"ಬೆಂಗಳೂರು ನಮ್ಮನ್ನು ಕೊಲ್ಲುತ್ತಿದೆ": ಸಿಲಿಕಾನ್ ಸಿಟಿ ತ್ಯಜಿಸಿದ ಉದ್ಯಮಿ ದಂಪತಿಗಳ ಕರುಣಾಜನಕ ವಿಡಿಯೋ ವೈರಲ್!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ದಂಪತಿಗಳ ನಿರ್ಧಾರವನ್ನು ಟೀಕಿಸಿ, ನಗರದ ಅತಿಯಾದ ಜನಸಂಖ್ಯೆಗೆ ಅವರಂತಹವರೇ ಕಾರಣ ಎಂದು ವ್ಯಂಗ್ಯವಾಡಿದ್ದಾರೆ.;

Update: 2025-06-22 11:39 GMT

ಕನಸುಗಳ ನಗರಿ, ಉದ್ಯೋಗಾವಕಾಶಗಳ ರಾಜಧಾನಿ ಬೆಂಗಳೂರು! ಆದರೆ, ಇದೇ ನಗರ ತಮ್ಮ ಆರೋಗ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಎಂದು ಆಕ್ರೋಶಗೊಂಡ ಯುವ ಉದ್ಯಮಿ ದಂಪತಿಯೊಂದು ನಗರವನ್ನೇ ತ್ಯಜಿಸಿರುವ ವಿಡಿಯೋವೊಂದು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಕೇವಲ 27 ವರ್ಷ ವಯಸ್ಸಿನ ಅಸ್ವಿನ್ ಮತ್ತು ಅಪರ್ಣಾ ಎಂಬ ಈ ದಂಪತಿ, ತಮ್ಮ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ 'ಸಿಲಿಕಾನ್ ಸಿಟಿ'ಯನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದು, ಅವರ ಇನ್‌ಸ್ಟಾಗ್ರಾಮ್ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಭಾರಿ ಚರ್ಚೆಗೆ ಕಾರಣವಾಗಿದೆ.

"ನೀವು ನಮ್ಮನ್ನು ದ್ವೇಷಿಸಬಹುದು, ಆದರೆ ಬೆಂಗಳೂರು ನಮ್ಮನ್ನು ತಾರತಮ್ಯದಿಂದ ಕೊಲ್ಲುತ್ತಿದೆ!" – ಈ ಕಟು ವಾಕ್ಯಗಳೊಂದಿಗೆ ವಿಡಿಯೊವನ್ನು ಆರಂಭಿಸುವ ದಂಪತಿಗಳ ಧ್ವನಿಯಲ್ಲಿ ಅಸಹಾಯಕತೆ ಎದ್ದು ಕಾಣುತ್ತದೆ. ನಗರದ ಅದ್ಭುತ ಹವಾಮಾನ, ರೋಮಾಂಚಕ ವಾತಾವರಣ ಮತ್ತು ಸೃಜನಶೀಲ ಸಮುದಾಯವನ್ನು ತಾವು ಮನಸಾರೆ ಪ್ರೀತಿಸಿದ್ದರೂ, ಇಲ್ಲಿನ 'ಅನಾರೋಗ್ಯಕರ' ಗಾಳಿಯು ತಮ್ಮನ್ನು ನಿರಂತರವಾಗಿ ಆಸ್ಪತ್ರೆಗಳತ್ತ ದೂಡುತ್ತಿದೆ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.

"ನನಗೆ ನಿರಂತರ ಉಸಿರಾಟದ ತೊಂದರೆಗಳು, ಚರ್ಮದ ಅಲರ್ಜಿಗಳು ಕಾಡುತ್ತಿವೆ," ಎಂದು ಅಸ್ವಿನ್ ವಿವರಿಸಿದರೆ, "ನಾನು ಬೆಂಗಳೂರಿಗೆ ಬರುವ ಮುನ್ನ ಎಂದಿಗೂ ಶೀತ, ಜ್ವರಕ್ಕೆ ಒಳಗಾಗಿರಲಿಲ್ಲ. ಆದರೆ ಇಲ್ಲಿಗೆ ಬಂದ ನಂತರ ಯಾವಾಗಲೂ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದೇನೆ," ಎಂದು ಅಪರ್ಣಾ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಳಪೆ AQI (ಏರ್ ಕ್ವಾಲಿಟಿ ಇಂಡೆಕ್ಸ್)

ಆರೋಗ್ಯ ಸಮಸ್ಯೆಗಳು ಮಿತಿ ಮೀರಿದಾಗ, ದಂಪತಿಗಳು ತಮ್ಮ ಜೀವನಶೈಲಿಯನ್ನು ಬದಲಾಯಿಸಿ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮಕ್ಕೆ ಮೊರೆ ಹೋಗಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆಗ, ಅವರು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ದತ್ತ ಗಮನ ಹರಿಸಿದಾಗ ಆಘಾತಕಾರಿ ಸತ್ಯಾಂಶ ಬಯಲಾಗಿದೆ. ಫೆಬ್ರವರಿಯಲ್ಲಿ, ನಗರದ AQI 297ಕ್ಕೆ ತಲುಪಿತ್ತು, ಇದು "ಅತ್ಯಂತ ಅನಾರೋಗ್ಯಕರ" ಮತ್ತು "ಹಾನಿಕಾರಕ" ಮಟ್ಟಕ್ಕೆ ಸಮೀಪವಾಗಿದೆ.

"ನಮ್ಮ ಬೆಂಗಳೂರು ಅದ್ಭುತವಾಗಿದೆ. ಉದ್ಯಮ ಆರಂಭಿಸಲು ಇದು ಉತ್ತಮ ಸ್ಥಳ. ಆದರೆ,ನಾವು ಸಂಪೂರ್ಣವಾಗಿ ನಾಶವಾಗುವ ಮೊದಲು, ನಾವು ಬೆಂಗಳೂರನ್ನು ತೊರೆದೆವು" ಎಂದು ಅಪರ್ಣಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಬೆಂಬಲ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ದಂಪತಿಗಳ ನಿರ್ಧಾರವನ್ನು ಟೀಕಿಸಿ, ನಗರದ ಅತಿಯಾದ ಜನಸಂಖ್ಯೆಗೆ ಅವರಂತಹವರೇ ಕಾರಣ ಎಂದು ವ್ಯಂಗ್ಯವಾಡಿದ್ದಾರೆ. "ನೀವು ಹೊರಟಿದ್ದಕ್ಕೆ ಧನ್ಯವಾದಗಳು, ಉಳಿದವರಿಗೆ ಗಾಳಿ ಇನ್ನಷ್ಟು ಶುದ್ಧವಾಗುತ್ತದೆ," ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು "ದಯವಿಟ್ಟು ಇತರೂ ಹೊರಟು ಹೋಗಿ, ಬೆಂಗಳೂರು ಜನದಟ್ಟಣೆಗೆ ಸಿಲುಕುವ ಮೊದಲು ಚೆನ್ನಾಗಿತ್ತು" ಎಂದು ನೇರವಾಗಿ ಹೇಳಿದ್ದಾರೆ.

ಬಹುಪಾಲು ನೆಟ್ಟಿಗರು ದಂಪತಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರ ನೋವಿಗೆ ಧ್ವನಿಗೂಡಿಸಿದ್ದಾರೆ. ಹಲವರು ಬೆಂಗಳೂರಿನ ಮಾಲಿನ್ಯ, ಮೂಲಸೌಕರ್ಯಗಳ ಕೊರತೆ ಮತ್ತು ಜೀವನದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ದಂಪತಿಗಳನ್ನು ಟೀಕಿಸುವ ಬದಲು, ನಗರವನ್ನು ಕಾಡುತ್ತಿರುವ ಈ ಸಮಸ್ಯೆಗಳಿಗೆ ಸರ್ಕಾರವನ್ನು ಜವಾಬ್ದಾರರನ್ನಾಗಿ ಮಾಡಬೇಕು," ಎಂದು ಅನೇಕರು ಸಲಹೆ ನೀಡಿದ್ದಾರೆ.

Tags:    

Similar News