರವಾಗಿಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ನಿಯಮವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಸಾಧ್ಯತೆಗಳ ಕುರಿತು ಸಾಧಕ-ಬಾಧಕಗಳನ್ನು ಚರ್ಚಿಸಲಾಯಿತಾದರೂ, ಯಾವುದೇ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗಿಲ್ಲ. ಈ ವಿಷಯದ ಕುರಿತು ಕಾನೂನು ಇಲಾಖೆಯ ಸಲಹೆ ಪಡೆದು, ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

Tags:    

Similar News