ದ್ವಿಭಾಷಾ ನೀತಿಯಿಂದ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ: ಪುರುಷೋತ್ತಮ ಬಿಳಿಮಲೆ

ಇಂದಿನ ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳನ್ನು ಹಾಗೂ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ, ನಿರ್ದಿಷ್ಟ ಕಾಲಮಿತಿಯಲ್ಲಿ ಹೇಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಮತ್ತು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬಹುದು ಎಂದು ದ್ವಿಭಾಷಾ ವರದಿ ತಿಳಿಸಿದೆ.;

Update: 2025-08-16 08:43 GMT

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಶೋತ್ತಮ ಬಿಳಿಮಲೆ

ಆಧುನಿಕ ಸಮಾಜವು ತಂದೊಡ್ಡುವ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ಹೊಸ ತಲೆಮಾರಿನಲ್ಲಿ ತುಂಬಲು ಸಶಕ್ತವಾಗಿರುವ ರಾಜ್ಯ ಶಿಕ್ಷಣ ನೀತಿಯನ್ನು ರಾಜ್ಯವು ಪೂರ್ತಿಯಾಗಿ ಅಳವಡಿಸಿಕೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ಇಂದಿನ ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳನ್ನು ಹಾಗೂ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ, ನಿರ್ದಿಷ್ಟ ಕಾಲಮಿತಿಯಲ್ಲಿ ಹೇಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಮತ್ತು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬಹುದು. ಸಮಯಬದ್ಧ ಕ್ರಿಯಾಯೋಜನೆಯನ್ನು ಹೊಂದಿರುವ ಅತ್ಯಂತ ವಿಸ್ತೃತ ಹಾಗೂ ಮಹತ್ವದ ರಾಜ್ಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದರೆ ಮುಂದಿನ 10 ವರ್ಷಗಳಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರವು ಅಮೂಲಾಗ್ರವಾಗಿ ಬದಲಾಗಲಿದೆ ಎಂದಿದ್ದಾರೆ.

ಭಾಷಾ ಮಾಧ್ಯಮಕ್ಕೆ ನ್ಯಾಯ

ರಾಜ್ಯ ಶಿಕ್ಷಣ ನೀತಿಯ ವರದಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಭಾಗಗಳಲ್ಲಿ ಭಾಷಾ ಮಾಧ್ಯಮದ ಪ್ರಶ್ನೆಯನ್ನು ಬಹಳ ಗಂಭೀರವಾಗಿ ಪರಿಶೀಲಿಸಿ, ರಾಜ್ಯಕ್ಕೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳುಳ್ಳ ದ್ವಿಭಾಷಾ ನೀತಿಯನ್ನು ಶಿಫಾರಸ್ಸು ಮಾಡಿರುವುದು ಅತ್ಯಂತ ಸಮಯೋಚಿತ. ಭಾಷಾ ಪ್ರಾವೀಣ್ಯತೆಯನ್ನು ಹೆಚ್ಚಿಸಲು ಮತ್ತು ಬೋಧನ ವಿಭಾಗದ ಗುಣಮಟ್ಟವನ್ನು ಉನ್ನತೀಕರಿಸಲು ಭಾಷಾ ಬೋಧನೆ ಹಾಗೂ ತರಬೇತಿ ಕೇಂದ್ರ ಮತ್ತು ಜ್ಞಾನ ಅನುವಾದ ಕೇಂದ್ರಗಳ ಸ್ಥಾಪನೆಗೆ ವರದಿಯು ಒತ್ತಾಯಿಸಿರುವುದು ಐತಿಹಾಸಿಕ ನಿಲುವು. ಸರ್ಕಾರವು ಈ ವರದಿಯನ್ನು ಒಪ್ಪುವ ಮೂಲಕ ಭಾಷೆಯ ಬೆಳವಣಿಗೆಗೆ ಕೈ ಜೋಡಿಸಬೇಕೆಂದಿದ್ದಾರೆ.

ದ್ವಿಭಾಷಾ ನೀತಿ ಶಿಫಾರಸ್ಸು ಅನುಷ್ಠಾನ ಯೋಗ್ಯ

ಆಯೋಗವು ದ್ವಿಭಾಷಾ ನೀತಿಯನ್ನು ಶಿಫಾರಸ್ಸು ಮಾಡುವಾಗ ಕನ್ನಡ ಮತ್ತು ಇಂಗ್ಲಿಷೇತರ ಭಾಷೆಗಳನ್ನು ಕಡೆಗಣಿಸಿಲ್ಲವೆಂಬುದು ಮಹತ್ವದ ವಿಚಾರ, ಈ ವರದಿಯಂತೆ ರಾಜ್ಯ ಭಾಷೆಯಾದ ಕನ್ನಡವು ಮೊದಲನೆಯ ಅಥವಾ ಎರಡನೆಯ ಭಾಷೆಯಾಗಿ ಕಡ್ಡಾಯವಾಗಿ ಉಳಿಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿಯೂ ತಾವು ಇಚ್ಛಿಸುವ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಿರುವುದು ಇವತ್ತಿನ ಸಂಕೀರ್ಣ ಭಾಷಾ ಪರಿಸರದಲ್ಲಿ ಅನುಷ್ಠಾನ ಯೋಗ್ಯವಾಗಿದೆ ಎಂದಿದ್ದಾರೆ.

ತ್ರಿಭಾಷಾ ಸೂತ್ರ ಹಿಂದಿ ಹೇರಿಕೆ

ತ್ರಿಭಾಷಾ ಸೂತ್ರ ಒಂದು ಬಗೆಯಲ್ಲಿ ಹಿಂದಿಯ ಯಜಮಾನಿಕೆಯನ್ನು ಬಲತ್ಕಾರವಾಗಿ ಹೇರುವ ಸೂತ್ರವೇ ಹೊರತು ಅರಿವಿನ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಉತ್ತಮಗೊಳಿಸಲು ಯಾವುದೇ ಸಹಾಯವಾಗಿಲ್ಲವೆಂಬುದನ್ನು ಸಂಶೋಧನೆಗಳೆ ದೃಢಪಡಿಸಿವೆ. ಸಂವಿಧಾನವು ಒಪ್ಪಿರುವ ಎಲ್ಲ 22 ಭಾಷೆಗಳು ರಾಷ್ಟ್ರೀಯ ಭಾಷೆಗಳೆ ಆಗಿದ್ದು, ಸಮಾನತೆಯನ್ನು ಸಾಧಿಸುವ ದಾರಿಯಲ್ಲಿ ಹಿಂದಿಯ ಯಜಮಾನಿಕೆಯನ್ನು ನೀತಿ ಸ್ಪಷ್ಟವಾಗಿ ನಿರಾಕರಿಸಿದೆ ಎಂದು ಹೇಳಿದ್ದಾರೆ.

ಸಂವಿಧಾನ ನಿಷ್ಠನೀತಿ

ಶಿಕ್ಷಣ ನೀತಿಯ ಆಯೋಗದ ಶಿಫಾರಸ್ಸುಗಳು ಮುಖ್ಯವಾಗಿ ಭಾರತೀಯ ಸಂವಿಧಾನ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ 2009, ಕನ್ನಡ ಕಲಿಕಾ ಅಧಿನಿಯಮ 2015 ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 1968, 1986, 1992 ಮತ್ತು 2020ರ ಎಲ್ಲ ಅಂಶಗಳು ಸೇರಿದಂತೆ ಇನ್ನಿತರ ನೀತಿ ಹಾಗೂ ಕಾನೂನುಗಳನ್ನು ಗಮನದಲ್ಲಿರಿಸಿಕೊಂಡು ವರದಿಯನ್ನು ಸಿದ್ಧಪಡಿಸಿರುವುದರಿಂದ ಇದೊಂದು ಸಂವಿಧಾನ ನಿಷ್ಠನೀತಿಯಾಗಿದೆ. ನಿಷ್ಪಕ್ಷಪಾತವಾದ ವರದಿ ಸಲ್ಲಿಕೆಯ ಮೂಲಕ ಆಯೋಗವು ಅನೇಕ ಗೊಂದಲಗಳಿಗೆ ಪರಿಹಾರ ದೊರಕಿಸಿದೆ ಎಂದಿದ್ದಾರೆ.

ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ರಾಜ್ಯ ಶಿಕ್ಷಣ ನೀತಿ ಆಯೋಗವು ಡಾ. ಸಂಜಯ ಕೌಲ್, ಡಾ. ರಾಜೇಂದ್ರ ಚೆನ್ನಿ, ಡಾ, ನಟರಾಜ ಬೂದಾಳು, ಡಾ. ಎ ನಾರಾಯಣ, ಡಾ. ವಿನಯಾ ಒಕ್ಕುಂದ, ಡಾ. ಸಂತೋಷ್ ನಾಯಕ್, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಡಾ ವಿ.ಪಿ ನಿರಂಜನಾರಾಧ್ಯ ಮೊದಲಾದ ದಕ್ಷ ಶಿಕ್ಷಣ ತಜ್ಞರುಗಳನ್ನು ಒಳಗೊಂಡಿದ್ದು, ಈ ಸಮಿತಿ ಕಳೆದ 2 ವರ್ಷಗಳಲ್ಲಿ 130ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ಎಚ್ಚರಿಕೆಯಿಂದ ದತ್ತಾಂಶಗಳೊಂದಿಗೆ ವಿಶ್ಲೇಷಿಸಿ ಮಹತ್ವದ ವರದಿಯನ್ನು ಸಿದ್ಧಪಡಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ. ಅತ್ಯಂತ ಪ್ರಜಾಸತ್ತಾತ್ಮಕವಾದ ವರದಿಯು ಪೂರ್ಣಮಟ್ಟದಲ್ಲಿ ಜಾರಿಗೆ ಬರುವುದು ರಾಜ್ಯದ ಶಿಕ್ಷಣ ಕ್ಷೇತ್ರದ ಹಿತದೃಷ್ಠಿಯಿಂದ ಪ್ರಮುಖವೆಂದು ತಿಳಿಸಿದ್ದಾರೆ.

Tags:    

Similar News